ಧಾರವಾಡದ ಕೆಲಗೇರಿಯ ಕೆರೆಯಲ್ಲಿ ಕಾಣಿಸಿಕೊಂಡ ನೊರೆ, ಆತಂಕದಲ್ಲಿ ಜನ
ಹುಬ್ಬಳ್ಳಿ, ಅಕ್ಟೋಬರ್ 6: ಇಷ್ಟು ದಿನ ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಮಾತ್ರ ನೊರೆ ಕಾಣಿಸಿಕೊಳ್ಳುತ್ತಿತ್ತು. ಆದರೆ, ಇದಕ್ಕೆ ಜೋಡಿಗಳು ಬೇರೆ ಬೇರೆ ನಗರದಲ್ಲಿ ಹುಟ್ಟಿಕೊಳ್ಳುತ್ತಿವೆ. ಈ ಹಿಂದೆ ಹೈದರಾಬಾದ್ ಕೆರೆಯಲ್ಲಿ ನೊರೆ ಕಾಣಿಸಿಕೊಂಡಿತ್ತು. ಈಗ ಸರದಿ ಧಾರವಾಡದ್ದು.
ಧಾರವಾಡದ ಹೊರವಲಯದಲ್ಲಿರುವ ಕೆಲಗೇರಿಯ ಕೆರೆಯಲ್ಲಿ ಇಂತಹದೇ ಪರಿಸ್ಥಿತಿ ನಿರ್ಮಾಣವಾಗಿದೆ.
ಕೆಲಗೇರಿ ಕೆರೆ ಧಾರವಾಡದಲ್ಲೇ ಅತಿ ಹಳೆಯ ಹಾಗೂ ಕೆಲೆಗೇರಿ ಭಾಗದ ಜನರ ಉಪಯುಕ್ತ ಕೆರೆಯಾಗಿದೆ. ಇಂತಹ ಕೆರೆಯ ದಡ ಗುರುವಾರ ಮುಂಜಾನೆ ನೊರೆಯಿಂದ ಆವೃತವಾಗಿದೆ. ಸಾಮಾನ್ಯವಾಗಿ ಈ ಕೆರೆ ವಾಯು ವಿಹಾರಕ್ಕೆ ಹೋಗುವವರ ಸ್ವರ್ಗ ಎಂದು ಕರೆಯುತ್ತಾರೆ.

ಆದ್ರೆ ಗುರುವಾರ ಬೆಳಿಗ್ಗೆ ವಾಯುವಿಹಾರಕ್ಕೆ ಬಂದ ಜನ ನೊರೆಯನ್ನು ನೋಡಿ ಕಂಗಾಲಾಗಿದ್ದಾರೆ. ಸದ್ಯ ಕರೆಯಲ್ಲಿ ಅಲ್ಪ ಸ್ವಲ್ಪ ಪ್ರಮಾಣದ ನೊರೆ ಕಾಣಿಸಿಕೊಳ್ಳುತ್ತಿದ್ದು ಇದಕ್ಕೆ ತಕ್ಷಣ ಪರಿಹಾರ ಕಂಡುಕೊಳ್ಳವುದು ಉತ್ತಮ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.
ಇನ್ನು ಈ ನೀರನ್ನು ಸುತ್ತ ಮುತ್ತಲಿನ ಜನ ನಿತ್ಯದ ಕೆಲಸಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇದೀಗ ಕೆರೆಯಲ್ಲಿ ನೊರೆ ಕಾಣಿಸಿಕೊಂಡಿರುವುದರಿಂದ ಈ ಜನ ಭಯಭೀತರಾಗಿದ್ದು ಕರೆ ನೀರು ಉಪಯೋಗ ಮಾಡಬೇಕಾ ಬೇಡ್ವಾ ಎನ್ನುವ ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ.

ಸದ್ಯ ಕೆರೆಯ ಕೆಲ ಭಾಗದಲ್ಲಿ ಮಾತ್ರ ನೊರೆ ಕಾಣಿಸಿಕೊಂಡಿದ್ದು , ನೆರೆ ಹೆಚ್ಚಾಗದ್ದಂತೆ ಸಂಬಂಧಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಬೇಕು ಎಂದು ಜನ ಆಗ್ರಹಿಸಿದ್ದಾರೆ.












Click it and Unblock the Notifications