ಕರ್ನಾಟಕ ಕೃಷಿ ವಿವಿಯಲ್ಲಿ ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿದ ಮಹಿಳೆ
ಧಾರವಾಡ, ಮೇ 26 : ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ ಶೇಂಗಾ ಬೀಜವನ್ನು ಸಿಪ್ಪೆಯಿಂದ ಬಿಡಿಸುವ ವಿಭಾಗದಲ್ಲಿ ಅನಾಹುತವೊಂದು ಸಂಭವಿಸಿದೆ. ಇಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಯಂತ್ರಕ್ಕೆ ಸಿಕ್ಕಿ ಹಾಕಿಕೊಂಡು ಗುರುವಾರ ಸಾವನ್ನಪ್ಪಿದ್ದಾರೆ.
ನರೇಂದ್ರ ಗ್ರಾಮದ ಸೈರಾನ್ ಬಿ ಜಮಾದಾರ ಯಂತ್ರಕ್ಕೆ ಸಿಕ್ಕಿ ಮೃತಪಟ್ಟವರು. ಕಳೆದ ಇಪ್ಪತ್ತು ವರ್ಷಗಳಿಂದ ಕೃಷಿ ವಿಶ್ವವಿದ್ಯಾಲಯದಲ್ಲಿ ಅವರು ಕೆಲಸ ಮಾಡುತ್ತಿದ್ದರು. ಶೇಂಗಾ ಬೀಜವನ್ನು ಬೇರ್ಪಡಿಸುವ ಯಂತ್ರಕ್ಕೆ ಸೈರಾನ್ ಬಿ ಜಮಾದಾರ ಅವರ ತಲೆ ಸಿಕ್ಕಿ ಹಾಕಿಕೊಂಡಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಧಾರವಾಡದ ನೆಹರೂ ನಗರದಲ್ಲಿ ಅಕ್ಕನ ಸಾವಿನಿಂದ ನೊಂದು ತಮ್ಮ ಆತ್ಮಹತ್ಯೆ]

ಮಹಿಳೆಯಿಂದ ದೂರು ದಾಖಲು
ಶಾಸಕ ಕೋನರೆಡ್ಡಿ ಅವರ ಬೆಂಬಲಿಗನೊಬ್ಬ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ರಮೀಜಾ ಬೇಗಂ ಎಂಬಾಕೆ ನವಲಗುಂದ ಪೊಲೀಸ್ ಠಾಣೆಯಲ್ಲಿ ಈಚೆಗೆ ದೂರು ದಾಖಲಿಸಿದ್ದಾರೆ. ಶಾಸಕರ ಮನೆಯ ನಿರ್ಮಾಣದ ವೇಳೆ ರಮೀಜಾ ಬೇಗಂ ಅವರ ಮಗ ಹಸನಸಾಬ ಮಕಾನದಾರ ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿದ್ದ.
ತಮ್ಮ ಮಗನಿಗೆ ಕೆಲಸ ಕೊಡಿಸಬೇಕು ಎಂದು ಆಕೆ ಜನಸಂಪರ್ಕ ಕಚೇರಿ ಮುಂಭಾಗ ಧರಣಿ ನಡೆಸುತ್ತಿದ್ದರು. ಆಗ ಶಾಸಕರು ಕಚೇರಿ ಒಳಗೆ ಕರೆದು, ಮಾತುಕತೆ ನಡೆಸಿದ್ದರು. ಆಗ ಮೌಲಾ ಸಾಬ್ ಎಂಬಾತನ ಜತೆಗೆ ರಮೀಜಾ ಬೇಗಂಗೆ ಮಾತಿನ ಚಕಮಕಿ ಆಗಿತ್ತು.[ಕೋಲಾರ: ಮಗಳ ಸಾವಿನ ಸುದ್ದಿ ತಿಳಿದು ತಂದೆ ಹೃದಯಾಘಾತದಿಂದ ಸಾವು]
ಆ ನಂತರ ಅಲ್ಲಿಂದ ಹೊರ ಬಂದ ಮೇಲೂ ಇಬ್ಬರೂ ತಳ್ಳಾಟ ನಡೆಸಿದ್ದರು. ಶಾಸಕರೆದುರೇ ಮೌಲಾ ಸಾಬ್ ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ ಎಂದು ಆಕೆ ದೂರು ನೀಡಿದ್ದರೆ, ರಮೀಜಾ ಬೇಗಂ ನನ್ನನ್ನು ಅವಮಾನಿಸಿದ್ದಾರೆ ಎಂದು ಮೌಲಾ ಸಾಬ್ ಪ್ರತಿ ದೂರು ದಾಖಲಿಸಿದ್ದಾರೆ.












Click it and Unblock the Notifications