ಹುಬ್ಬಳ್ಳಿ: ಕನ್ನಡ ರಾಜ್ಯೋತ್ಸವ ಆಚರಣೆಗೆ ಭಿಕ್ಷೆ ಬೇಡಿ ಹಣ ಸಂಗ್ರಹ!
Recommended Video

ಹುಬ್ಬಳ್ಳಿ, ಅಕ್ಟೋಬರ್ 27: ಸರಳವಾಗಿ ಕನ್ನಡ ರಾಜ್ಯೋತ್ಸವ ಆಚರಿಸುವ ಮಹಾನಗರ ಪಾಲಿಕೆ ನಿರ್ಧಾರವನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ಕರ್ನಾಟಕ ಸಂಗ್ರಾಮ ಸೇನೆ ಕಾರ್ಯಕರ್ತರು ವಿನೂತವಾಗಿ ಪ್ರತಿಭಟನೆ ನಡೆಸಿದರು.
ನಗರದ ಜನತಾ ಬಜಾರನಲ್ಲಿ ಭಿಕ್ಷಾಟನೆ ಮಾಡಿ ಹಣ ಸಂಗ್ರಹಿಸಿ ಮಹಾನಗರ ಪಾಲಿಕೆ ಮೇಯರ್ ಡಿ ಕೆ ಚೌಹಾಣ್ ಅವರಿಗೆ ದೇಣಿಗೆ ನೀಡುವ ಮೂಲಕ ಪಾಲಿಕೆ ಕ್ರಮವನ್ನು ಖಂಡಿಸಿದರು.

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ರಾಜ್ಯದ ಎರಡನೇ ಅತೀ ದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಹೊಂದಿದೆ. ಆದರೆ, ಅತಿವೃಷ್ಟಿಗೆ ರಸ್ತೆಗಳು ಹಾಳಾಗಿವೆ ಎಂಬ ನೆಪವೊಡ್ಡಿ ನಾಡ ಹಬ್ಬ ರಾಜೋತ್ಸವ ಸರಳವಾಗಿ ಆಚರಣೆ ಮಾಡುವ ಮೂಲಕ ನಾಡಿಗೆ ಅವಮಾನ ಮಾಡುವ ಕೆಲಸವನ್ನು ಮಹಾನಗರ ಪಾಲಿಕೆ ಮಾಡುತ್ತಿದೆ.
ಪಾಲಿಕೆ ನಿರ್ಧಾರ ಕನ್ನಡ ವಿರೋಧಿಯಾಗಿದೆ. ಯಾವ್ಯಾವುದಕ್ಕೋ ಹಣವನ್ನು ಖರ್ಚು ಮಾಡುವ ಪಾಲಿಕೆ, ರಾಜೋತ್ಸವದ ವಿಷಯದಲ್ಲಿ ಜಿಪುಣತನ ತೋರುವುದು ಸರಿಯಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆಗೆ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಮಾಡುವ ಸಾಮರ್ಥ್ಯ ಇಲ್ಲವೆಂದರೆ ಕನ್ನಡ ಪರ ಸಂಘಟನೆಗಳು ಭಿಕ್ಷೆಯೆತ್ತಿಯಾದರೂ ರಾಜ್ಯೋತ್ಸವ ಆಚರಣೆ ಮಾಡುತ್ತೇವೆ ಎಂದು ಸವಾಲು ಹಾಕಿದರು.
ನಂತರ ನಗರದಾದ್ಯಂತ ಭಿಕ್ಷಾಟನೆ ಮಾಡಿ ಹಣ ಸಂಗ್ರಹಿಸಿದ ಕಾರ್ಯಕರ್ತರು, ಸಂಗ್ರಹಿಸಿದ ಹಣವನ್ನು ಪಾಲಿಕೆ ಮೇಯರ್ ಡಿ ಕೆ ಚೌಹಾಣ್ ಅವರಿಗೆ ನೀಡಿ ಕರ್ನಾಟಕ ರಾಜ್ಯೋತ್ಸವಕ್ಕೆ ಕುಂದುತರದಂತೆ ನಾಡ ಹಬ್ಬ ಆಚರಿಸಿ ಎಂದು ಮನವಿ ಮಾಡಿದರು.












Click it and Unblock the Notifications