ಧಾರವಾಡದ ಕರ್ನಾಟಕ ವಿವಿಯಲ್ಲಿ ಏನಿದು ಅಕ್ರಮ?
ಧಾರವಾಡ, ಅ. 21 : ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಅಕ್ರಮ ನೇಮಕಾತಿ ಮತ್ತು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿ ಕುಲಪತಿ ಡಾ.ಎಚ್.ಬಿ.ವಾಲೀಕಾರ ಸೇರಿದಂತೆ ಮೂವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಸಂಜೆ ಬಂಧಿಸಿದ್ದಾರೆ.
ಸೋಮವಾರ ಬೆಳಗ್ಗೆಯಿಂದ ಲೋಕಾಯುಕ್ತ ಪೊಲೀಸರು ಡಾ.ಎಚ್.ಬಿ.ವಾಲೀಕಾರ ಅವರನ್ನು ವಿಚಾರಣೆ ನಡೆಸಿ, ಸಂಜೆ ವಿವಿ ಆಡಳಿತ ಕಟ್ಟಡದಲ್ಲಿರುವ ಕುಲಪತಿಗಳ ಕಚೇರಿಯಿಂದಲೇ ಧಾರವಾಡ ಜಿಲ್ಲಾ ಲೋಕಾಯುಕ್ತ ಎಸ್.ಪಿ. ಕೆ. ಪರಶುರಾಮ್ ಅವರು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. [ವಿವಿ ಕುಲಪತಿ ಎಚ್.ಬಿ.ವಾಲೀಕಾರ ಬಂಧನ]
ಕುಲಪತಿ ಡಾ.ಎಚ್.ಬಿ. ವಾಲೀಕಾರ ಅವರನ್ನು ಬಂಧಿಸಿ ಕರೆದೊಯ್ಯುವ ಸಂದರ್ಭದಲ್ಲಿ ಅವರ ಪತ್ನಿ ಅನಸೂಯಾ, ಸೊಸೆ ಹಾಗೂ ಬಂಧುಗಳು ಗೋಳಾಡಿದರು. ನನ್ನ ಗಂಡನ ಬಂಧನಕ್ಕೆ ಬಿಜೆಪಿ ನಾಯಕರು ಕಾರಣ ಎಂದು ಅವರು ಆರೋಪಿಸಿದರು. ನನ್ನ ಗಂಡನಿಗೆ ಹೃದ್ರೋಗವಿದೆ. ಜೈಲಿನಲ್ಲಿ ಅವರಿಗೆ ತೊಂದರೆ ಕೊಡಬೇಡಿ, ನಿಮಗೆ ಕೈ ಮುಗಿಯುತ್ತೇನೆ ಎಂದು ಬೇಡಿಕೊಂಡರು.
ಪೊಲೀಸರು ವಿವಿ ಕುಲಪತಿ ಡಾ.ಎಚ್.ಬಿ.ವಾಲೀಕಾರ, ಮೌಲ್ಯಮಾಪನ ಕುಲಸಚಿವ ಡಾ.ಎಚ್.ಟಿ.ಪೋತೆ, ಹಣಕಾಸು ಅಧಿಕಾರಿ ರಾಜಶ್ರೀ ಹಾಗೂ ಕುಲಪತಿಗಳ ಆಪ್ತ ಸಹಾಯಕ ಎಸ್.ಎಲ್.ಬೀಳಗಿ ಅವರನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದ ಮಾಹಿತಿ : 2010ರ ಜುಲೈ 25ರಿಂದ ಇತ್ತೀಚಿಗೆ ನಡೆದ ವಿಧಾನ ಪರಿಷತ್ ಚುನಾವಣೆ ಅವಧಿಯ ತನಕ ವಿವಿಯಲ್ಲಿ 110 ವಿವಿಧ ಹುದ್ದೆ ಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ ಇದರಲ್ಲಿ ಅಕ್ರಮ ನಡೆದಿದೆ ಎಂಬುದುವುದು ಒಂದು ಆರೋಪವಾದರೆ, ವಿವಿಯಲ್ಲಿ ಕಾನೂನು ಉಲ್ಲಂಘನೆ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ನಡೆದಿದೆ ಎನ್ನುವುದು ಮತ್ತೊಂದು ಆರೋಪವಾಗಿದೆ.
