ಬರೀ ಧಾರವಾಡ ಅಷ್ಟೇ ಅಲ್ಲ, ರಾಜ್ಯದ ವಿವಿಧ ಕಡೆಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಬರುವವರಿದ್ದಾರೆ: ಶೆಟ್ಟರ್ ಭವಿಷ್ಯ
ಧಾರವಾಡ, ಆಗಸ್ಟ್, 31: ಧಾರವಾಡ ಜಿಲ್ಲೆಯ ನಾಯಕರು ಅಷ್ಟೇ ಅಲ್ಲ, ಕರ್ನಾಟಕ ರಾಜ್ಯದ ವಿವಿಧ ಕಡೆಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಬರುವವರು ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಧಾರವಾಡದಲ್ಲಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕೆಲವರು ಬಿಜೆಪಿಯಿಂದ ಕಾಂಗ್ರೆಸ್ಗೆ ಬಂದೇ ಬರುತ್ತಾರೆ. ಆದರೆ ಅದು ಒಂದೇ ದಿನ ಆಗುವುದಲ್ಲ, ಮಾತುಕತೆಗಳು ನಡೆದಿವೆ. ಪಕ್ಷಕ್ಕೆ ಕರೆದುಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಜಿಲ್ಲೆ ಮಾತ್ರವಲ್ಲದೆ, ಕರ್ನಾಟಕದ ಬಗ್ಗೆ ನಾನು ಮಾತನಾಡುತ್ತಿರುವೆ. ಬಹಳಷ್ಟು ಜನ ಸಂಪರ್ಕದಲ್ಲಿ ಇದ್ದಾರೆ. ಆದರೆ ಕರೆದುಕೊಳ್ಳುವ ಬಗ್ಗೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

ಅಮಿತ್ ಶಾ ನನಗೆ ಫೋನ್ ಮಾಡಿಲ್ಲ
ನನಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಕರೆ ಮಾಡಿದ್ದಾರೆ ಎಂದು ಸುದ್ದಿ ಆಗಿದೆ. ಅವರು ನನಗೆ ಕರೆ ಮಾಡಿಯೇ ಇಲ್ಲ. ಆದರೂ ಆ ರೀತಿ ಸುದ್ದಿ ಯಾಕೆ ಹಬ್ಬಿತು ಗೊತ್ತಿಲ್ಲ. ಹೀಗಾಗಿ ಅದರ ಮೂಲ ಹುಡುಕಿ ಅಂತಾ ನಾನು ಆಗಲೇ ಹೇಳಿದ್ದೆ. ಈಗ ಅದು ಸುಳ್ಳು ಸುದ್ದಿ ಅಂತಾ ಸಾಬೀತಾಗಿ ಹೋಗಿದೆ ಎಂದರು.
ಮುನೇನಕೊಪ್ಪ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರ ಜೊತೆ ನಾನು ವೈಯಕ್ತಿಕವಾಗಿ ಮಾತನಾಡಿಲ್ಲ. ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ ಎಂದರು.
ಇನ್ನು ಗ್ಯಾರಂಟಿ ಯೋಜನೆಗಳ ಬಗ್ಗೆ ಅಂತಾರಾಷ್ಟ್ರೀಯ ಸಂಸ್ಥೆಯಿಂದ ಅಧ್ಯಯನ ವಿಚಾರದ ಬಗ್ಗೆ ಮಾತನಾಡಿ, ಚುನಾವಣೆಯಲ್ಲಿ ಪಕ್ಷ 5 ಗ್ಯಾರಂಟಿ ಘೋಷಣೆ ಮಾಡಿತ್ತು. ಇದಕ್ಕೆಲ್ಲ ಹಣ ಎಲ್ಲಿಂದ ತರುತ್ತಾರೆ ಅಂತಾ ಅನೇಕರು ಪ್ರಶ್ನೆ ಮಾಡಿದ್ದರು. ಈಗ ಅನುಷ್ಠಾನ ಬೇಗ ಮಾಡಿ ಅಂತಾ ಒತ್ತಾಯ ಶುರು ಮಾಡಿದ್ದಾರೆ. ಬಜೆಟ್ನಲ್ಲಿ ಇದಕ್ಕೆ ಸಿದ್ದರಾಮಯ್ಯ ಹಣ ನಿಗದಿ ಮಾಡಿದ್ದರು. ಇದರಿದಾಗಿ ನಾಲ್ಕು ಗ್ಯಾರಂಟಿಗಳು ಜಾರಿಗೆ ಬಂದಿವೆ. ಈಗ ಜನ ಖುಷಿಯಲ್ಲಿದ್ದಾರೆ ಎಂದರು.
