ಧಾರವಾಡ: ಯಮನೂರು ಸಂತ್ರಸ್ತರಿಗೆ ಶೆಟ್ಟರ್ ಸಾಂತ್ವನ
ಹುಬ್ಬಳ್ಳಿ, ಆಗಸ್ಟ್, 2: ನವಲಗುಂದ ತಾಲೂಕು ಯಮನೂರು ಗ್ರಾಮದಲ್ಲಿ ನಡೆದ ಪೊಲೀಸ್ ದೌರ್ಜನ್ಯವನ್ನು ರಾಜ್ಯ ಸರಕಾರ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಆಗ್ರಹಿಸಿದ್ದಾರೆ.
ಅರೇಕುರಹಟ್ಟಿ, ಯಮನೂರು ಮತ್ತು ಅಳಗವಾಡಿ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದರು. ನ್ಯಾಯಮೂರ್ತಿ ನೇತೃತ್ವದಲ್ಲಿ ಘಟನೆ ತನಿಖೆ ಮಾಡಬೇಕು. ಮತ್ತು ಘಟನೆಗೆ ಕಾರಣರಾದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಶಿಕ್ಷಿಸಬೇಕು ಎಂದರು.[ಯಮನೂರು ಲಾಠಿ ಚಾರ್ಜ್, 6 ಪೇದೆಗಳ ಅಮಾನತು]
ಮೊನ್ನೆ ಎಚ್.ಡಿ.ಕುಮಾರಸ್ವಾಮಿ ಬಂದಿದ್ದರು. ಅವರಿಗೆ ಗ್ರಾಮಸ್ಥರು ತಮಗಾದ ಅನ್ಯಾಯವನ್ನು ವಿವರಿಸಿದರು. ಆದರೆ ನಿನ್ನೆ ಮಾಜಿ ಸಚಿವ ಕೆ.ಎನ್. ಗಡ್ಡಿ ಮತ್ತು ಶಾಸಕ ಎನ್. ಎಚ್. ಕೋನರೆಡ್ಡಿ ಅವರನ್ನು ಗ್ರಾಮಸ್ಥರು ಒಳಗೆ ಬಿಟ್ಟಿರಲಿಲ್ಲ.[ಧಾರವಾಡದಲ್ಲಿ ಖಾಕಿ ದರ್ಪ, ಮಾನವೀಯತೆ ಮರೆತ ಪೊಲೀಸರು]
ಇಂದು ಮಾಜಿ ಮುಖ್ಯಮಂತ್ರಿಯವರನ್ನು ಗ್ರಾಮದಲ್ಲಿ ಒಳಗೇಕೇ ಬಿಟ್ಟುಕೊಂಡಿರಿ ಎಂದು ಕೆಲ ಗ್ರಾಮಸ್ಥರು ಗದ್ದಲವೆಬ್ಬಿಸಿ ರಸ್ತೆ ತಡೆ ಮಾಡಲಾರಂಭಿಸಿದರು. ಹನುಮಂತ ದೊಡ್ಡಮನಿ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಂಧಿತರ ಬಿಡುಗಡೆ ಕ್ರಮ
ಸುಮಾರು 187 ಜನರನ್ನು ಪೊಲೀಸರು ಬಂಧಿಸಿದ್ದು ಪ್ರತಿಯೊಬ್ಬರ ಮೇಲೆ 12 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಲ್ಲದೇ ಎಲ್ಲರಿಗೂ ಜಾಮೀನು ಸಿಗದ ಕೇಸ್ ಗಳನ್ನು ಹಾಕಲಾಗಿದೆ. ಗ್ರಾಮಸ್ಥರು ಬಂಧಿತರನ್ನು ಇಟ್ಟಿದ್ದರೆನ್ನಲಾಗುವ ಬಳ್ಳಾರಿ ಮತ್ತು ಚಿತ್ರದುರ್ಗ ಜೈಲುಗಳಿಗೆ ಹೋದರೆ ಅಲ್ಲಿ ಯಾರನ್ನೂ ಭೇಟಿ ಮಾಡಿಸುತ್ತಿಲ್ಲ ಎಂದು ಶೆಟ್ಟರ್ ಆರೋಪಿಸಿದರು.
