ತಂತ್ರಜ್ಞಾನದಿಂದ ಸಾಮಾನ್ಯ ಜನರು ಸಬಲೀಕರಣಗೊಂಡಿದ್ದಾರೆ: ಮೋದಿ
ದುಬೈ, ಫೆಬ್ರವರಿ 11: ಮಧ್ಯ ಪೂರ್ವ ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ದುಬೈನಲ್ಲಿ ನಡೆದ 6ನೇ 'ಜಾಗತಿಕ ಸರ್ಕಾರಿ ಶೃಂಗಸಭೆ'ಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು.
ಶೃಂಗಸಭೆಯಲ್ಲಿ ಪ್ರಧಾನಿ ದಿಕ್ಸೂಚಿ ಭಾಷಣ ಮಾಡಿದರು. "6ನೇ ಜಾಗತಿಕ ಸರ್ಕಾರಿ ಶೃಂಗಸಭೆಗೆ ನನ್ನನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವುದು ನನಗೆ ಮಾತ್ರವಲ್ಲ 125 ಕೋಟಿ ಭಾರತಿಯರಿಗೆ ಹೆಮ್ಮೆಯಾಗಿದೆ," ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಾಗತಿಕ ನಾಯಕರ ಮುಂದೆ ಭಾರತದ ಸಾಧನೆಯನ್ನು ತೆರೆದಿಟ್ಟ ಅವರು, "ಕಳೆದ 25 ವರ್ಷಗಳಲ್ಲಿ ಭಾರತದಲ್ಲಿ ಬಾಣಂತಿಯರ ಸಾವಿನ ಪ್ರಮಾಣ ಮೂರರಲ್ಲಿ ಒಂದು ಭಾಗ ಕಡಿಮೆಯಾಗಿದೆ. ಜಾಗತಿಕವಾಗಿ ಎರಡರಲ್ಲಿ ಒಂದು ಭಾಗ ಕಡಿಮೆ ಆಗಿದೆ," ಎಂದು ಹೇಳಿದರು.
"ಆಲೋಚನೆಯ ವೇಗದಲ್ಲಿ ತಂತ್ರಜ್ಞಾನ ಬದಲಾಗುತ್ತಿದೆ. ತಂತ್ರಜ್ಞಾನ ಸಾಮಾನ್ಯ ಜನರನ್ನು ಸಬಲೀಕರಣಗೊಳಿಸಿದೆ," ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
ನಾವು ಆರು ಆರ್ ಗಳನ್ನು ಪಾಲಿಸಬೇಕು ಎಂದ ಪ್ರಧಾನಿ ನರೇಂದ್ರ ಮೋದಿ, "ಮಿತ ಬಳಕೆ, ಪುನರ್ ಬಳಕೆ, ಮರುಬಳಕೆ, ಮರು ವಿನ್ಯಾಸ, ಚೇತರಿಕೆ, ಮರು ಉತ್ಪಾದನೆ ಮಾಡಬೇಕು (reduce, reuse, recycle, recovery, redesign and remanufacture) ಇದರಿಂದ ಆನಂದ (rejoice) ವನ್ನು ಪಡೆಯಬಹುದು," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
"ಇವತ್ತಿಗೂ ಎಲ್ಲಾ ಅಭಿವೃದ್ಧಿಗಳಾಚೆಗೂ ಬಡತನ ಮತ್ತು ಅಪೌಷ್ಠಿಕತೆಯನ್ನು ನಿವಾರಿಸಲು ಸಾಧ್ಯವಾಗಿಲ್ಲ. ಇನ್ನೊಂದು ಕಡೆ ನಾವು ದೊಡ್ಡ ಮೊತ್ತದ ಹಣ ಮತ್ತು ಸಮಯವನ್ನು ಮಿಸೈಲ್ ಮತ್ತು ಬಾಂಬ್ ಗಳ ಮೇಲೆ ಹೂಡಿಕೆ ಮಾಡುತ್ತಿದ್ದೇವೆ. ನಾವು ತಂತ್ರಜ್ಞಾನವನ್ನು ಅಭಿವೃದ್ಧಿಗೆ ಬಳಕೆ ಮಾಡಬೇಕು ಮತ್ತು ವಿನಾಶಕ್ಕೆ ಬಳಸದಂತೆ ಎಚ್ಚರಿಕೆಯಿಂದ ಇರಬೇಕು," ಎಂದು ಅವರು ತಿಳಿಸಿದರು.
ಶೃಂಗಸಭೆಯಲ್ಲಿ ಪಾಲ್ಗೊಂಡ ನಂತರ ಅಬುಧಾಬಿ ದೊರೆ ಮೊಹಮ್ಮದ್ ಬಿನ್ ಝಯೇದ್ ಅಲ್ ನಹ್ಯಾನ್ ಜತೆ ಮೋದಿ ಪ್ರತ್ಯೇಕ ಮಾತುಕತೆ ನಡೆಸಿದರು. ನಂತರ ಫ್ರಾನ್ಸ್ ಪ್ರಧಾನಿ ಎಡಾರ್ಡ್ ಫಿಲಿಪ್ಪೆ ಜತೆಯೂ ಚರ್ಚೆ ನಡೆಸಿದರು.
#WATCH Bharatanatyam performance at the World Government Summit in Dubai #ModiInUAE pic.twitter.com/r3wGjCQU23
— ANI (@ANI) February 11, 2018
'ಜಾಗತಿಕ ಸರ್ಕಾರಿ ಶೃಂಗಸಭೆ' ಭಾರತೀಯ ಕಲಾವಿದರಿಂದ ಆಕರ್ಷಕ ಭರತನಾಟ್ಯ ಕಾರ್ಯಕ್ರಮವು ಇದೇ ಸಂದರ್ಭದಲ್ಲಿ ನಡೆಯಿತು.