ಹುಬ್ಬಳ್ಳಿ: ಓಲಾ, ಊಬರ್ ವಿರುದ್ಧ ಬೀದಿಗಿಳಿದ ಟ್ಯಾಕ್ಸಿ ಚಾಲಕರು
ಹುಬ್ಬಳ್ಳಿ, ಮೇ.12: ಟ್ಯಾಕ್ಸಿ ಚಾಲಕರ ಕುರಿತಾಗಿ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ನಗರದ ಟೌನ್ ಹಾಲ್ ಬಳಿ ಬುಧವಾರ ಖಾಸಗಿ ವಾಹನ ಚಾಲಕ ಮತ್ತು ಮಾಲೀಕರು ಮತ್ತು ಜೈ ಭಾರತ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
40 ಸಾವಿರ ವಾಹನ ಚಾಲಕರನ್ನು ಬೀದಿಗೆ ತಳ್ಳುತ್ತಿರುವ ಸರಕಾರ ಹಾಗೂ ಓಲಾ, ಊಬರ್ ಕ್ಯಾಬ್ ಸಂಸ್ಥೆಯವರು ಸರಕಾರದ ಅನುಮತಿ ಪಡೆಯದೇ ಸಂಸ್ಥೆ ನಡೆಸುತ್ತಿದ್ದಾರೆ. ಈಗಾಗಲೇ ಸರಕಾರ ನೊಟೀಸ್ ಜಾರಿ ಮಾಡಿದ್ದರೂ ಬೇಜವಾಬ್ದಾರಿತನದಿಂದ ಸಂಸ್ಥೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.[ಬೆಂಗಳೂರು : ಪ್ರೀಪೇಯ್ಡ್ ಟ್ಯಾಕ್ಸಿ ದರಗಳು ಹೆಚ್ಚಳ]
ಸಾಮಾಜಿಕ ಜಾಲತಾಣಗಳು ಮತ್ತು ಜಾಹೀರಾತುಗಳ ಮುಖಾಂತರ ಲಕ್ಷ ಲಕ್ಷ ಹಣ ದುಡಿಯಬಹುದು ಎಂಬ ಆಮಿಷವನ್ನೊಡ್ಡಿ ವಾಹನಗಳನ್ನು ನೊಂದಾಯಿಸಿಕೊಂಡು ಚಾಲಕರಿಗೆ ಮತ್ತು ಮಾಲೀಕರಿಗೆ ವಂಚನೆ ಮಾಡುತ್ತಿದ್ದಾರೆ. ಇದನ್ನು ಪ್ರತಿಭಟಿಸಲು ಎಲ್ಲರೂ ಒಂದಾಗಬೇಕಿದೆ ಎಂದು ಹೇಳಿದರು.
ಸರಕಾರ ಈ ಬಗ್ಗೆ ಇದುವರೆಗೂ ಯಾವುದೇ ಕಠಿಣ ಕ್ರಮವನ್ನು ಕೈಗೊಳ್ಳದೇ ಇರುವುದು ಅಧಿಕಾರಿಗಳ ಕೈವಾಡವಿದೆ ಎಂಬ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಖಾಸಗಿ ವಾಹನ ಚಾಲಕರ ಮತ್ತು ಮಾಲೀಕರ ಹೊಟ್ಟೆ ಮೇಲೆ ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ಜೈ ಭಾರತ ವಾಹನ ಮಾಲೀಕರು ಮತ್ತು ಚಾಲಕರ ಸಂಘಕ್ಕೆ ಈಗಾಗಲೆ ಸಾವಿರಾರು ದೂರುಗಳು ಬಂದಿವೆ. ನಾವು ಒಲಾ ಮತ್ತು ಊಬರ್ ನಂತಹ ಸಂಸ್ಥೆಗಳಿಗೆ ಹೋಗಿ ವಿಚಾರಣೆ ಮಾಡಿದಾಗ ಸರಕಾರದ ಅಧಿಕಾರಿಗಳೇ ನಮ್ಮಿಂದ ಪುಕ್ಕಟೆ ವಾಹನ ಪಡೆಯುತ್ತಿದ್ದಾರೆ. ಜೊತೆಗೆ ಅಧಿಕಾರಿಗಳು ಹಾಗೂ ಸರಕಾರ ನಮ್ಮ ಕೈಯಲ್ಲಿದೆ ಎಂಬ ಉಡಾಫೆ ಉತ್ತರ ನೀಡುತ್ತಾರೆ ಎಂದ ಪ್ರತಿಭಟನಾಕಾರರು ಆರೋಪಿಸಿದರು.[ಹುಬ್ಬಳ್ಳಿ: ವಾಟರ್ ಸಪ್ಲೈ ಅಲರ್ಟ್ ಬಂದ್, ತಪ್ಪು ಯಾರದ್ದು?]
