ಹುಬ್ಬಳ್ಳಿ: ರೈಲ್ವೆ ಅಧಿಕಾರಿ ಬಂಧನ ಖಂಡಿಸಿ ರೊಚ್ಚಿಗೆದ್ದ ಸಿಬ್ಬಂದಿ
ಹುಬ್ಬಳ್ಳಿ,ಮಾರ್ಚ್,18: ರೈಲ್ವೆ ಪಾರ್ಸೆಲ್ ಕಟ್ಟಡ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ವಿಭಾಗೀಯ ಎಂಜಿನಿಯರ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ರೈಲ್ವೆ ಅಧಿಕಾರಿಗಳು ಹಾಗೂ ನೌಕರರು ಅವರನ್ನು ಬಿಡುಗಡೆಗೊಳಿಸಬೇಕು ಎಂದು ಪ್ರತಿಭಟನೆ ಕೈಗೊಂಡಿದ್ದರು.
ಹೆಚ್ಚುವರಿ ವಿಭಾಗೀಯ ಎಂಜಿನಿಯರ್ ರವೀಂದ್ರ ಎಂ. ಬಿರಾದಾರ್ ಅವರನ್ನು ಬಂಧಿಸಿದ್ದರಿಂದ ಎರಡು ತಾಸಿಗೂ ಹೆಚ್ಚು ಕಾಲ ಸಿಬ್ಬಂದಿ ಹಾಗೂ ನೌಕರರು ಗುರುವಾರ ಸಂಜೆ 4 ಗಂಟೆಯಿಂದ ಪ್ರತಿಭಟನೆ ಆರಂಭಿಸಿದ್ದರು.
ಹೆಚ್ಚುವರಿ ವಿಭಾಗೀಯ ಎಂಜಿನಿಯರ್ ರವೀಂದ್ರ ಎಂ. ಬಿರಾದಾರ್ ಅವರನ್ನು ಗುರುವಾರ ಬೆಳಿಗ್ಗೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಆಗ ನ್ಯಾಯಾಲಯವು ಎಲ್ಲವನ್ನು ಪರಿಶೀಲಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.[ಚಿತ್ರಗಳು : ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಆಗಿದ್ದೇನು?]
ಎಂಜಿನಿಯರ್ ಬಂಧನ ವಿರೋಧಿಸಿ ರೈಲ್ವೆ ಸಿಬ್ಬಂದಿ ಕೈಗೊಂಡ ಪ್ರತಿಭಟನೆಯಿಂದಾಗಿ ರೈಲ್ವೆ ಸಂಚಾರದಲ್ಲಿ ಏರುಪೇರಾಗಿ ಪ್ರಯಾಣಿಕರು ಪರದಾಡಬೇಕಾಯಿತು. ಇದರಿಂದ ರೊಚ್ಚಿಗೆದ್ದ ಪ್ರಯಾಣಿಕರು ಸಿಬ್ಬಂದಿ ಮೇಲೆ ಕಿಡಿಕಾರಿದರು. ಬಳಿಕ ರೈಲುಗಳ ಸಂಚಾರ ಆರಂಭವಾಯಿತು. ಇಲ್ಲಿದೆ ಈ ಘಟನೆಯ ಇನ್ನಷ್ಟು ವಿವರ
ರವೀಂದ್ರ ಎಂ. ಬಿರಾದಾರ್ ಅವರನ್ನು ಬಂಧಿಸಿದ್ದು ಯಾಕೆ?
ಪಾರ್ಸೆಲ್ ಕಟ್ಟಡವನ್ನು ಬೇರೊಂದು ಕಟ್ಟಡಕ್ಕೆ ಸ್ಥಳಾಂತರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಆ ಕಾರ್ಯವನ್ನು ನಿರ್ವಹಿಸಲಿಲ್ಲ ಎಂಬ ನೆಪವೊಡ್ಡಿ ಬಂಧನಕ್ಕೆ ಒಳಪಡಿಸಲಾಗಿದೆ.[ಅವ್ಯವಸ್ಥೆಯ ಗೂಡು ಹುಬ್ಬಳ್ಳಿ ರೈಲು ನಿಲ್ದಾಣ]
ಪ್ರತಿಭಟನಾಕಾರ ಆರೋಪವೇನು?
ಕಟ್ಟಡ ಕುಸಿತ ಘಟನೆ ನಡೆದು ಒಂದು ತಿಂಗಳಾದರೂ ಯಾವುದೇ ತನಿಖಾ ವರದಿ ಸಲ್ಲಿಕೆಯಾಗಿಲ್ಲ. ಆದರೂ ಪೊಲೀಸರು ಯಾರದೋ ಒತ್ತಾಯಕ್ಕೆ ಮಣಿದು ರೈಲ್ವೆ ಅಧಿಕಾರಿಗಳನ್ನು ಬಂಧಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಎಷ್ಟು ಜನರಿಗೆ ಬಂಧನ ವಾರೆಂಟ್ ಕಳುಹಿಸಲಾಗಿದೆ?
ಕರ್ತವ್ಯ ಲೋಪ ಆರೋಪದಡಿ ನೈರುತ್ಯ ರೈಲ್ವೆ ವ್ಯವಸ್ಥಾಪಕ ಸೇರಿ ಏಳು ಅಧಿಕಾರಿಗಳಿಗೆ ಬಂಧನದ ವಾರೆಂಟ್ ಹೊರಡಿಸಲಾಗಿದೆ.[ಚಿತ್ರಗಳು : ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಕಟ್ಟಡ ಕುಸಿತ]
ಯಾವ ರೈಲುಗಳ ಸಂಚಾರ ಸ್ಥಗಿತಗೊಂಡಿತ್ತು?
ಹುಬ್ಬಳ್ಳಿಯಿಂದ ಹೊರಡಬೇಕಾಗಿದ್ದ ಆರು ಮತ್ತು ಇಲ್ಲಿಗೆ ಆಗಮಿಸಬೇಕಾಗಿದ್ದ ಎರಡು ರೈಲುಗಳನ್ನು ನಿಲ್ಲಿಸಲಾಗಿತ್ತು. ಜೋಧ್ ಪುರ -ಬೆಂಗಳೂರು ರೈಲನ್ನು ತಡೆಯಲಾಗಿತ್ತು.
ಹುಬ್ಬಳ್ಳಿಯ ರೈಲ್ವೆ ಕಟ್ಟಡ ಯಾವಾಗ ಕುಸಿದಿತ್ತು?
ಹುಬ್ಬಳ್ಳಿಯ ರೈಲ್ವೆ ಪಾರ್ಸೆಲ್ ಕಟ್ಟಡ ಕುಸಿತ ಫೆ.8ರಂದು ಸಂಭವಿಸಿತ್ತು. ಈ ದುರಂತಕ್ಕೆ ಏಳು ಜನರು ಬಲಿಯಾಗಿದ್ದರು. ಈ ಪ್ರಕರಣದ ತನಿಖೆಯನ್ನು ರೈಲ್ವೆ ಮಂಡಳಿ ಮತ್ತು ರೈಲ್ವೆ ಪೊಲೀಸರು ಕೈಗೊಂಡಿದ್ದರು.