ಧಾರವಾಡ : ಮೆರವಣಿಗೆಯಲ್ಲಿ ಬಂದ್ರು, ನಾಮಪತ್ರ ತರೋದು ಮರೆತರು!
ಧಾರವಾಡ, ಏಪ್ರಿಲ್ 01 : ಬೃಹತ್ ಮೆರವಣಿಗೆಯಲ್ಲಿ ಬಂದ ಪಕ್ಷೇತರ ಅಭ್ಯರ್ಥಿ ನಾಮಪತ್ರ ತರುವುದನ್ನೇ ಮರೆತ ಘಟನೆ ಧಾರವಾಡದಲ್ಲಿ ನಡೆದಿದೆ. ಗಡಿಬಿಡಿಯಲ್ಲಿ ಮನೆಗೆ ಓಡಿದ ಅಭ್ಯರ್ಥಿ ನಾಮಪತ್ರ ತಂದು ಚುನಾವಣಾಧಿಕಾರಿಗಳಿಗೆ ನೀಡಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನಗೌಡ ಬಾಳನಗೌಡ್ರು ಸೋಮವಾರ ನಾಮಪತ್ರ ಸಲ್ಲಿಸಿದರು. ಏಪ್ರಿಲ್ 23ರಂದು ಧಾರವಾಡ ಕ್ಷೇತ್ರಕ್ಕೆ ಮತದಾನ ನಡೆಯಲಿದೆ.
ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?
ಬೃಹತ್ ಮೆರವಣಿಗೆಯಲ್ಲಿ ಮಲ್ಲಿಕಾರ್ಜುನಗೌಡ ಬಾಳನಗೌಡ್ರು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದರು. ಆದರೆ, ಜಿಲ್ಲಾಧಿಕಾರಿಗಳು ನಾಮಪತ್ರ ಎಲ್ಲಿ? ಎಂದಾಗ ಕಂಗಾಲಾದರು. ಅಭ್ಯರ್ಥಿ ಮೆರವಣಿಗೆಯಲ್ಲಿ ಬರುವಾಗ ನಾಮಪತ್ರವನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದರು.

ತಕ್ಷಣ ತಮ್ಮ ಹಿಂಬಾಲಕರನ್ನು ಮನೆಗೆ ಕಳುಹಿಸಿದರು. ಆದರೆ, ಆತನೂ ಬರಲು ತಡ ಮಾಡಿದ ಕಾರಣ ಮಲ್ಲಿಕಾರ್ಜುನಗೌಡ ಬಾಳನಗೌಡ್ರು ತಾವೇ ಸ್ವತಃ ಮನೆಗೆ ಓಡಿ ನಾಮಪತ್ರವನ್ನು ತಂದು ಸಲ್ಲಿಕೆ ಮಾಡಿ ನಿಟ್ಟುಸಿರು ಬಿಟ್ಟರು.
4 ನಾಮಪತ್ರ ಸಲ್ಲಿಕೆ : ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು 4ನೇ ದಿನವಾಗಿದೆ. ಮಲ್ಲಿಕಾರ್ಜುನಗೌಡ ಬಾಳನಗೌಡ್ರು ಸೇರಿದಂತೆ ನಾಲ್ವರು ಸೋಮವಾರ ನಾಮಪತ್ರಗಳನ್ನು ಸಲ್ಲಿಸಿದರು.
ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ಅಭ್ಯರ್ಥಿ ರೇವಣ ಸಿದ್ದಪ್ಪ ಬಸವರಾಜ ತಳವಾರ, ಜನತಾದಳ (ಸಂಯುಕ್ತ) ಪಕ್ಷದ ಅಭ್ಯರ್ಥಿ ಗುರಪ್ಪ ತೋಟದ, ಪಕ್ಷೇತರ ಅಭ್ಯರ್ಥಿಗಳಾಗಿ ಮಲ್ಲಿಕಾರ್ಜುನಗೌಡ ಬಾಳನಗೌಡ್ರು ಹಾಗೂ ಉದಯಕುಮಾರ್ ಅಂಬಿಗೇರ ಅವರು ನಾಮಪತ್ರ ಸಲ್ಲಿಸಿದ್ದಾರೆ.












Click it and Unblock the Notifications