ಹುಬ್ಬಳ್ಳಿಯಲ್ಲಿ ಮಳೆ ಆರ್ಭಟ, ಸಂಚಾರ ಅಸ್ತವ್ಯಸ್ತ
ಹುಬ್ಬಳ್ಳಿ, ಮೇ 18: ಅವಳಿ ನಗರದಲ್ಲಿ ಬುಧವಾರ ಸಂಜೆ ಸುರಿದ ಭಾರೀ ಮಳೆಯಾಗಿ ಸಂಚಾರ ಅಸ್ತವ್ಯಸ್ತ ಮಾಡಿತ್ತು. ಧರೆಗಿಳಿದ ವರುಣ ಮಹಾನಗರದಲ್ಲಿ ಧಾರಾಕಾರವಾಗಿ ಸುರಿದು ತನ್ನ ಆರ್ಭಟ ತೋರಿಸಿದ.
ಮಂಗಳವಾರ ರಾತ್ರಿ 1-30 ರ ಸುಮಾರಿಗೆ ಗುಡುಗು, ಸಿಡಿಲು ಮಿಂಚುಗಳೊಂದಿಗೆ ಒಂದು ತಾಸು ಬಂದ ಮಳೆ ಮಹಾನಗರಕ್ಕೆ ಸ್ವಲ್ಪ ತಂಪು ನೀಡಿತ್ತು. ಬುಧವಾರ ಒಮ್ಮೆಲೆ ದಟ್ಟ ಮೋಡಗಳು ಆವರಿಸಿ ಸಂಜೆ 5 ಗಂಟೆಯ ಹೊತ್ತಿಗೆ ಕತ್ತಲಾವರಿಸಲಾರಂಭಿಸಿತು. ನಂತರ ಭಾರಿ ಗಾಳಿಯೊಂದಿಗೆ ಬಂದ ಮಳೆ ಅಪಾರ ಪ್ರಮಾಣದಲ್ಲಿ ಸುರಿದು ನಗರದ ಹಲವಾರು ಪ್ರದೇಶಗಳಲ್ಲಿ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಯಿತು.[ಮುಂಗಾರು ಪ್ರವೇಶ ಒಂದು ವಾರ ವಿಳಂಬ]
ಬೈಕ್ ಸವಾರರು ಸಿಕ್ಕ ಸಿಕ್ಕ ಸ್ಥಳಗಳಲ್ಲಿ ನಿಂತುಕೊಂಡು ಮಳೆಯಿಂದ ತಪ್ಪಿಸಿಕೊಳ್ಳುತ್ತಿದ್ದರೆ, ಕಾರು ಮತ್ತು ಭಾರೀ ವಾಹನಗಳು ತಾಪತ್ರಯ ಅನುಭವಿಸಿದವು. ಪರಿಣಾಮ ನಗರದೆಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಕರೆಂಟ್ ಕೂಡ ಕೈಕೊಟ್ಟಿದ್ದರಿಂದ ಟ್ರಾಫಿಕ್ ಸಿಗ್ನಲ್ ಗಳು ಸಹ ಕಾರ್ಯ ನಿರ್ವಹಿಸಲಿಲ್ಲ.

ನಗರದ ಟ್ರಾಫಿಕ್ ಐಲ್ಯಾಡ್, ಲ್ಯಾಮಿಂಗ್ಟನ್ ರಸ್ತೆ, ಕೊಪ್ಪಿಕರ್ ರಸ್ತೆ, ಹಳೇಹುಬ್ಬಳ್ಳಿ, ಹೊಸೂರು ಮುಂತಾದ ಪ್ರದೇಶಗಳಲ್ಲಿ ರಸ್ತೆಯಲ್ಲಿ ನೀರು ನಿಂತುಕೊಂಡು ಹಳ್ಳದಂತೆ ಕಂಡುಬಂದವು. [ಮಡಿಕೇರಿಯಲ್ಲಿ ಮಳೆ ತಂದ ಆವಾಂತರ]

ಬುಧವಾರ ಬಹುತೇಕ ಹುಬ್ಬಳ್ಳಿ ಮಾರ್ಕೆಟ್ ಬಂದ್ ಇರುವುದರಿಂದ ಜನ ಸಂಚಾರ ವಿರಳವಾಗಿತ್ತು. ಆದರೆ ಸಿಬಿಟಿ ಪ್ರದೇಶದಲ್ಲಿ ಇನ್ನು ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿರುವುದರಿಂದ ಪ್ರಯಾಣಿಕರು ಪರದಾಡಬೇಕಾಯಿತು.

ಮಂಗಳವಾರ ರಾಜ್ಯದ ವಿವಿಧೆಡೆ ಮುಂಗಾರು ಪೂರ್ವ ಮಳೆ ಅಬ್ಬರಿಸಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ 7 ಮಿಮಿ ಮಳೆ ದಾಖಲಾಗಿದೆ. ರಾಜ್ಯದ ಕರಾವಳಿ ಪ್ರದೇಶದಲ್ಲಿ ನಾಳೆಯಿಂದ 23ರವರೆಗಿನ ಐದು ದಿನಗಳ ಅವಧಿಯಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬಂಗಾಳ ಕೊಲ್ಲಿಯ ನೈರುತ್ಯ ಭಾಗ ಮತ್ತು ಮನ್ನಾರ್ ಕೊಲ್ಲಿಗೆ ಹೊಂದಿಕೊಂಡ ಶ್ರೀಲಂಕಾದ ಉತ್ತರ ಭಾಗದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಚೆನ್ನೈ ನಲ್ಲೂ ಮಳೆಯಾಗುತ್ತಿದೆ.












Click it and Unblock the Notifications