ಅತಿಥಿ ಉಪನ್ಯಾಸಕರಿಗೆ ಅಭದ್ರತೆಯ ಆತಂಕ ಬೇಡ: ಅಶ್ವತ್ಥ ನಾರಾಯಣ
ಧಾರವಾಡ ನವೆಂಬರ್ 30: ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದ್ದು, ಮುಂದಿನ ವರ್ಷಗಳಲ್ಲಿ ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಅಗತ್ಯ ಬೀಳಲಿದೆ. ಆದ್ದರಿಂದ ಯಾವ ಅತಿಥಿ ಉಪನ್ಯಾಸಕರಿಗೆ ಆತಂಕ ಪಡಬೇಕಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಹೇಳಿದರು.
ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯನ್ನು ರಾಜ್ಯದಲ್ಲಿ ಜಾರಿ ತರಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಅತಿಥಿ ಉಪನ್ಯಾಸಕರ ನೇಮಕದ ಅನಿವಾರ್ಯತೆ ಎದುರಾಗಬಹುದು. ಸದ್ಯ 11 ಸಾವಿರ ಅತಿಥಿ ಉಪನ್ಯಾಸಕರು ಅಭದ್ರತೆಯ ಭಾವನೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದರು.
ಈ ಮೊದಲು ಅತಿಥಿ ಉಪನ್ಯಾಸಕರ ಗೌರವಧನಕ್ಕೆ ವರ್ಷಕ್ಕೆ 110 ಕೋಟಿ ರೂ. ಮಾತ್ರ ಮೀಸಲಿಡಲಾಗುತ್ತಿತ್ತು. ಈಗ ಈ ಮೊತ್ತವನ್ನು 280 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಜತೆಗೆ ಆಯಾ ಕಾಲೇಜುಗಳಿಗೆ ಶುಲ್ಕದ ರೂಪದಲ್ಲಿ ಬರುವ ಹಣವನ್ನು ಕಾಲೇಜಿನ ಖಾತೆಗೆ ಜಮೆ ಮಾಡಲಾಗುತ್ತಿದೆ. ಈಗ ಅತಿಥಿ ಉಪನ್ಯಾಸಕರು ಮುಂದಿಟ್ಟಿರುವ ಇನ್ನೊಂದಿಷ್ಟು ಬೇಡಿಕೆಗಳ ಬಗ್ಗೆ ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬಹುದೆಂದು ಪರಿಶೀಲಿಸಲು ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಉನ್ನತ ಶಿಕ್ಷಣ ಇಲಾಖೆಯಲ್ಲಿ 6,500 ಹುದ್ದೆ ಖಾಲಿ
ಅತಿಥಿ ಉಪನ್ಯಾಸಕರಿಗೆ ಈಗ ಸಮಯಕ್ಕೆ ಸರಿಯಾಗಿ ವೇತನ ಕೊಡುವ ವ್ಯವಸ್ಥೆ ಮಾಡಲಾಗಿದೆ. ಈ ಕುರಿತಂತೆ ಆಯಾ ಶೈಕ್ಷಣಿಕ ಸಂಸ್ಥೆಗಳ ಪ್ರಾಂಶುಪಾಲರಿಗೆ ಸೂಕ್ತ ಸೂಚನೆ ನೀಡಲಾಗಿದೆ. ನೀವೆಲ್ಲರೂ ಗೌರವದಿಂದ ಬದುಕಬೇಕೆಂಬ ಸದುದ್ದೇಶ ಇದರ ಹಿಂದಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ 6,500 ಹುದ್ದೆಗಳು ಮಂಜೂರಾಗಿವೆ.
ಈ 6,500 ಹುದ್ದೆಗಳು ಭರ್ತಿಯಾದರೂ ಅತಿಥಿ ಉಪನ್ಯಾಸಕರು ಆತಂಕ ಪಡಬೇಕಾಗಿಲ್ಲ. ವಾಸ್ತವವಾಗಿ ಅತಿಥಿ ಉಪನ್ಯಾಸಕರಿಗೆ ಈಗ ಬೇಡಿಕೆ ಹೆಚ್ಚಾಗುತ್ತಿದೆ. ಸರ್ಕಾರಿ ಡಿಗ್ರಿ ಕಾಲೇಜುಗಳಿಗೆ ದೈಹಿಕ ಶಿಕ್ಷಕರು ಮತ್ತು ಗ್ರಂಥಾಲಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಎನ್ಇಪಿ ಪ್ರಕಾರ 60 ವಿದ್ಯಾರ್ಥಿಗಳಿಗೆ ಒಂದು ತರಗತಿ ಮಾಡಲಾಗುವುದು. ಡಿಗ್ರಿ ಕಾಲೇಜುಗಳಲ್ಲಿ ಸಪ್ಲಿಮೆಂಟರಿ ಪರೀಕ್ಷೆಗಳನ್ನು ಬೇಗನೆ ನಡೆಸಿ, ಕ್ಷಿಪ್ರವಾಗಿ ಫಲಿತಾಂಶ ಕೊಟ್ಟರೆ ಅನುಕೂಲವಾಗುತ್ತದೆ ಎಂದು ಅಶ್ವಥ್ ನಾರಾಯಣ್ ಸೂಚಿಸಿದರು.
ನಂತರ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ ಮಾತನಾಡಿ, ಸಚಿವವರು ಅತಿಥಿ ಉಪನ್ಯಾಸಕರ ಸಮಸ್ಯೆಗಳ ನಿವಾರಣೆಗೆ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರೇರಣೆಯಿಂದ ರಾಜ್ಯದ ಉನ್ನತ ಶಿಕ್ಷಣಕ್ಕೆ ಸಮಗ್ರ ಕಾಯಕಲ್ಪ ನೀಡುತ್ತಿರುವುದು ಶ್ಲಾಘನೀಯ. ರಾಜ್ಯದಲ್ಲಿ ಎನ್ಇಪಿ ಜಾರಿಯಾಗುತ್ತಿದೆ. ಸರ್ಕಾರಿ ಕಾಲೇಜುಗಳ ಸಬಲೀಕರಣದ ಕೆಲಸಗಳು ಆಗುತ್ತಿವೆ. ಐಟಿಐ ಶಿಕ್ಷಣದ ಪಠ್ಯಕ್ರಮವನ್ನು ಆಮೂಲಾಗ್ರವಾಗಿ ಪರಿಷ್ಕರಿಸಿ, ಅವುಗಳ ಉನ್ನತೀಕರಣಕ್ಕೆ ಸಚಿವರು ಕಾರಣರಾಗಿದ್ದಾರೆ ಎಂದು ತಿಳಿಸಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ.ಹನುಮಂತಗೌಡ ಕಲ್ಮನಿ, ರಘು ಅಕ್ಮಂಚಿ, ಡಾ.ಡಿ.ಬಿ.ಕರಡೋಣಿ, ಆರ್ ಎಂ ಕುಬೇರಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.