ಸರಕಾರ ನಮಗೆ ದಂಢ ವಿಧಿಸಲಿ, ನಾವು ಎಷ್ಟು ದಂಡ ಬೇಕಾದರೂ ಕಟ್ಟಲು ಸಿದ್ಧ. ಓಲಾ ಮತ್ತು ಊಬರ್ ನಂತಹ ಸಂಸ್ಥೆಯಲ್ಲಿ ಸುಮಾರು 40 ಸಾವಿರಕ್ಕಿಂತ ಹೆಚ್ಚು ಚಾಲಕರು ಕಾರ್ಯ ನಿರ್ವಹಿಸುತಿದ್ದು ಚಾಲಕರಿಗೆ ಅನ್ಯಾಯವಾಗದಂತೆ ಸರಕಾರ ಮಧ್ಯ ಪ್ರವೇಶಿಸಬೇಕು ಅದೇ ರೀತಿ 183 ಕಾಯ್ದೆಯನ್ನು ಆರ್.ಟಿ.ಒ. ಅಧಿಕಾರಿಗಳು ಮತ್ತು ಪೊಲೀಸರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಮಾಲೀಕರು ಆರೋಪಿಸಿದರು.
ಚಾಲಕರಿಂದ ಅಧಿಕ ದಂಡ ವಸೂಲಿ ಮಾಡುವುದರ ಜೊತೆಗೆ 6 ತಿಂಗಳ ಜೈಲು ಶಿಕ್ಷೆಗೆ ಗುರಿಪಡಿಸುತ್ತಿದ್ದಾರೆ. ವಾಹನ ಮಾಲೀಕರು ಮತ್ತು ಚಾಲಕರ ಕುಟುಂಬ ಬೀದಿಗೆ ಬೀಳುವಂತಾಗಿದೆ. ಹಾಗಾಗಿ ಸಾರಿಗೆ ಸಚಿವರು ನಮ್ಮ ಈ ಸಂಕಷ್ಟಕ್ಕೆ ಶೀಘ್ರವಾಗಿ ಪರಿಹಾರ ಒದಗಿಸುವುದರ ಜೊತೆಗೆ ಪರವಾನಿಗೆ ಪಡೆಯದೇ ನಡೆಸುತ್ತಿರುವ ಓಲಾ ಮತ್ತು ಊಬರ್ ಸಂಸ್ಥೆಯಂತಹ ನಕಲಿ ಸಂಸ್ಥೆಗೆ ರಾಜ್ಯದಿಂದ ಕೂಡಲೇ ತೊಲಗಿಸಬೇಕೆಂದು ಒತ್ತಾಯಿಸಿದರು. ಜೈ ಭಾರತ ವಾಹನ ಮಾಲೀಕರು ಮತ್ತು ಚಾಲಕರ ಸಂಘದ ರಾಜ್ಯಾಧ್ಯಕ್ಷ ಪ್ರದೀಪ್ ಎನ್. ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.