ಬಳ್ಳಾರಿಗೆ ಹೋಗುತ್ತೇನೆ
ನಾನು ಬುಧವಾರ ಬಳ್ಳಾರಿ ಜೈಲಿಗೆ ಭೇಟಿ ನೀಡುತ್ತೇನೆ. ಘಟನೆ ಕುರಿತು ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಎಲ್ಲರ ಹೆಸರು ಸಮೇತ ದೂರು ನೀಡಲಾಗುವುದು ಎಂದರು. ನಮ್ಮ ಪಕ್ಷದ ವತಿಯಿಂದ ಧಾರವಾಡದಿಂದ ಸಾಕಷ್ಟು ವಕೀಲರನ್ನು ವ್ಯವಸ್ಥೆ ಮಾಡಿದ್ದು ಕೂಡಲೇ ತಾವು ಬಂಧಿತರ ಜಾಮೀನಿಗೆ ಪ್ರಯತ್ನಿಸುವುದಾಗಿ ಶೆಟ್ಟರ್ ಹೇಳಿದರು.
ಪ್ರಕರಣ ಹಿಂಪಡೆಯಿರಿ
ಅಲ್ಲದೇ ಸರಕಾರ ಬಂಧಿತರನ್ನು ಬೇಷರತ್ ಆಗಿ ಬಿಡುಗಡೆ ಮಾಡಬೇಕು. ಮತ್ತು ಅವರು ಜೀವನ ಪರ್ಯಂತ ಕೋರ್ಟ್ ಗೆ ಅಲೆಯುವುದನ್ನು ತಪ್ಪಿಸಿ ಅವರ ಮೇಲಿದ್ದ ಕೇಸ್ ವಾಪಾಸು ತೆಗೆಯಿಸಬೇಕು ಎಂದರು. ಈ ಅಧಿಕಾರ ಮುಖ್ಯಮಂತ್ರಿಗೆ ಇದ್ದು ಪ್ರಧಾನ ಕಾರ್ಯದರ್ಶಿಯವರಿಗೆ ಮುಖ್ಯಮಂತ್ರಿ ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥರ ತಗಾದೆ
ಶೆಟ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡು ಗ್ರಾಮಸ್ಥರು ನಿಮ್ಮಿಂದಲೇ ನಮ್ಮ ಗ್ರಾಮದ ಜನತೆಯ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಿ ಅವರನ್ನು ಮುತ್ತಿಗೆ ಹಾಕಲಾರಂಭಿಸಿದರು. ತಕ್ಷಣ ಶೆಟ್ಟರ್ ಅವರನ್ನು ಭದ್ರತೆಯಲ್ಲಿ ಕರೆದುಕೊಂಡು ಅಳಗವಾಡಿ ಗ್ರಾಮಕ್ಕೆ ಕರೆದೊಯ್ಯಲಾಯಿತು.
ನಾರಾಯಣ ಗೌಡ ಭೇಟಿ
ಗ್ರಾಮಕ್ಕೆ ಭೇಟಿ ನೀಡಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಪೊಲೀಸ್ ದೌರ್ಜನ್ಯದಿಂದ ಗಾಯಗೊಂಡವರನ್ನು ಸಂತೈಸಿದರು.
ಪ್ರಕರಣ ದಾಖಲು
ಅರೇಕುರಹಟ್ಟಿ, ಯಮನೂರು ಮತ್ತು ಅಳಗವಾಡಿ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಸಂತ್ರಸ್ತ ಮಹಿಳೆಯರನ್ನು ಸಂತೈಸಿದರು. ಇದನ್ನು ವಿಶೇಷ ಪ್ರಕರಣ ಎಂದು ಕೇಸ್ ದಾಖಲಿಸಿಕೊಳ್ಳುವುದಾಗಿ ಮಾನಸಾ ತಿಳಿಸಿದರು.