ಯುವ ಕಾಂಗ್ರೆಸ್ ಅಧ್ಯಕ್ಷ್ಯ ಸ್ಥಾನಕ್ಕೆ ಇಮ್ರಾನ್ ರಾಣೇಬೆನ್ನೂರು ರಾಜೀನಾಮೆ, ಕಮಲದ ಕಡೆ ವಾಲಿದ "ಕೈ" ಕಲಿಗಳು
ಧಾರವಾಡ, ಏಪ್ರಿಲ್, 24: ನಾಗರಾಜ ಛಬ್ಬಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಬೆನ್ನಲ್ಲೇ ಧಾರವಾಡ ಜಿಲ್ಲೆ ಅಳ್ನಾವರ ಮಂಡಳದ ಇಮ್ರಾನ್ ರಾಣೇಬೆನ್ನೂರು ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷವನ್ನು ಕೆಳಹಂತದಿಂದ ಗಟ್ಟಿಗೊಳಿಸುವಲ್ಲಿ ನಾಗರಾಜ ಛಬ್ಬಿ ಅವರ ಶ್ರಮ ಬಹಳಷ್ಟಿದೆ. ಇದೀಗ ಕಾಂಗ್ರೆಸ್ ಪಕ್ಷ ಅವರಿಗೆ ಟಿಕೆಟ್ ನೀಡದೆ ಕಡೆಗಣಿಸಿದ್ದು ನಿಜಕ್ಕೂ ಬೇಸರ ತರಿಸಿದೆ. ಛಬ್ಬಿ ಅವರ ಬೆಂಬಲದಿಂದ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ನಾನು ಇದೀಗ ಅವರ ಹಾದಿಯಲ್ಲೇ ರಾಜೀನಾಮೆ ನೀಡುವುದಾಗಿ ತಿಳಿಸಿದರು.

ಇದೆ ಸಮಯದಲ್ಲಿ ಕಾಂಗ್ರೆಸ್ನ ಮತ್ತೊಬ್ಬ ಮುಖಂಡ ಕಿರಣ್ ಗಡಕರ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ. ಇಲ್ಲಿನ ವ್ಯವಸ್ಥೆಗೆ ಎಲ್ಲರೂ ಬೇಸತ್ತು ಹೋಗಿದ್ದಾರೆ. ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರು, ಅಲ್ಲಿನ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವ ಮೂಲಕ ಇದೀಗ ನಾಗರಾಜ ಛಬ್ಬಿ ಬೆಂಬಲಿಗರಾಗಿದ್ದೇವೆ.
ನಾಗರಾಜ ಛಬ್ಬಿ ಎಲ್ಲಿರುತ್ತಾರೆಯೋ ನಾವು ಸಹ ಅವರೊಟ್ಟಿಗೆ ಹೆಜ್ಜೆ ಹಾಕುವ ಸಂಕಲ್ಪ ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ ಛಬ್ಬಿ ಅವರ ಬೆಂಬಲಿಗರೆಲ್ಲ ಸಭೆ ಸೇರಿ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಂಡು ಬಿಜೆಪಿಯ ಹಿರಿಯ ಮುಖಂಡರ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ದಸ್ತಗೀರ ಹುಣಸಿಕಟ್ಟಿ, ಸುರೇಂದ್ರ ಕಡಕೊಳ, ಗುರುರಾಜ ನರಗುಂದ, ಮಹಾಬಳೇಶ್ವರ ಸೊಪ್ಪಿ, ಮಲ್ಲಣಗೌಡ ಪಾಟೀಲ, ಅಬ್ಬಾಸ ಅಲಿ ನದಾಫ್, ಜಮಾಲ ಸಾಬ ಮುನವಳ್ಳಿ ಸೇರಿದಂತೆ ಮತ್ತಿತರರು ಇದ್ದರು.
ಕಮಲ ತೆಕ್ಕೆಗೆ 'ಕೈ' ಕಲಿಗಳು
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಅಳ್ನಾವರ-ಕಲಘಟಗಿ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗರಾಜ ಛಬ್ಬಿ ಸಮ್ಮುಖದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು. ಪಟ್ಟಣದ ಉಮಾಭವನದಲ್ಲಿ ತಾಲೂಕಿನ ಎಲ್ಲ ಗ್ರಾಮಗಳಿಂದ ಬಂದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರುವ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎನ್ನುವ ಭರವಸೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, 2018ರ ಮುಂದುವರಿದ ಭಾಗವಾಗಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ. ಸುಳ್ಳು ಹೇಳಿಕೊಂಡು ಭಾಷಣ ಮಾಡುವ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲನುಭವಿಸಲಿದೆ ಎಂದರು.