ಕಾಂಗ್ರೆಸ್ನ ಗ್ಯಾರಂಟಿಗಳಿಂದ ಬಡವರು, ದೀನ ದಲಿತರು ಖುಷಿಯಲ್ಲಿದ್ದಾರೆ. ಯಾವ ರಾಜ್ಯದಲ್ಲಿಯೂ ಇಂತಹ ಯೋಜನೆ ಜಾರಿಯಾಗಿಲ್ಲ. ದೇಶದ ಇತಿಹಾಸದಲ್ಲಿಯೇ ಇದು ಮೊದಲು. ಹೀಗಾಗಿ ನುರಿತ ತಜ್ಞರು ಈ ಬಗ್ಗೆ ಅಧ್ಯಯನಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ನಾನು ಅಭಿನಂದನೆ ಸಲ್ಲಿಸುವೆ ಎಂದರು.
ಬಿಜೆಪಿ ಅವಧಿಯ ಹಗರಣಗಳ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಿಂದೆ ಕಾಂಗ್ರೆಸ್ ವಿರೋಧ ಪಕ್ಷದಲ್ಲಿತ್ತು. ಆಗ ಕೆಲ ಹಗರಣಗಳ ತನಿಖೆಗೆ ಆಗ್ರಹಿಸಲಾಗಿತ್ತು. ಆದರೆ ಆಗಿನ ಸರ್ಕಾರ ತನಿಖೆ ಮಾಡಲಿಲ್ಲ. ಈಗ ಕಾಂಗ್ರೆಸ್ ಬಂದಿದೆ. ಹೀಗಾಗಿ ಆಗ ಮಾಡಿದ ಆರೋಪಗಳ ತನಿಖೆ ಶುರುವಾಗಿದೆ ಎಂದರು. ಇನ್ನು ಭಾರತೀಯ ಜನತಾ ಪಕ್ಷದಲ್ಲಿ ವಿಪಕ್ಷ ನಾಯಕ ಆಯ್ಕೆ ವಿಳಂಬ ವಿಚಾರ ಕುರಿತು ಪ್ರತಿಕ್ರಿಯೆ ಕೊಟ್ಟ ಅವರು, ಬಿಜೆಪಿ ಯಾವ ರೀತಿ ಶೋಚನೀಯ ಸ್ಥಿತಿಗೆ ಬಂದಿದೆ ನೋಡಿ ಎಂದು ಲೇವಡಿ ಮಾಡಿದರು.
ಭಾರತೀಯ ಜನತಾ ಪಕ್ಷ ರೀತಿ ಕುಸಿಯುತ್ತಿರುವ ಪಕ್ಷ. ಅದು ಲೀಡರ್ಲೆಸ್ ಪಾರ್ಟಿ ಆಗಿದೆ. ಕೆಲವೆ ಕೆಲವರ ಹಿಡಿತದಲ್ಲಿ ಬಿಜೆಪಿ ಇದೆ ಎಂದರು. ಇನ್ನು ನನ್ನ ಅನುಭವ ಹಾಗೂ ರಾಜಕೀಯ ವಿಶ್ಲೇಷಣೆ ನೋಡುವುದಾದರೆ, ಗ್ಯಾರಂಟಿ ಅನುಷ್ಠಾನ ನೋಡಿದರೆ ಬರುವ ಲೋಕಸಭಾ ಚುನಾವಣೆಯಲ್ಲಿ 12 ರಿಂದ 15 ಸ್ಥಾನ ಗೆಲ್ಲಲಿದೆ. ನಾನು ಕಾಂಗ್ರೆಸ್ ಪಕ್ಷ ಸೇರಿದಾಗಲೇ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನ ಬರುತ್ತದೆ ಅಂತಾ ಹೇಳಿದ್ದೆ, ಅದು ನಿಜವಾಗಿದೆ. ಈಗ ಕೂಡ 15 ಸ್ಥಾನ ನಿಶ್ಚಿತ ಎಂದರು.












Click it and Unblock the Notifications