ಡಿ.ಕೆ ಶಿವಕುಮಾರ್ ಗಳಿಸಿದ ಹಣ ಜನರದ್ದು: ಎಸ್.ಆರ್ ಹಿರೇಮಠ ವಾಗ್ದಾಳಿ
ಧಾರವಾಡ, ಅಕ್ಟೋಬರ್ 7: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಸಂಪಾದಿಸಿದ್ದು ಸಾರ್ವಜನಿಕರ ಹಣ, ಅವರ ಮೇಲೆ ಎಫ್ಐಆರ್ ದಾಖಲಿಸಬೇಕು. ಅವರ ಮನೆ ಮೇಲೆ ಸಿಬಿಐ ದಾಳಿ ಮಾಡಿದ್ದು ಸ್ವಾಗತಾರ್ಹ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಆರ್ ಹಿರೇಮಠ ಅವರು, ಡಿ.ಕೆ ಶಿವಕುಮಾರ್ ಮೇಲೆ ಎಫ್ಐಆರ್ ದಾಖಲಿಸಿ ಮತ್ತ್ಯಾರೂ ಇಂತಹ ಕೆಲಸ ಮಾಡದಂತೆ ಮಾಡಬೇಕು. ಅವರ ಅಕ್ರಮ ಸಂಪಾದನೆ ಮೇಲೆ ಸಿಬಿಐ ದಾಳಿ ಮಾಡಿರುವುದು ಬಹಳ ಸಂತೋಷದ ವಿಷಯ. ಅವರ ಪರವಾಗಿ ಈ ಕಾಂಗ್ರೆಸ್ಸಿನವರು ಪ್ರತಿಭಟನೆ ಮಾಡುವುದನ್ನು ನಿಲ್ಲಿಸಬೇಕು ಎಂದರು.
ಆರೋಗ್ಯ ಸಚಿವ ಬಿ.ಶ್ರೀರಾಮುಲು 100 ಕೋಟಿ ರುಪಾಯಿ ಮೌಲ್ಯದ ಮನೆ ಕಟ್ಟಲು ಎಲ್ಲಿಂದ ಹಣ ಬಂತು? ಅದನ್ನು ಬಹಿರಂಗಪಡಿಸಬೇಕು. ನಾವು ಈಗಾಗಲೇ ಈ ರೀತಿ ಅಕ್ರಮ ಸಂಪಾದನೆ ಮಾಡಿದವರ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದೆವೆ ಎಂದರು.

ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮನೆಯ ಮೇಲೆ ಸಿಬಿಐ ದಾಳಿಯ ಕುರಿತು ಕಾಂಗ್ರೆಸ್ ಜನರ ಹಾದಿ ತಪ್ಪಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ವೇದವ್ಯಾಸ್ ಕಾಮತ್, ಕಾಂಗ್ರೆಸ್ ಮುಖಂಡರು ತಮ್ಮ ನಾಯಕ ತಪ್ಪು ಮಾಡದೇ ಹೋಗಿದ್ದರೆ ಸಿಬಿಐ ಏಕೆ ದಾಳಿ ಮಾಡುತ್ತಿತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳಲಿ. ಯಾರೇ ತಪ್ಪು ಮಾಡಿದರೂ ತನಿಖಾ ತಂಡಗಳಿಗೆ ಆ ವ್ಯಕ್ತಿಯನ್ನು ಬಂಧಿಸಲು ಅಥವಾ ವಿಚಾರಣೆ ನಡೆಸಲು ಅಧಿಕಾರವಿದೆ ಎಂದು ತಿಳಿಸಿದ್ದಾರೆ.
ಯಾವುದೇ ಪಕ್ಷವು ಆಡಳಿತದಲ್ಲಿದ್ದರೂ ತನಿಖಾ ತಂಡ ತಪ್ಪಿತಸ್ಥರನ್ನು ವಿಚಾರಣೆ ನಡೆಸುತ್ತದೆ. ಕಾಂಗ್ರೆಸ್ ಅಥವಾ ಇನ್ಯಾವುದೇ ಪಕ್ಷದ ಮುಖಂಡರ ಮೇಲೆ ಸಿಬಿಐ ದಾಳಿ ಮಾಡಿಲ್ಲ ಎಂದರು.
ಕೇವಲ ಡಿ.ಕೆ ಶಿವಕುಮಾರ್ ಅವರ ಮನೆಯ ಮೇಲೆ ಸಿಬಿಐ ದಾಳಿ ನಡೆಸಿದೆ ಎಂದರೆ ಸೂಕ್ತ ಮಾಹಿತಿಯ ಆಧಾರದ ಮೇಲೆಯೇ ವಿಚಾರಣೆ ನಡೆಯುತ್ತದೆ. ಆದರೆ ಕಾಂಗ್ರೆಸ್ ಪಕ್ಷದ ಪ್ರಮುಖರು ರಾಜಕೀಯ ಲಾಭಕ್ಕಾಗಿ ಬಿಜೆಪಿಯ ವಿರುದ್ಧ ಆರೋಪಿಸುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಮುಖಂಡರು ತಪ್ಪು ಮಾಡದಿದ್ದರೆ ತನಿಖೆಗೆ ಹೆದರುವ ಅವಶ್ಯಕತೆ ಏಕೆ? ಜನರ ಮನಸ್ಸಿನಲ್ಲಿ ಗೊಂದಲ ಎಬ್ಬಿಸುವ ಕಾಂಗ್ರೆಸ್ ಷಡ್ಯಂತ್ರವನ್ನು ಬುದ್ಧಿವಂತ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದರು.












Click it and Unblock the Notifications