ಧಾರವಾಡ ಪಶ್ಚಿಮದಲ್ಲಿ ಕಣದಿಂದ ಹಿಂದೆ ಸರಿದ ಜೆಡಿಎಸ್ ಅಭ್ಯರ್ಥಿ!
ಧಾರವಾಡ, ಏಪ್ರಿಲ್ 27 : 2018ರ ವಿಧಾನಸಭೆ ಚುನಾವಣೆಗೆ ನಾಮಪತ್ರವನ್ನು ವಾಪಸ್ ಪಡೆಯಲು ಶುಕ್ರವಾರ ಕೊನೆಯ ದಿನ. ಧಾರವಾಡ ಪಶ್ಚಿಮ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ನವಾಜ್ ಕಿತ್ತೂರ ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಮೊಹಮ್ಮದ್ ಇಸ್ಮಾಯಿಲ್ ತಮಟ್ಗಾರ್ಗೆ ಬೆಂಬಲ ಸೂಚಿಸಿ ಅಲ್ತಾಫ್ ನವಾಜ್ ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ನವಾಜ್ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರು.
ಕೋಲಾರ : ಡಿಕೆ ರವಿ ತಾಯಿ ಗೌರಮ್ಮರಿಂದ ನಾಮಪತ್ರ ವಾಪಸ್
ನಾಮಪತ್ರ ವಾಪಸ್ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅಲ್ತಾಫ್ ನವಾಜ್ ಅವರು, 'ಸ್ಥಳೀಯ ಮಟ್ಟದಿಂದ ರಾಜ್ಯ ಮಟ್ಟದ ತನಕ ಎಲ್ಲಾ ನಾಯಕರು ನನ್ನನ್ನು ಕಡೆಗಣಿಸಿದ್ದಾರೆ. ಯಾರೂ ನನ್ನ ಪರವಾಗಿ ಪ್ರಚಾರಕ್ಕೆ ಬಂದಿಲ್ಲ' ಎಂದು ಆರೋಪಿಸಿದರು.
'ಬಸವರಾಜ ಹೊರಟ್ಟಿ ಅವರ ಮಾತನ್ನು ಯಾರೂ ಕೇಳುವುದಿಲ್ಲ. ಆದ್ದರಿಂದ, ಜೆಡಿಎಸ್ನಿಂದ ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ ಪಡೆಯುತ್ತಿದ್ದೇನೆ. ಜೆಡಿಎಸ್ ಪಕ್ಷದಲ್ಲಿ ಹೊಂದಿರುವ ಎಲ್ಲಾ ಸ್ಥಾನಗಳಿಗೂ ರಾಜೀನಾಮೆಯನ್ನು ಸಲ್ಲಿಸುತ್ತಿದ್ದೇನೆ' ಎಂದರು.
ಶೀರೂರು ಶ್ರೀಗಳು ನಾಮಪತ್ರ ಹಿಂತೆಗೆದುಕೊಳ್ಳಲು ಕಾರಣವೇನು ಗೊತ್ತಾ?
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಅರವಿಂದ್ ಬೆಲ್ಲದ್ ಬಿಜೆಪಿ ಅಭ್ಯರ್ಥಿ. ಮೊಹಮ್ಮದ್ ಇಸ್ಮಾಯಿಲ್ ತಮಟ್ಗಾರ್ ಕಾಂಗ್ರೆಸ್ ಅಭ್ಯರ್ಥಿ. ಅಲ್ತಾಫ್ ನವಾಜ್ ಅವರು ಜಮೀರ್ ಅಹಮದ್ ಖಾನ್ ಅವರಿಗೆ ಆಪ್ತರು. ಅವರ ಸೂಚನೆಯಂತೆ ನಾಮಪತ್ರ ವಾಪಸ್ ಪಡೆದಿರಬಹುದು ಎಂಬ ಸುದ್ದಿ ಹಬ್ಬಿದೆ.
'ಸದ್ಯಕ್ಕೆ ಯಾವ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ' ಎಂದು ಅಲ್ತಾಫ್ ನವಾಜ್ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ನಾಮಪತ್ರ ವಾಪಸ್ ಪಡೆಯಲು ನಿಖರ ಕಾರಣ ತಿಳಿದುಬಂದಿಲ್ಲ.