ಧಾರವಾಡ; ಕೋವಿಡ್ ಸೋಂಕಿತೆ ಸಾವು, ವರದಿ ಕೇಳಿದ ಡಿಸಿ
ಧಾರವಾಡ, ಜನವರಿ 19; ಕಿಮ್ಸ್ ವೇದಾಂತ ಕೋವಿಡ್ ಕೇರ್ ಸೆಂಟರ್ನಲ್ಲಿ ಜನವರಿ 17ರಂದು ಕೋವಿಡ್ ಸೋಂಕಿತ ಮಹಿಳೆ ಮೃತಪಟ್ಟಿದ್ದರು. ನರ್ಸಿಂಗ್ ಸಿಬ್ಬಂದಿ ನಿರ್ಕಕ್ಷ್ಯದಿಂದ ಮಹಿಳೆ ಮೃತಪಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ.
ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಜಿಲ್ಲಾ ಆರೋಗ್ಯಾಧಿಕಾರಿಗೆ ಈ ಕುರಿತು ಸೂಕ್ತ ತನಿಖೆ ನಡೆಸಿ 24 ಗಂಟೆಗಳಲ್ಲಿ ವರದಿ ನೀಡುವಂತೆ ಲಿಖಿವಾಗಿ ಸೂಚನೆ ನೀಡಿದ್ದಾರೆ.
ಏನಿದು ಘಟನೆ?; ಕಿಮ್ಸ್ ವೇದಾಂತ ಕೋವಿಡ್ ಕೇರ್ ಸೆಂಟರ್ನಲ್ಲಿ ಕೋವಿಡ್ ಸೋಂಕಿತ ಮಹಿಳೆ ಐಸಿಯುಗೆ ದಾಖಲಾಗಿದ್ದಳು. ಆದರೆ ಅಲ್ಲಿ ಆಕೆಗೆ ಔಷಧಿಗಳನ್ನು ನೀಡಲು ಯಾವುದೇ ಸಿಬ್ಬಂದಿ ಇರಲಿಲ್ಲ ಎಂಬುದು ಆರೋಪವಾಗಿದೆ. ಜನವರಿ 17ರಂದು ಮಹಿಳೆ ಮೃತಪಟ್ಟಿದ್ದಳು.
ನರ್ಸಿಂಗ್ ಸಿಬ್ಬಂದಿ ಇಲ್ಲ ಎನ್ನುವ ವಿಚಾರವನ್ನು ವೇದಾಂತ ಐಸಿಯು ಶುಶ್ರೂಷಕ ಶ್ರೀನಿವಾಸ್ಗೆ ತಿಳಿಸಲಾಗಿತ್ತು. ಆದರೆ ಅವರು ಸಹ ಜವಾಬ್ದಾರಿ ತೆಗೆದುಕೊಳ್ಳಲಿಲ್ಲ. ಸಿಬ್ಬಂದಿಯನ್ನು ಸಹ ನಿಯೋಜನೆ ಮಾಡಿಲ್ಲ ಎಂಬುದು ಆರೋಪ.
ಇಂತಹ ವಾತಾವರಣದಲ್ಲಿ ಕೆಲಸ ಮಾಡುವುದು ಕಷ್ಟ ದಯವಿಟ್ಟು ಗಮನ ಕೊಡಿ ಎಂದು ಸಿಬ್ಬಂದಿಗಳು ವಾಟ್ಸ್ ಅಪ್ ಮೂಲಕ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪಗೆ ಸಂದೇಶ ಕಳಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಧಾರವಾಡ ಜಿಲ್ಲಾಡಳಿತ ಕೋವಿಡ್ ನಿಯಂತ್ರಣಕ್ಕಾಗಿ ಅಗತ್ಯ ಮುಂಜಾಗೃತೆ ಕ್ರಮಗಳನ್ನು ಕೈಗೊಂಡಿದೆ. ಚಿಕಿತ್ಸೆಗೆ ಅಗತ್ಯವಿರುವ ಬೆಡ್, ವೈದ್ಯಕೀಯ ಸೌಲಭ್ಯ, ಆಕ್ಸಿಜನ್, ಔಷಧಿಗಳ ಸಂಗ್ರಹ ಹಾಗೂ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.

