ವರುಣನ ಆರ್ಭಟಕ್ಕೆ ನಲುಗಿದ ಹುಬ್ಬಳ್ಳಿ, ಧಾರವಾಡ ಜಿಲ್ಲೆಯ ಜನರು
ಧಾರವಾಡ, ಸೆಪ್ಟೆಂಬರ್, 06: ಜಿಲ್ಲೆಯಲ್ಲಿ ಒಂದು ವಾರದಿಂದ ಭಾರಿ ಮಳೆ ಆಗುತ್ತಿದ್ದು, ಬೆಳೆಗಳು ಸಂಪೂರ್ಣ ಜಲಾವೃತವಾಗಿದೆ. ಮತ್ತೊಂದೆಡೆ ಮನೆಗಳು ಕೂಡ ಜಲಾವೃತವಾಗಿದ್ದು, ಜನರು ಕಂಗಾಲಾಗಿದ್ದಾರೆ. ನವಲಗುಂದ ತಾಲೂಕಿನ ಭೋಗಾನೂರ ಗ್ರಾಮದಲ್ಲಿ ದೊಡ್ಡ ಹಂದಿಗನ ಹಳ್ಳವು ತುಂಬಿ ಹರಿದು, ಸುಮಾರು 40 ಮನೆಗಳು ಜಲವೃತಗೊಂಡಿವೆ.
ಧಾರವಾಡ ಜಿಲ್ಲೆಯಾದ್ಯಂತ ವರುಣನ ಅಬ್ಬರ ಜೋರಾಗಿದ್ದು, ಹಳಿಯಾಳ- ಕಡಪಟ್ಟಿ ಹಳ್ಳ ತುಂಬಿ ಹರಿದಿದೆ. ಹಾಗೂ ಪ್ರವಾಹದಲ್ಲಿ ಆರು ಜನರು ಸಿಲುಕಿಕೊಂಡಿದ್ದು, ಅವರನ್ನು ಅಗ್ನಿಶಾಮಕ ಸಿಬ್ಬಂದಿ ಹಾಗೂ ಹುಬ್ಬಳ್ಳಿಯ ತಹಶೀಲ್ದಾರ್ ಅವರು ಬೋಟ್ ಮೂಲಕ ತೆರಳಿ ರಕ್ಷಣೆ ಮಾಡಿದ್ದಾರೆ.
ಸಾವಿರಾರು ಎಕರೆ ಅಡಿಕೆ ತೋಟ ಜಲಾವೃತ; ಕಂಗಾಲಾದ ದಾವಣಗೆರೆ ಜಿಲ್ಲೆಯ ಅನ್ನದಾತರು
ಭಾರಿ ಮಳೆಯಿಂದ ಹಳಿಯಾಳ ಕಡಪಟ್ಟಿ ಗ್ರಾಮದ ಹಳ್ಳ ಉಕ್ಕು ಹರಿಯುತ್ತಿದ್ದು, ಪ್ರವಾಹ ವಾತಾವರಣ ಉಂಟಾಗಿತ್ತು. ಪ್ರವಾಹದಲ್ಲಿ ಆರು ಜನರು ಸಿಲುಕಿಕೊಂಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಹುಬ್ಬಳ್ಳಿಯ ಗ್ರಾಮೀಣ ತಹಶೀಲ್ದಾರ್ ಪ್ರಕಾಶ್ ನಾಶಿ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಬೋಟ್ ಸಹಾಯದಿಂದ ಆರು ಜನರನ್ನು ರಕ್ಷಣೆ ಮಾಡಿದ್ದಾರೆ.
ಜಿಲ್ಲೆಯಲ್ಲಿ ಮಳೆರಾಯ ಅಪಾರ ಹಾನಿಯನ್ನು ಸೃಷ್ಟಿಸುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಸ್ಥಳಕ್ಕೆ ತಹಶೀಲ್ದಾರ್ ಪ್ರಕಾಶ್ ನಾಶಿ ಭೇಟಿ ನೀಡಿ, ನೇತೃತ್ವವನ್ನು ವಹಿಸಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ. ನವಲಗುಂದ ತಾಲೂಕಿನ ಭೋಗಾನೂರ ಗ್ರಾಮದಲ್ಲಿ ದೊಡ್ಡ ಹಂದಿಗನ ಹಳ್ಳವು ತುಂಬಿ ಹರಿದು, ಸುಮಾರು 40 ಮನೆಗಳು ಜಲವೃತಗೊಂಡಿವೆ. 40 ಮನೆಗಳಿದ್ದ ಜನರು ತಮ್ಮ ರಕ್ಷಣೆಗಾಗಿ ಸಾಮಗ್ರಿಗಳನ್ನು ಬಿಟ್ಟು ಹೊರಗೆ ಬಂದಿದ್ದಾರೆ. ನೀರಿನ ಹರಿವು ಇನ್ನು ಹೆಚ್ಚಾಗುತ್ತಿರುವುದರಿಂದ ರೈತರು ತಮ್ಮ ಜಾನುವಾರಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ.
