ಬಿಜೆಪಿಯಿಂದ ಅನೇಕರು ಕಾಂಗ್ರೆಸ್ಗೆ ಸೇರ್ಪಡೆ ಆಗುತ್ತಾರೆ: ಹುಬ್ಬಳ್ಳಿಯಲ್ಲಿ ಜಮೀರ್ ಬಾಂಬ್
ಧಾರವಾಡ, ಅಕ್ಟೋಬರ್, 21: ಡಿಸೆಂಬರ್ವರೆಗೂ ರಾಜ್ಯದಲ್ಲಿ ರಾಜಕೀಯ ಬಾಂಬ್ ಬ್ಲಾಸ್ಟ್ ಆಗುತ್ತದೆ. ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಾರೆ. ಕಾದು ನೋಡಿ ಎಂದು ಧಾರವಾಡದಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಹೊಸ ಬಾಂಬ್ ಸಿಡಿಸಿದರು.
''ಬಿಜೆಪಿಯಲ್ಲಿ ಹಲವು ಜನರು ಗೊಂದಲದಲ್ಲಿದ್ದಾರೆ. ನವೆಂಬರ್ವರೆಗೂ ಕಾದು ನೋಡಿ ಹಲವರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ. ರಾಜ್ಯದ ಹಲವಾರು ಭಾಗದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಾರೆ. ಕುಮಾರಸ್ವಾಮಿ ಅವರಿಗೆ ನನ್ನ ಅರ್ಹತೆ ಗೊತ್ತಿರಲಿಲ್ಲವಾ? ರಾಜ್ಯದಲ್ಲಿ 123 ಸ್ಥಾನ ಗೆಲ್ಲುತ್ತೇನೆ ಎನ್ನುವ ಅವರು ಮೊದಲು 59 ಸೀಟು ಗೆದ್ದು ತೋರಿಸಲಿ. ಜಮೀರ್ ಅಹಮದ್ ಖಾನ್ ಅವರನ್ನು ಯಾರು ಕಟ್ಟಿ ಹಾಕಲು ಸಾಧ್ಯವಿಲ್ಲ'' ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಹರಿಹಾಯ್ದಿದ್ದಾರೆ.
ಹುಬ್ಬಳ್ಳಿ: ಭಾರತ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ನಡುಕ: ಜಮೀರ್
ಇತಿಹಾಸ ಸೃಷ್ಟಿಸಲಿದೆ ಪಾದಯಾತ್ರೆ
ರಾಹುಲ್ ಗಾಂಧಿಯವರ ನೇತೃತ್ವದ ಭಾರತ್ ಜೋಡೋ ಯಾತ್ರೆ ನಿರೀಕ್ಷೆಗೂ ಮೀರಿ ಯಶಸ್ವಿ ಆಗಿದೆ. ದೇವರ ಆರ್ಶೀವಾದದಿಂದಾಗಿ ಪಾದಯಾತ್ರೆ ಯಶಸ್ವಿಯಾಗಿ ಸಾಗುತ್ತಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮೊದಲಿನಿಂದಲೂ ಒಂದಾಗಿಯೇ ಇದ್ದಾರೆ. ಮಾಧ್ಯಮದವರೇ ಈ ಅವರು ಕಿತ್ತಾಡುತ್ತಿದ್ದಾರೆ ಎಂದು ಬಿಂಬಿಸಿದ್ದು ಎಂದರು. ಬಿಜೆಪಿ ಅವರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಅವರು ಇಲ್ಲಸಲ್ಲದ್ದನ್ನು ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಪಾದಯಾತ್ರೆ ಮೂಲಕ ಇತಿಹಾಸ ಸೃಷ್ಟಿ ಮಾಡುತ್ತಿದ್ದಾರೆ. ಇಷ್ಟೊಂದು ಜನ ಬೆಂಬಲಕ್ಕೆ ಬರುತ್ತಾರೆ ಅಂತಾ ನಾವು ಅಂದುಕೊಂಡಿರಲಿಲ್ಲ. ಪಾಂಡವಪುರದಿಂದ ಶ್ರೀರಂಗಪಟ್ಟಣದವರೆಗೂ ನಾನು ಕೂಡ ನಡೆದಿದ್ದೇನೆ. ನನಗೆ ಅಲ್ಲಿಯವರೆಗೂ ನಡೆಯುವುದಕ್ಕೆ ಆಗಿರಲಿಲ್ಲ. ಅಂತಹದ್ದರಲ್ಲಿ ರಾಹುಲ್ ಗಾಂಧಿ ಇಷ್ಟೊಂದು ದೂರ ನಡೆಯುತ್ತಿರುವುದು ನಿಜಕ್ಕೂ ಅಚ್ಚರಿ ಸಂಗತಿ ಆಗಿದೆ ಎಂದರು.
ಮುಸ್ಲಿಮರಿಗೆ ಕಾಂಗ್ರೆಸ್ನಲ್ಲಿ ಟಿಕೆಟ್ ನೀಡುತ್ತಾರೆ. ಆದರೆ ಅವರನ್ನು ಜನರು ಗೆಲ್ಲಿಸುತ್ತಿಲ್ಲ. ಜನರು ಗೆಲ್ಲಿಸಿದರೆ ನಾವು ಅಭಿವೃದ್ಧಿ ಕೆಲಸಗಳನ್ನು ಹೆಚ್ಚಾಗಿ ಮಾಡುತ್ತೇವೆ. ನಾನು ಒಬ್ಬ ಸೇವಕನಾಗಿದ್ದು, ನನಗೆ ನಾಯಕನಾಗುವ ಆಸೆ ಇಲ್ಲ. ಖರ್ಗೆ ಎಐಸಿಸಿ ಅಧ್ಯಕ್ಷ ಆಗಿರೋದು ನಮಗೆ ಆನೆಬಲ ಬಂದಂತಾಗಿದೆ. 57 ಸೀಟ್ಗೆ ರೀಚ್ ಆಗಲಿಲ್ಲ ಕುಮಾರಸ್ವಾಮಿ. ಮುಂದೆ 1-2-3 ಅಷ್ಟೇ ಅವರು ಗೆಲ್ಲೋದು ಎಂದು ಜಮೀರ್ ವ್ಯಂಗ್ಯವಾಡಿದರು.