25 ಚೀಲ ಭತ್ತ ಕದ್ದವನು 35 ವರ್ಷ ತಲೆ ಮರೆಸಿಕೊಂಡಿದ್ದ!
ಧಾರವಾಡ, ಡಿಸೆಂಬರ್ 15: ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸುತ್ತಾ ಅಲೆಯುತ್ತಿದ್ದ ಖತರ್ನಾಕ್ ಕಳ್ಳನೊಬ್ಬ ಕೊನೆಗೂ ಖಾಕಿ ಹೆಣೆದ ಜಾಲದಲ್ಲಿ ಬಿದ್ದಿದ್ದಾನೆ. ಅದಕ್ಕಾಗಿ ಅವನು ತೆಗೆದುಕೊಂಡಿದ್ದು ಬರೋಬ್ಬರಿ 35 ವರ್ಷ.
ಹೌದು, 35 ವರ್ಷಗಳ ಕಾಲ ಪೊಲೀಸರ ಕಣ್ಣುತಪ್ಪಿಸಿಕೊಂಡು ಅಲೆದಾಡುತ್ತಿದ್ದ ಖದೀಮನನ್ನು ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 1983ರಲ್ಲಿ 25 ಭತ್ತದ ಚೀಲಗಳನ್ನು ಕದ್ದಿದ್ದ ಆರೋಪಿ ಶಂಕರಪ್ಪ ಜೊಡಗೇರಿ ಸಿಕ್ಕಿ ಬಿದ್ದಿದ್ದಾನೆ.
ಮುತಾಲಿಕ್ ದೇಸಾಯಿ ಎಂಬುವವರ ಮನೆಯಲ್ಲಿ 25 ಭತ್ತದ ಚೀಲಗಳನ್ನು ಎಂಟು ಮಂದಿ ಆರೋಪಿಗಳು ಕದ್ದು ಪರಾರಿಯಾಗಿದ್ದರು. ಈ ಹಿಂದೆ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ, ಎತ್ತಿನಗುಡ್ಡ ಗ್ರಾಮದ ನಿವಾಸಿ ಪ್ರಮುಖ ಆರೋಪಿಯಾಗಿದ್ದ ಶಂಕರಪ್ಪ ಜೊಡಗೇರಿ ತಲೆ ತಪ್ಪಿಸಿಕೊಂಡಿದ್ದನು.

ಮಹಾರಾಷ್ಟ್ರ- ಗೋವಾದಲ್ಲಿ ಜಿಂಗಾಲಾಲಾ!
ಮಹಾರಾಷ್ಟ್ರ ಹಾಗೂ ಗೋವಾದಲ್ಲಿ 35 ವರ್ಷಗಳ ಕಾಲ ಆರೋಪಿ ಶಂಕರಪ್ಪ ಜೊಡಗೇರಿ ತಲೆ ತಪ್ಪಿಸಿಕೊಂಡು ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ್ದನು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಎಸ್ಪಿ ವರ್ತಿಕಾ ಕಟಿಯಾರ್, ಕೇಸ್ ರೀ ಓಪನ್ ಮಾಡಿದರು. ನಂತರ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಪ್ರಮುಖ ಆರೋಪಿ ಶಂಕರ ಜೊಡಗೇರಿಯನ್ನು ಬಂಧಿಸಿದ್ದಾರೆ.












Click it and Unblock the Notifications