ಧಾರವಾಡದ ಕೆಐಎಡಿಬಿಯಲ್ಲಿ ಗೋಲ್ಮಾಲ್: 9 ಜನ ಅಧಿಕಾರಿಗಳಿಂದ ತನಿಖೆ
ಧಾರವಾಡ, ಡಿಸೆಂಬರ್, 07: ಐಐಟಿ ಕೇಂದ್ರಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ಕೊಡುವಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಗೋಲ್ಮಾಲ್ (ಕೆಐಎಡಿಬಿ) ನಡೆಸಿದೆ ಎನ್ನುವ ಮಾಹಿತಿ ಹೊರಬಿದ್ದಿತ್ತು. ಕೋಟ್ಯಂತರ ರೂಪಾಯಿ ಗೋಲ್ಮಾಲ್ಗೆ ಸಂಬಂಧಿಸಿದಂತೆ 9 ಜನ ಅಧಿಕಾರಿಗಳಿಂದ ತನಿಖೆ ಆರಂಭಗೊಂಡಿದೆ.
ಕಾನೂನು ಬಾಹಿರವಾಗಿ ಕೆಲಸದಿಂದ ತೆಗೆದು ಹಾಕಿದ್ದಾರೆ: ಹುಬ್ಬಳ್ಳಿಯಲ್ಲಿ ಪೌರ ಕಾರ್ಮಿಕರ ಗೋಳು
ಪರಿಹಾರ ವಿತರಣೆಯಲ್ಲಿ ಗೋಲ್ಮಾಲ್
ಸ್ವಾಧೀನಪಡಿಸಿಕೊಂಡ ಭೂಮಿ ಮಾಲೀಕರಿಗೆ ಎರಡೆರಡು ಬಾರಿ ಪರಿಹಾರ ನೀಡಲಾಗಿದೆ. ಈ ಪರಿಹಾರ ವಿತರಣೆಯಲ್ಲಿ ದೊಡ್ಡಮಟ್ಟದಲ್ಲೇ ಗೋಲ್ಮಾಲ್ ನಡೆದಿದೆ. ಇದರಲ್ಲಿ ದೊಡ್ಡ ಮಟ್ಟದ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎನ್ನುವ ಭಯಾನಕ ಮಾಹಿತಿಯೊಂದು ಲಭ್ಯವಾಗಿದೆ. ಧಾರವಾಡ ತಾಲೂಕಿನ ಮುಮ್ಮಿಗಟ್ಟಿ, ಚಿಕ್ಕಮಲ್ಲಿಗವಾಡ, ಕೋಟೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸುಮಾರು 500 ಹೆಕ್ಟೇರ್ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದೆಲ್ಲ ಆಗಿದ್ದು 2012 ರಲ್ಲಿ ಎನ್ನುವ ಮಾಹಿತಿ ಲಭ್ಯವಾಗಿದೆ. ಆಗ ಚೆಕ್ ಮೂಲಕ ಅರ್ಹ ರೈತರಿಗೆ ಪರಿಹಾರ ವಿತರಿಸಿದ್ದರು. ಇಲ್ಲಿವರೆಗೂ ಎಲ್ಲವೂ ಸರಿಯಾಗಿದೆ, ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಇದೀಗ 2022ರಲ್ಲಿ ಆಗ ಸ್ವಾಧೀನಪಡಿಸಿಕೊಂಡು ಪರಿಹಾರ ವಿತರಿಸಿದ ಭೂಮಿಗೆ ಮತ್ತೊಮ್ಮೆ ಪರಿಹಾರ ವಿತರಿಸಲಾಗಿದೆ. ಆದರೆ ಮೂಲ ರೈತರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಆರ್ಟಿಜಿಎಸ್ ಮೂಲಕ ಪರಿಹಾರ ವಿತರಣೆಯಾಗಿದೆ.
ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ವಿತರಣೆ
70 ಹೆಕ್ಟೇರ್ಗೂ ಅಧಿಕ ಜಮೀನಿಗೆ ಈ ರೀತಿ ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ವಿತರಿಸಲಾಗಿದೆ. ಹೀಗೆ ಒಂದು ಜಮೀನಿಗೆ ಎರಡೆರಡು ಬಾರಿ ಪರಿಹಾರ ವಿತರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ದಾಖಲೆ ಪತ್ರಗಳನ್ನು ಬಿಡುಗಡೆ ಮಾಡಿದ್ದು, ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ಇದೀಗ ಈ ಸಂಬಂಧ ತನಿಖೆ ನಡೆಸಲು 9 ಜನ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಧಿಕಾರಿಗಳ ತಂಡ ಕೆಐಎಡಿಬಿ ಕಚೇರಿಗೆ ಭೇಟಿ ನೀಡಿ ತನಿಖೆ ಚುರುಕುಗೊಳಿಸಿದೆ.
ವಿವಿಧ ದಾಖಲೆ ಪತ್ರಗಳ ಪರಿಶೀಲನೆ
ಕಚೇರಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ವಿವಿಧ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದು, ತನಿಖೆ ಚುರುಕುಗೊಳಿಸಿದೆ. ಕೆಐಎಡಿಬಿಯಲ್ಲಿ ದೊಡ್ಡಮಟ್ಟದ ಗೋಲ್ಮಾಲ್ ನಡೆದಿದೆ ಎಂಬ ಆರೋಪ ಕೇಳಿ ಬಂದ ಕೆಲವೇ ದಿನಗಳಲ್ಲಿ ಸರ್ಕಾರ ಈ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳನ್ನು ನೇಮಿಸಿದೆ. ಸದ್ಯ ಅಧಿಕಾರಿಗಳು ಈ ಸಂಬಂಧ ತನಿಖೆ ನಡೆಸುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕವೇ ಇದರ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.
ಕರ್ತವ್ಯಲೋಪ: ದ್ವಿತೀಯ ದರ್ಜೆ ಸಹಾಯಕ ಅಧಿಕಾರಿಯನ್ನು ಅಮಾನತ್ತುಗೊಳಿಸಿ ಹು-ಧಾರವಾಡ ಡಿಸಿ ಆದೇಶ