ಠೇವಣಿ ಹಗರಣ, ಜೋಶಿ ಸಹೋದರನಿಗೆ ಕ್ಲೀನ್ಚಿಟ್
ಹುಬ್ಬಳ್ಳಿ, ನ.5 : ಕೆನರಾ ಬ್ಯಾಂಕ್ ಠೇವಣಿ ಹಗರಣದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ ಮತ್ತು ಇತರ ಆರೋಪಿಗಳಿಗೆ ಸಿಬಿಐ ಕ್ಲೀನ್ಚಿಟ್ ನೀಡಿದೆ. ಸಿಬಿಐ ವರದಿಗೆ ದೂರುದಾರ ಬ್ಯಾಂಕ್ ಆಕ್ಷೇಪ ವ್ಯಕ್ತಪಡಿಸಿದ್ದು, ನವೆಂಬರ್ 25ಕ್ಕೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಕೋರ್ಟ್ ಅವಕಾಶ ನೀಡಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಠೇವಣಿ ಸಂಗ್ರಹಿಸುವ ಸಂಬಂಧ ಕೆನರಾ ಬ್ಯಾಂಕ್ ಹುಬ್ಬಳ್ಳಿ ಶಾಖೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಬ್ಯಾಂಕಿನ ಉಪ ಪ್ರಧಾನ ಪ್ರಬಂಧಕ ಟಿ.ವಿ.ಬಿ.ರಾಜನ್ ನೀಡಿದ ದೂರಿನ ಅನ್ವಯ ಸಿಬಿಐ ತನಿಖೆ ನಡೆದಿತ್ತು. [ಬ್ಯಾಂಕ್ ಹಗರಣ, ಜೋಶಿ ರಾಜೀನಾಮೆಗೆ ಒತ್ತಾಯ]

ಸಿಬಿಐ ಬೆಂಗಳೂರು ವಿಭಾಗ ತನಿಖಾ ವರದಿಯನ್ನು ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಬ್ಯಾಂಕ್ನ ಮಾಜಿ ಉದ್ಯೋಗಿ ಗೋಪಾಲ್ ಜೋಶಿ ಸೇರಿದಂತೆ ಇತರ ಆರೋಪಿಗಳಿಗೆ ಕ್ಲೀನ್ಚಿಟ್ ನೀಡಲಾಗಿದೆ. ಬ್ಯಾಂಕ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ನ.25ಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಪ್ರಕರಣವೇನು : ಸರ್ಕಾರಿ ಸ್ವಾಮ್ಯದ ರಾಜೀವ್ ಗಾಂಧಿ ಆರೋಗ್ಯ ವಿವಿ, ಕರ್ನಾಟಕ ಪಾನೀಯ ನಿಗಮ, ಹಟ್ಟಿ ಚಿನ್ನದ ಗಣಿ, ಭಾರತೀಯ ಜೀವ ವಿಮಾ ನಿಗಮದಿಂದ ಭಾರಿ ಪ್ರಮಾಣದ ಠೇವಣಿ ಸಂಗ್ರಹದ ವೇಳೆ ಬ್ಯಾಂಕ್ನ ಅಧಿಕಾರಿಯಾಗಿದ್ದ ಗೋಪಾಲ್ ಜೋಶಿ ಅವರು ಖಾಸಗಿ ವ್ಯಕ್ತಿಗಳ ಖಾತೆಗಳ ಮೂಲಕ ವಹಿವಾಟು ನಡೆಸಿ, ಬ್ಯಾಂಕ್ಗೆ 1.08 ಕೋಟಿ ರೂ. ನಷ್ಟ ಉಂಟು ಮಾಡಿದ್ದಾರೆ ಎಂಬುದು ಆರೋಪವಾಗಿತ್ತು.
ಸಿಬಿಐ ತನ್ನ ಅಂತಿಮ ವರದಿಯಲ್ಲಿ ಪ್ರಕರಣದಲ್ಲಿ ಪ್ರಮುಖ ಆರೋಪಿ ಗೋಪಾಲ್ ಜೋಶಿ ಹಾಗೂ ಮತ್ತಿತರರ ವಿರುದ್ಧ ಕ್ರಿಮಿನಲ್ ಆರೋಪ ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ. ಆದ್ದರಿಂದ ಗೋಪಾಲ್ ಜೋಶಿ ಹಾಗೂ ಮತ್ತಿತರರ ವಿರುದ್ಧದ ಪ್ರಕರಣ ಕೈಬಿಡುವುದು ಸೂಕ್ತ ಎಂದು ಕೋರ್ಟ್ಗೆ ವರದಿ ಸಲ್ಲಿಸಿದೆ.












Click it and Unblock the Notifications