ಹುಬ್ಬಳ್ಳಿಯಲ್ಲಿ ದೇಶಭಕ್ತರಿಂದ ದೇಶಕ್ಕಾಗಿ ನಡಿಗೆ
ಹುಬ್ಬಳ್ಳಿ, ಮಾರ್ಚ್ 04 : ಶುಕ್ರವಾರ ಹುಬ್ಬಳ್ಳಿಯಲ್ಲಿ 'ದೇಶಭಕ್ತರಿಂದ ದೇಶಕ್ಕಾಗಿ ನಡಿಗೆ' ಎಂಬ ವಿನೂತನ ಕಾರ್ಯಕ್ರಮ ನಡೆಯಿತು. ದೇಶದ ಪರವಾಗಿ ನಾವಿದ್ದೇವೆ ಎಂದು ಘೋಷಣೆ ಕೂಗಿದ ನೂರಾರು ಜನರು ದೇಶದ್ರೋಹಿಗಳು ಭಾರತ ಬಿಟ್ಟು ತೊಲಗಲಿ ಎಂದರು.
ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ದೇಶದ್ರೋಹಿಗಳ ಧೋರಣೆಯನ್ನು ಖಂಡಿಸಲು ಈ ಜಾಥಾ ಆಯೋಜನೆ ಮಾಡಲಾಗಿತ್ತು. ಸಿಯಾಚಿನ್ನಲ್ಲಿ ಮೃತಪಟ್ಟ ಯೋಧ ಹನುಮಂತಪ್ಪ ಕೊಪ್ಪದ್ ಪತ್ನಿ ಮಹಾದೇವಿ ಅವರು ಜಾಥಾಕ್ಕೆ ಚಾಲನೆ ನೀಡಿದರು. [ದೇಶದ್ರೋಹಿಗಳೇ ಭಾರತ ಬಿಟ್ಟು ತೊಲಗಿ]

ಶುಕ್ರವಾರ ಬೆಳಗ್ಗೆ ನೆಹರು ಮೈದಾನದಿಂದ ಆರಂಭವಾದ ಮೆರವಣಿಗೆಯಲ್ಲಿ ನೂರಾರು ಜನರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ದೇಶದ್ರೋಹಿಗಳು ದೇಶ ಬಿಟ್ಟು ತೊಲಗಿ ಎಂದು ಘೋಷಣೆ ಕೂಗುತ್ತಾ, ಕಿತ್ತೂರು ಚನ್ನಮ್ಮ ವೃತ್ತದ ಮಾರ್ಗವಾಗಿ ನಗರದ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು.[JNU ವೃತ್ತಾಂತ: ಗುಪ್ತಚರ ಇಲಾಖೆಯ ಸ್ಫೋಟಕ ಮಾಹಿತಿ]

ಜಾಥಾದಲ್ಲಿ ಪಾಲ್ಗೊಂಡ ಎಲ್ಲರೂ ತ್ರಿವರ್ಣ ಧ್ವಜವನ್ನು ಹಿಡಿದು ಬೀಸುತ್ತ ಬಿರು ಬೇಸಿಗೆಯಲ್ಲೂ ಬಳಲದೇ ದೇಶಭಕ್ತಿಯ ಘೋಷಣೆಗಳನ್ನು ಕೂಗುತ್ತಿರುವುದು ವಿಶೇಷವಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಸಂಘಟನೆಗಳು ಇಂತಹ ಜಾಥಾವನ್ನು ನಡೆಸುತ್ತಿವೆ.

ಬೆಂಗಳೂರಿನಲ್ಲಿ ಚಾಲನೆ : ಫೆಬ್ರವರಿ 24ರಂದು ಬೆಂಗಳೂರಿನ ಸೌತ್ ಎಂಡ್ ವೃತ್ತದಿಂದ ಟೌನ್ ಹಾಲ್ ತನಕ 'ದೇಶದ್ರೋಹಿಗಳೇ ಭಾರತ ಬಿಟ್ಟು ತೊಲಗಿ' ಎಂಬ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಮಾಜಿ ಸೈನಿಕರು, ವಿವಿಧ ಕ್ಷೇತ್ರಗಳ ಉದ್ಯೋಗಿಗಳು, ವಿದ್ಯಾರ್ಥಿಗಳು, ಜಯನಗರ ಶಾಸಕ ಬಿ.ಎನ್.ವಿಜಯ್ ಕುಮಾರ್, ಚಿಂತಕ ಚಕ್ರವರ್ತಿ ಸೂಲಿಬೆಲೆ, ಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಮುಂತಾದವರು ಜಾಥಾದಲ್ಲಿ ಪಾಲ್ಗೊಂಡಿದ್ದರು.













Click it and Unblock the Notifications