ಅಳ್ನಾವರ ಕಲಘಟಗಿ ಬಿಜೆಪಿ ಅಭ್ಯರ್ಥಿ ನಾಗರಾಜ ಛಬ್ಬಿ 'ಕೈ'ಯಿಂದಲೇ 'ಕಮಲ'ಕ್ಕೆ ಬಂದವನು ನಾನು. ಇಲ್ಲಿನ ಜನರು ತೋರುವ ಪ್ರೀತಿ ನೋಡಿದರೆ ಮಾತನಾಡಲು ಬಾಯಿ ಬರುತ್ತಿಲ್ಲ. ಖಂಡಿತವಾಗಿ ನಾವೇ ಗೆಲ್ಲುತ್ತೇವೆ. ಈ ಗೆಲುವು ನನ್ನದಲ್ಲ, ಇಡೀ ಕ್ಷೇತ್ರದ ಗೆಲುವಾಗಿರಲಿದೆ. ಈ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಿರಣ್ ಘಡಕರ, ದಸ್ತಗೀರ್ ಸಾಬ್ ಹುಣಸಿಕಟ್ಟಿ, ಅಜೀಜ್ ದೇವರಾಯ, ಅಬೂಬ್ಕರ್ ನದಾಫ್ ಇವರ ನೇತೃತ್ವದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಕಮಲ ಪಡೆಗೆ ಸೇರಿದ್ದು, ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದಂತಾಗಿದೆ.
ಡಿ.ಕೆ.ಶಿಗೆ ಪ್ರಲ್ಹಾದ್ ಜೋಶಿ ತಿರುಗೇಟು
ಇನ್ನಿ ಕರ್ನಾಟಕ ರಾಜ್ಯ ವಿಧಾನಸಭೆಗೆ ದಿನಗಣನೆ ಆರಂಭವಾಗಿದೆ. ಪ್ರಮುಖ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿ ಆರೋಪ ಪ್ರತ್ಯಾರೋಪಗಳಲ್ಲಿ ಮುಳುಗಿವೆ. ಕಾಂಗ್ರೆಸ್ನವರು ಲಿಂಗಾಯತರನ್ನು ಸಿಎಂ ಮಾಡಲಿ ಎಂಬ ಚರ್ಚೆ ಅಂತ್ಯಗೊಳ್ಳುವಂತೆ ಕಾಣುತ್ತಿಲ್ಲ. ಇದರ ಮಧ್ಯೆ ಲಿಂಗಾಯತ ನಾಯಕರ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇತ್ತೀಚೆಗಷ್ಟೇ ತಿರುಗೇಟು ನೀಡಿದ್ದರು.
ಟಿಕೆಟ್ ಕೈತಪ್ಪಿದ ಹಲವು ಬಿಜೆಪಿ ನಾಯಕರು ಈಗಾಗಲೇ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈ ಸಂಬಂಧ ಡಿಕೆ ಶಿವಕುಮಾರ್ ಲಿಂಗಾಯತ ಡ್ಯಾಮ್ ನೀರು ಕಾಂಗ್ರೆಸ್ಗೆ ಬರುತ್ತಿದೆ ಎಂದಿದ್ದರು. ಇದಕ್ಕೆ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಜೋಶಿ, ಲಿಂಗಾಯತ ಡ್ಯಾಮ್ನಲ್ಲಿದ್ದ ಕಾಂಗ್ರೆಸ್ ನೀರು ಸಮುದ್ರ ಸೇರಿದೆ. ಸಮುದ್ರದ ನೀರು ಉಪ್ಪು ಇರುತ್ತದೆ. ಆ ನೀರು ಯಾವುದಕ್ಕೂ ಉಪಯೋಗಕ್ಕೆ ಬರಲ್ಲ. ಸಮುದ್ರದ ನೀರನ್ನು ಕಾಂಗ್ರೆಸ್ನವರೇ ಇಟ್ಟುಕೊಳ್ಳಲಿ ಎಂದು ಲೇವಡಿ ಮಾಡಿದ್ದರು.












Click it and Unblock the Notifications