ಧಾರವಾಡದಲ್ಲಿ ಭಾರೀ ಗಾಳಿ ಮಳೆ: ರಾಜ್ಯ ಹೆದ್ದಾರಿ ಟೋಲ್ನ ಮೇಲ್ಛಾವಣಿಗೆ ಹಾನಿ
ಧಾರವಾಡ, ಮೇ 30: ನಿನ್ನೆ ರಾತ್ರಿ ಧಾರವಾಡ ತಾಲೂಕಿನ ಕೆಲವು ಕಡೆಗಳಲ್ಲಿ ಭಾರೀ ಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ರಾಜ್ಯ ಹೆದ್ದಾರಿಯಲ್ಲಿರುವ ಟೋಲ್ಗೇಟ್ನ ತಗಡಿನ ಮೇಲ್ಛಾವಣಿ ಕಿತ್ತು ಹೋಗಿರುವ ಘಟನೆ ಧಾರವಾಡ ತಾಲೂಕಿನ ಮರೇವಾಡ ರಸ್ತೆಯಲ್ಲಿ ಸಂಭವಿಸಿದೆ.
ನಿನ್ನೆ ಸಂಜೆ ಹೊತ್ತಿಗೆ ಧಾರವಾಡ ತಾಲೂಕಿನ ಕೆಲ ಗ್ರಾಮಗಳಲ್ಲಿ ಭಾರೀ ಗಾಳಿಯೊಂದಿಗೆ ಮಳೆ ಸುರಿದಿದೆ. ಈ ವೇಳೆ ಟೋಲ್ಗೆಟ್ನ ತಗಡಿನ ಮೇಲ್ಛಾವಣಿ ಕಿತ್ತು ಹೋಗಿದೆ. ಕಬ್ಬಿಣದ ರಾಡ್ ಸಮೇತ ತಗಡುಗಳು ಹೊಲದಲ್ಲಿ ಹಾರಿ ಬಿದ್ದಿವೆ. ಇನ್ನು ಗಾಳಿಯ ರಭಸಕ್ಕೆ ಟೋಲ್ಗೇಟ್ ಹತ್ತಿರವೇ ಇದ್ದ ಕೆಲ ವಿದ್ಯುತ್ ಕಂಬಗಳು ಸಹ ಮುರಿದು ಬಿದ್ದಿವೆ.

ತಗಡಿನ ಮೇಲ್ಛಾವಣಿ ಹಾರಿ ಹೋಗುವ ಸಂದರ್ಭದಲ್ಲಿ ಟೋಲ್ ಸಿಬ್ಬಂದಿ ಕೂಡ ಒಳಗಡೆಯೇ ಇದ್ದರು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸಿಲ್ಲ.
ಸೈಟ್ ಕೊಡದ ಡೆವಲಪರ್ಸ್ ಮತ್ತು ಬಿಲ್ಡರ್ಸ್ಗೆ ಜಿಲ್ಲಾ ಗ್ರಾಹಕರ ಆಯೋಗದ ಆದೇಶ
ಧಾರವಾಡ: ಧಾರವಾಡ ರಾಜನಗರದ ನಿವಾಸಿ ವಿಶ್ವನಾಥ ನರೇಂದ್ರ ಎನ್ನುವವರು, ಧಾರವಾಡದ ಬಾಲಾಜಿ ಡೆವಲಪರ್ಸ್ ಮತ್ತು ಬಿಲ್ಡರ್ಸ್ನವರು ಇಟ್ಟಿಗಟ್ಟಿ ಗ್ರಾಮದಲ್ಲಿ ಮಾಡುತ್ತಿದ್ದ ಲೇಔಟ್ನಲ್ಲಿ ಪ್ಲಾಟ್ ನಂ.66 ನ್ನು 5,28,000 ರೂಪಾಯಿಗೆ ಖರೀದಿಸಿದ್ದರು. ಈ ಪೈಕಿ ಅವರು 1,70,000 ರೂಪಾಯಿ ಮುಂಗಡ ಕಟ್ಟಿ ದಿನಾಂಕ 08/01/2014 ರಂದು ಒಪ್ಪಂದ ಪತ್ರ ಮಾಡಿಕೊಂಡಿದ್ದರು.

ದಿನಾಂಕ 06/01/2014 ರಂದು ಉಳಿದ ಹಣವನ್ನು ಪ್ಲಾಟ್ ಅಭಿವೃದ್ಧಿಯಾದ 30 ದಿನಗಳ ಒಳಗೆ ಕೊಡುವಂತೆ ಕರಾರು ಇದ್ದರೂ ಸಹ ಎದುರುದಾರರು ಹಲವಾರು ವರ್ಷ ಕಳೆದರೂ ಎದುರುದಾರರು ಲೇಔಟ್ ಅಭಿವೃದ್ದಿಗೊಳಿಸಿರಲಿಲ್ಲ. ಅಲ್ಲದೇ ಒಪ್ಪಂದದಂತೆ ದೂರುದಾರರಿಗೆ ಆ ಸೈಟಿನ ಖರೀದಿ ಪತ್ರ ಮಾಡಿಕೊಟ್ಟಿರಲಿಲ್ಲ.
8 ವರ್ಷಗಳಾದರೂ ದೂರುದಾರರಿಗೆ ಮುಂಗಡ ಹಣವನ್ನೂ ಸಹ ಎದುರುದಾರರು ಹಿಂದಿರುಗಿಸಿರಲಿಲಲ್ಲ. ಬಾಲಾಜಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ನ ಕ್ರಮ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಹೇಳಿ ಎದುರುದಾರರ ಮೇಲೆ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರುಗಳಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ 2014ರಲ್ಲಿ ದೂರುದಾರನಿಂದ ಹಣ ಪಡೆದುಕೊಂಡು ಅದನ್ನು ಲೇಔಟ್ ನಿರ್ಮಾಣ ಮಾಡದೇ ತಮ್ಮ ಕೆಲಸಕ್ಕೆ ಎದುರುದಾರರು ಉಪಯೋಗಿಸಿಕೊಂಡಿದ್ದಾರೆ. ಅವರು ದೂರು ದಾಖಲಿಸುವವರೆಗೆ ದೂರುದಾರರ ಹಣ ಹಿಂದಿರುಗಿಸದೇ ಇರುವುದು ತಪ್ಪು ಅಂತಾ ಆಯೋಗ ತೀರ್ಪು ನೀಡಿ ದೂರುದಾರರಿಗೆ ಅವರು ನೀಡಿದ ಹಣ 1,70,000 ಹಣ ಮತ್ತು ಅದರ ಮೇಲೆ 06/01/2014 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ.9ರಂತೆ ಬಡ್ಡಿ ಲೆಕ್ಕ ಹಾಕಿಕೊಡುವಂತೆ ಆದೇಶಿಸಿದೆ.
ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ 50,000 ರೂಪಾಯಿ ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ 10,000 ರೂಪಾಯಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಿಂದಿರುಗಿಸುವಂತೆ ಬಾಲಾಜಿ ಡೆವಲಪರ್ಸ್ನ ಮ್ಯಾನೆಜಿಂಗ್ ಪಾರ್ಟ್ನರ್ ಹನುಮರೆಡ್ಡಿ ಮಾಸ್ತಿ ಅವರಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.












Click it and Unblock the Notifications