ತನಿಖೆಗೆ ಸಮಿತಿ ರಚನೆ : ಡಾ.ಎಚ್.ಬಿ.ವಾಲೀಕಾರ ಅವರ ವಿರುದ್ಧ ಕೇಳಿಬಂದಿರುವ ಅಕ್ರಮದ ಬಗ್ಗೆ ತನಿಖೆ ನಡೆಸಲು ರಾಜ್ಯಪಾಲ ವಜಯಭಾಯಿ ವಾಲಾ ಅವರು ನ್ಯಾಯಮೂರ್ತಿ ಬಿ.ಪದ್ಮರಾಜ್ ಅವರ ಏಕಸದಸ್ಯ ತನಿಖಾ ಸಮಿತಿ ರಚನೆ ಮಾಡಿದ್ದರು. ತನಿಖಾ ವರದಿಯಲ್ಲಿಯೂ ಕೇಳಿಬಂದಿರುವ ಎಲ್ಲಾ ಆರೋಪಗಳು ಸತ್ಯ ಎಂದು ರಾಜ್ಯಪಾಲರಿಗೆ ವರದಿ ನೀಡಲಾಗಿತ್ತು.
ನೇಮಕಾತಿಗಳನ್ನು ನಡೆಸುವಾಗ ನಿಯಮಗಳನ್ನು ಉಲ್ಲಂಘಿಸಲಾಗಿದೆ. ವಿಶ್ವವಿದ್ಯಾಲಯಗಳಲ್ಲಿನ ನೇಮಕಾತಿಗೆ ಸಂಬಂಧಿಸಿದಂತೆ 1998ರ ಅ.13ರಂದು ರಾಜ್ಯಪಾಲರು ನೀಡಿದ್ದ ನಿರ್ದೇಶನ ಪಾಲನೆಯಾಗಿಲ್ಲ. ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯೂ ಆಗಿದೆ ಎಂದು ಹಲವಾರು ಅಂಶಗಳನ್ನು ವರದಿಯಲ್ಲಿ ನ್ಯಾ.ಪದ್ಮರಾಜ್ ಅವರು ಉಲ್ಲೇಖಿಸಿದ್ದರು.
ನೇಮಕಾತಿ ಸಂಶಯ ಮೂಡಿಸಿದೆ : ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ 2014ರ ಮೇ 22 ಮತ್ತು 23ರಂದು ಸಂದರ್ಶನ ನಡೆಸಲಾಗಿದೆ. ಮೇ 25ರಂದೇ ಆಯ್ಕೆ ಪಟ್ಟಿ ಪ್ರಕಟಿಸಲಾಗಿದ್ದು, ಅಂದೇ ನೇಮಕಾತಿ ಪತ್ರವನ್ನೂ ನೀಡಲಾಗಿದೆ. ಅದೇ ದಿನ ಸಿಂಡಿಕೇಟ್ ಸಭೆಯಲ್ಲಿ ನೇಮಕಾತಿಗಳಿಗೆ ಒಪ್ಪಿಗೆ ಪಡೆಯಲಾಗಿದೆ ಇದು ಸಂಶಯ ಉಂಟುಮಾಡಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
ದೂರು ದಾಖಲಿಸಲು ಆದೇಶ : ವರದಿಯ ಅನ್ವಯ ಕ್ರಮ ಕೈಗೊಂಡು ಈ ಅಕ್ರಮದ ಬಗ್ಗೆ ದೂರು ದಾಖಲಿಸುವಂತೆ ರಾಜ್ಯಪಾಲರು ಆದೇಶ ನೀಡಿದ್ದರು. ಅದರಂತೆ ಅ. 2ರಂದು ಕರ್ನಾಟಕ ವಿಶ್ವ ವಿದ್ಯಾಲಯದ ಕುಲಸಚಿವೆ ಡಾ.ಚಂದ್ರಮಾ ಕಣಗಲಿ ಅವರು ಲೋಕಾಯುಕ್ತಕ್ಕೆ ಡಾ.ವಾಲೀಕಾರ ವಿರುದ್ಧ ದೂರು ಸಲ್ಲಿಸಿದ್ದರು. ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ಎಫ್ಐಆರ್ ದಾಖಲಿಸಿದ್ದರು.
ಹೈಕೋರ್ಟ್ನಲ್ಲಿ ಅರ್ಜಿ : ವಿವಿಯಲ್ಲಿ ನಡೆದಿರುವ ಅಕ್ರಮಗಳ ತನಿಖೆ ನಡೆಸುವಂತೆ ರಾಜ್ಯಪಾಲರು ಹೊರಡಿಸಿದ ಆದೇಶವನ್ನು ರದ್ದುಪಡಿಸುವಂತೆ ವಾಲೀಕಾರ ಅವರು ಧಾರವಾಡ ಹೈಕೋರ್ಟ್ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಸೋಮವಾರ ಅರ್ಜಿಯ ವಿಚಾರಣೆ ನಡೆದಿದ್ದು, ರಾಜ್ಯಪಾಲರ ಪರ ವಕೀಲರು ಸಮಯಾವಕಾಶ ಕೇಳಿದ್ದರಿಂದ ವಿಚಾರಣೆಯನ್ನು ಅ.27ಕ್ಕೆ ಮುಂದೂಡಲಾಗಿದೆ.