ಮನೆಗಳಿಗೆ ನುಗ್ಗಿದ ಮಳೆ ನೀರು
ಗ್ರಾಮೀಣ ಪ್ರದೇಶದ ಮನೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದು, ಮೆನೆಯಲ್ಲಿನ ನೀರನ್ನು ಹೊರಹಾಕಲು ಜನರು ಹರಸಾಹಸ ಪಡುತ್ತಿದ್ದಾರೆ. ಇನ್ನು ರಸ್ತೆಗಳು ಕೆರೆಯಂತಾಗಿ ವಾಹನ ಸವಾರರು ಪರದಾಡುತ್ತಿದ್ದಾರ. ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಆರ್ಭಟದಿಂದ ಬೆನಕನಹಳ್ಳಿ, ಚಿಕ್ಕನರ್ತಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆಗಳು ನೀರಿನಲ್ಲಿ ಮುಳುಗಿವೆ. ಜನರು ಮಳೆಯ ನೀರಿನಲ್ಲೇ ಜೀವನ ಸಾಗಿಸುವಂತ ಪರಿಸ್ಥಿತಿ ನಿರ್ಮಾಣ ಆಗಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನ ಶಾಲಾ, ಕಾಲೇಜುಗಳಿಗೆ ಒಂದು ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ ಆದೇಶ ಹೊರಡಿಸಿದ್ದಾರೆ. ರೈತರು, ಸಾರ್ವಜನಿಕರು ಹಳ್ಳ, ಕೊಳ್ಳಗಳನ್ನು ದಾಟಬಾರದು. ಜಾನುವಾರುಗಳ ಸುರಕ್ಷತೆಗೂ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ನೀರಿನಲ್ಲಿ ಮುಳುಗಿದ ಹುಬ್ಬಳ್ಳಿ ರೈತರ ಬದುಕು
ಇನ್ನು ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಹುಬ್ಬಳ್ಳಿ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಅಲ್ಲದೇ ಜಮೀನುಗಳು ಸಂಪೂರ್ಣವಾಗಿ ಜಲಾವೃತ ಆಗಿವೆ. ಧಾರವಾಡ ಗ್ರಾಮೀಣ ಭಾಗದಲ್ಲಿ ಸಾವಿರಾರು ಎಕರೆಗಿಂತ ಹೆಚ್ಚು ಬೆಳೆ ಹಾನಿಯಾಗಿವೆ. ಅದರಲ್ಲೂ ಧಾರವಾಡ ಕಲಘಟಗಿ ತಾಲೂಕಿನ ಗ್ರಾಮಗಳ ಸಣ್ಣ ರೈತರು ಬೆಳೆಗಳನ್ನು ಕಳೆದುಕೊಂಡು ಅಕ್ಷರಸಃ ತತ್ತರಿಸಿ ಹೋಗಿದ್ದಾರೆ. ಗೋವಿನ ಜೋಳ, ಕಬ್ಬು ಸೇರಿದಂತೆ ಅನೇಕ ಬೆಳೆಗಳು ಸಂಪೂರ್ಣ ನಾಶ ಆಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತರು ಕಣ್ಣೀರಿನಲ್ಲಿ ಕೈ ತೋಳಿಯುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇನ್ನೇನು ಕಟಾವಿಗೆ ಬಂದಿದ್ದ ಗೋವಿನ ಜೋಳ ಮಳೆರಾಯನ ಆರ್ಭಟಕ್ಕೆ ನೆಲಕಚ್ಚಿ ಹೋಗಿದೆ. ಸಾಲ ಮಾಡಿ ಬೀಜ ಗೊಬ್ಬರ ಖರೀದಿ ಮಾಡಿದ್ದ ರೈತರು ಬೆಳೆ ಪರಿಹಾರಕ್ಕಾಗಿ ಅಧಿಕಾರಗಳು ಮತ್ತು ಸರ್ಕಾರದ ಮೊರೆ ಹೋಗಿದ್ದಾರೆ.