ಕೋವಿಡ್ ಸೋಂಕಿತರಿಗೆ ಅಗತ್ಯವಿರುವ ಆರೋಗ್ಯ ಸೇವೆಗಳನ್ನು ಪೂರೈಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದ್ದು, ಸಿಬ್ಬಂದಿಗೆ ಸಹ ಸೂಚನೆಗಳನ್ನು ನೀಡಲಾಗಿದೆ. ಕೋವಿಡ್ ಸೋಂಕಿತರು ಜಿಲ್ಲಾಡಳಿತ ಆರಂಭಿಸಿರುವ ಉಚಿತ ಸಹಾಯವಾಣಿ +91 8047168111 ಗೆ ಕರೆ ಮಾಡಿ ಹಾಸಿಗೆ ಲಭ್ಯತೆಯ ಮಾಹಿತಿ ಪಡೆಯಬಹುದಾಗಿದೆ.
ಜಿಲ್ಲೆಯಲ್ಲಿ ಎಷ್ಟು ಪ್ರಕರಗಳು; ಧಾರವಾಡ ಜಿಲ್ಲೆಯಲ್ಲಿ ಜನವರಿ 17ರ ತನಕ ಕೋವಿಡ್ ಸೋಂಕಿತರ ಒಟ್ಟು ಸಕ್ರಿಯ ಪ್ರಕರಣ 3,146. ಇದರಲ್ಲಿ 18 ವರ್ಷದೊಳಗಿನ 587 ಮಕ್ಕಳ ಕೋವಿಡ್ ಪ್ರಕರಣಗಳು ಸೇರಿವೆ. 2961 ಸೋಂಕಿತರು ಹೋಂ ಐಸೋಲೆಷನ್ನಲ್ಲಿ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯ ವಿವಿಧ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ 3,137 ಬೆಡ್ಗಳನ್ನು ಮೀಸಲಿಡಲಾಗಿದೆ. ಇಲ್ಲಿಯವರೆಗೆ 142 ಸೋಂಕಿತರು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಮೂರು ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. 250 ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ ಮತ್ತು ಇಲ್ಲಿಯವರೆಗೆ 46 ಜನ ಕೋವಿಡ್ ಸೋಂಕಿತರು ಕೋವಿಡ್ ಕೇರ್ ಸೆಂಟರ್ಗೆ ದಾಖಲಾಗಿದ್ದಾರೆ.
ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ; ಕೋವಿಡ್ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ಕವಿ ಡಾ. ಚನ್ನವೀರ ಕಣವಿ ಆರೋಗ್ಯದಲ್ಲಿ ತುಸು ಮಟ್ಟಿನ ಏರುಪೇರು ಉಂಟಾಗಿದ್ದು, ವೈದ್ಯಕೀಯ. ಆಮ್ಲಜನಕ ಪ್ರಮಾಣವನ್ನು ಮಂಗಳವಾರ 8 ಲೀ. ಗೆ ಹೆಚ್ಚಿಸಲಾಗಿದೆ ಎಂದು ಎಸ್. ಡಿ. ಎಂ. ಆಸ್ಪತ್ರೆ ಹೆಲ್ತ್ ಬುಲೆಟಿನ್ ತಿಳಿಸಿದೆ.
ಡಾ. ಕಣವಿ ಅವರು ಪ್ರತಿದಿನದಂತೆ ಇಂದೂ ಸಹ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅವರಿಗೆ ಉತ್ತಮ ಚಿಕಿತ್ಸೆ ನೀಡಲು ಜಿಲ್ಲಾಡಳಿತ, ಎಸ್.ಡಿ.ಎಮ್ ಆಸ್ಪತ್ರೆಯ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ. ತಜ್ಞ ವೈದ್ಯರೊಂದಿಗೆ ಜಿಲ್ಲಾಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದೂ, ಡಾ.ಕಣವಿ ಅವರ ಆರೋಗ್ಯ ಮಾಹಿತಿ ಪಡೆಯುತ್ತಿದ್ದಾರೆ ಎಂದು ಧಾರವಾಡ ಜಿಲ್ಲಾಡಳಿತ ಹೇಳಿದೆ. ಡಾ. ಕಣವಿ ಅವರು ಬೇಗ ಗುಣಮುಖರಾಗಲಿ ಎಂದು ಜಿಲ್ಲಾಡಳಿತ ಹಾರೈಸಿದೆ.












Click it and Unblock the Notifications