ಧಾರವಾಡ; ಮತ್ತೆ ಪಿಎಸ್ಐ ನೇಮಕಾತಿ ಪರೀಕ್ಷೆ ನಡೆಸುವಂತೆ ಒತ್ತಾಯ
ಧಾರವಾಡ, ನವೆಂಬರ್, 28: ರಾಜ್ಯದಲ್ಲಿ ನಡೆದ 545 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ಸರ್ಕಾರ ಮರು ಪರೀಕ್ಷೆಯ ನಿರ್ಧಾರವನ್ನು ಕೈಗೊಂಡಿದೆ.
ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ ಅಭ್ಯರ್ಥಿಗಳು 545 ಮತ್ತು 402 ಪಿಎಸ್ಐ ನೇಮಕಾತಿ ಲಿಖಿತ ಪರೀಕ್ಷೆಯನ್ನು ಏಕಕಾಲಕ್ಕೆ ನಡೆಸುವಂತೆ ಆಗ್ರಹಿಸಿದರು. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬರುವ ಜೂಬ್ಳಿ ಸರ್ಕಲ್ ಬಳಿ 30 ನಿಮಿಷಗಳ ರಸ್ತೆ ತಡೆ ನಡೆಸಿ ಸರ್ಕಾರವನ್ನು ಒತ್ತಾಯಿಸಿದರು.
ಲಿಖಿತ ಪರೀಕ್ಷೆಯ ಅಕ್ರಮಕ್ಕೆ ಕಾರಣರಾದ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮೃತ ಪೌಲ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕೃತಿಯನ್ನು ದಹನ ಮಾಡಿದರು.
ಅಲ್ಲದೇ ಆದಷ್ಟು ಬೇಗ ಮರುಪರೀಕ್ಷೆ ದಿನಾಂಕವನ್ನು ಪ್ರಕಟಿಸಿ 56 ಸಾವಿರ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲೇಬೇಕು. ಇಲ್ಲದಿದ್ದರೆ ಇನ್ನುಮುಂದೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಹಾಗೆಯೇ ಕೆಪಿಎಸ್ಸಿಯು 500ಕ್ಕಿಂತ ಹೆಚ್ಚು ಕೆಎಎಸ್ ಹುದ್ದೆಗಳು, ಎಫ್ಡಿಎ, ಎಸ್ಡಿಎ ಹುದ್ದೆಗಳನ್ನು ಸಹ ಭರ್ತಿ ಮಾಡಬೇಕು ಎಂದು ಆಗ್ರಹಿಸಿ ಹೋರಾಟ ನಡೆಸಿದರು.
ಈ ಪ್ರತಿಭಟನೆ ವೇಳೆ ಧಾರವಾಡದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರು.
ಈ ಅಕ್ರಮವನ್ನು ಬಯಲಿಗೆ ತಂದ ಪಿಎಸ್ಐ ಅಭ್ಯರ್ಥಿ ರವಿಶಂಕರ್ ಮಾಲಿಪಾಟೀಲ್ ಹಾಗೂ ಬಸವರಾಜ್ ಕೊರವರ, ನಾಗರಾಜ್ ಕಿರಣಗಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.