ಮನಸೂರು, ಮಂಡ್ಯಾಳ, ಮುಗದ ಹಾಗೂ ಅಳ್ನಾವರ ಪ್ರದೇಶಗಳಲ್ಲಿ ಸಾಕಷ್ಟು ಈರುಳ್ಳಿ, ಕಬ್ಬು ಬೆಳೆಗಳು ನೀರು ಪಾಲಾಗಿದ್ದು, ಅನ್ನದಾತ ಕಣ್ಣೀರು ಹಾಕುತಿದ್ದಾನೆ. ಧಾರವಾಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಆಗುತ್ತಿದ್ದು, ಹಲವೆಡೆ ಹಳ್ಳ ಕೊಳ್ಳಗಳ ನೀರು ಸಾವಿರಾರು ಎಕರೆ ಕೃಷಿ ಭೂಮಿಯನ್ನು ನುಂಗಿ ಬಿಟ್ಟಿದೆ. ಇದರಿಂದ ಅಪಾರ ಪ್ರಮಾಣದ ಬೆಳೆಗಳು ಹಾನಿ ಆಗಿದ್ದು, ಮಳೆಯಿಂದ ನಾಶ ಆದ ಬೆಳೆಗಳ ಸಮೀಕ್ಷೆ ನಡೆಸಬೇಕು ಎಂದು ಅಲ್ಲಿನ ರೈತರು ಒತ್ತಾಯಿಸಿದ್ದಾರೆ. ಸಾವಿರಾರು ಎಕರೆ ಕೃಷಿ ಭೂಮಿಗೆ ಮಳೆ ನುಗ್ಗಿ, ಅಪಾರ ಪ್ರಮಾಣದ ಬೆಳೆ ನಷ್ಟ ಆಗಿದೆ. ಇದೀಗ ಭಾರಿ ಪ್ರಮಾಣದಲ್ಲಿ ಸುರಿದಿರುವ ಅಕಾಲಿಕ ಮಳೆಯಿಂದಾಗಿ ಫಸಲಿಗೆ ಬಂದಿದ್ದ ಬೆಳೆಗಳು ಸಂಪೂರ್ಣಾ ನಾಶ ಆಗಿವೆ. ಬೆಳೆಗಳ ಫಸಲಿನ ನಿರೀಕ್ಷೆಯಲ್ಲಿದ್ದ ನೂರಾರು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಜಲಾವೃತವಾದ ವಿವಿಧ ಬೆಳೆಗಳು
ನವಲಗುಂದ ತಾಲೂಕಿನಲ್ಲಿ ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿದ್ದು, ಸಾವಿರಾರು ಎಕರೆ ಜಮೀನನ್ನುನ ತನ್ನ ಒಡಲಿನೊಳಗೆ ನುಂಗಿ ಬಿಟ್ಟಿದೆ. ಹತ್ತಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿ ಆಗಿದೆ. ಇನ್ನು ಕುಂದಗೋಳ ತಾಲೂಕಿನಲ್ಲಿಯೂ ಮಳೆರಾಯ ಅಬ್ಬರಿಸಿದ್ದು, ರೈತರು ಬೆಳೆದ ಬೆಳೆಗಳು ಸಂಪೂರ್ಣ ನೀರುಪಾಲಾಗಿವೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಾದ್ಯಂತ ಮಳೆರಾಯ ಅವಾಂತರ ಸೃಷ್ಟಿಸಿದ್ದು, ಬೆಳೆಗಳು ನೀರಿನಲ್ಲಿ ಕೊಳೆಯುತ್ತಿವೆ. ಸೋಯಾಬಿನ್, ಗೋವಿನಜೋಳ, ಕಬ್ಬು ಸೇರಿದಂತೆ ಬೆಳೆಗಳೆಲ್ಲವೂ ಸಂಪೂರ್ಣವಾಗಿ ಹಾಳಾಗಿವೆ.
ಬೆಳೆಗಳನ್ನು ಕಳೆದುಕೊಂಡ ರೈತರು ಕಣ್ಣೀರು
ಈಗಾಗಲೇ ಕಟಾವಿಗೆ ಬಂದಿದ್ದ ಸೋಯಾಬಿನ್ ಬೆಳೆ ನೀರು ಪಾಲಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಆತಂಕಕ್ಕೊಳಗಾದ ರೈತರು ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಪರಿಹಾರ ಹಣ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇನ್ನು ಮಳೆಯಿಂದ ಜಿಲ್ಲೆಯಲ್ಲಿ ಇಷ್ಟೆಲ್ಲ ಅವಾಂತರಗಳು ಸೃಷ್ಟಿ ಆದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಕಂಡು ಕಣದವರಂಮತೆ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ನಾವು ಸಾವಿರಾರು ರೂಪಾಯಿ ಹಾಕಿ ಬೀಜ, ಗೊಬ್ಬರಗಳನ್ನು ಕೊಂಡು ತಂದು ಬಿತ್ತನೆ ಮಾಡಿರುತ್ತೇವೆ. ಆದರೆ ಅತಿಯಾದ ಮಳೆಯಿಂದ ಬೆಳೆದ ಬೆಳೆಗಳೆಲ್ಲ ನೀರು ಪಾಲಾಗಿದ್ದು, ನಮ್ಮ ಸಮಸ್ಯೆಗಳನ್ನು ಆಲಿಸಲು ಇದುವರೆಗೂ ಯಾವ ಜನಪ್ರತಿನಿಧಿಗಳು ಬಂದಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.