ಭೀಕರ ಪ್ರವಾಹ: ಧಾರವಾಡ ಜಿಲ್ಲೆಯಲ್ಲಿ 672 ಕೋಟಿ ರೂ. ಹಾನಿ
ಧಾರವಾಡ, ಆಗಸ್ಟ್ 27 : ಧಾರವಾಡ ಜಿಲ್ಲೆಯಲ್ಲಿ ಮಳೆ ಮತ್ತು ಪ್ರವಾಹದಿಂದಾಗಿ 672 ಕೋಟಿ ರೂ. ನಷ್ಟವಾಗಿದೆ. ಕೇಂದ್ರದಿಂದ ಆಗಮಿಸಿದ್ದ ತಂಡಕ್ಕೆ ಹಾನಿಯ ಕುರಿತು ಜಿಲ್ಲಾಡಳಿತ ಸಮಗ್ರವಾದ ವರದಿಯನ್ನು ನೀಡಿದೆ.
ಕೇಂದ್ರ ನೆರೆ ಪರಿಸ್ಥಿತಿ ಅಧ್ಯಯನ ತಂಡ ಹುಬ್ಬಳ್ಳಿ ನಗರದಲ್ಲಿ ಅತಿವೃಷ್ಠಿಯಿಂದ ಉಣಕಲ್ ರಾಜಕಾಲುವೆಯಲ್ಲಿ ಉಂಟಾದ ಪ್ರವಾಹದಲ್ಲಿ ಹಾನಿಗೊಳಗಾದ ಪ್ರದೇಶಗಳನ ವೀಕ್ಷಣೆ ನಡೆಸಿತು. ಜಿಲ್ಲಾಧಿಕಾರಿ ದೀಪಾ ಚೋಳನ್ ತಂಡಕ್ಕೆ ವಿವರಣೆ ನೀಡಿದರು.
ಉಣಕಲ್, ಹನುಮಂತನಗರ, ದೇವಿನಗರಗಳ ಸೇತುವೆಗಳನ್ನು ಕೇಂದ್ರದ ತಂಡ ಪರಿಶೀಲಿಸಿತು. ನಂತರ ಗೋಕುಲ ಗ್ರಾಮಕ್ಕೆ ತೆರಳಿ ಹಾನಿಗೊಳಗಾದ ಮನೆಗಳ ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ ಒಟ್ಟು 16872 ಮನೆಗಳಿಗೆ ಹಾನಿಯಾಗಿದೆ.
Recommended Video
ಜಿಲ್ಲೆಯಲ್ಲಿ ಮಳೆ ಮತ್ತು ಪ್ರವಾಹದಿಂದಾಗಿ 672 ಕೋಟಿ ರೂ. ನಷ್ಟವಾಗಿದೆ. ಅಂದಾಜು 2 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಮನೆಗಳಿಗೆ ಆಗಿರುವ ಹಾನಿ ಸುಮಾರು 496 ಕೋಟಿಯಷ್ಟು ಎಂದು ಜಿಲ್ಲಾಡಳಿತ ಕೇಂದ್ರ ತಂಡಕ್ಕೆ ವರದಿಯನ್ನು ಕೊಟ್ಟಿದೆ.

ಇತಿಹಾಸದಲ್ಲಿಯೇ ದಾಖಲೆ ಮಳೆ
ಧಾರವಾಡ ಜಿಲ್ಲೆಯ ದಾಖಲೆಗಳ ಪ್ರಕಾರ ಕಳೆದ 118 ವರ್ಷಗಳ ಇತಿಹಾಸದಲ್ಲಿಯೇ ಇದೇ ಆಗಸ್ಟ್ 3 ರಿಂದ 10 ವರೆಗೆ ವಾಡಿಕೆ 33 ಮಿ.ಮೀ.ಗಿಂತ ಅಧಿಕವಾಗಿ 289 ಮಿ.ಮೀ ಮಳೆ ಸುರಿದಿದೆ. ಇದರಿಂದಾಗಿ ಜಿಲ್ಲೆಯಾದ್ಯಂತ 16872 ಮನೆಗಳು ಹಾನಿಗೊಳಗಾಗಿದ್ದು ಅಂದಾಜು ನಷ್ಟ 496 ಕೋಟಿ ರೂ. ಹಾನಿಯಾಗಿದೆ.

ತೋಟಗಾರಿಕಾ ಬೆಳೆಗಳಿಗೆ ಹಾನಿ
153616 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದ್ದು ಅಂದಾಜು 6.49 ಕೋಟಿ ರೂ. 38568 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು ಸುಮಾರು 2.72 ಕೋಟಿ ರೂ. ನಷ್ಟ ಸಂಭವಿಸಿದೆ. ಸುಮಾರು 672 ಕೋಟಿಗೂ ಅಧಿಕ ಮೌಲ್ಯದ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ನಷ್ಟ ಉಂಟಾಗಿದೆ.

ನಾಲ್ವರು ಸಾವು
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸರ್ಕಾರದ ನೆರೆ ಪರಿಸ್ಥಿತಿ ಅಧ್ಯಯನ ತಂಡಕ್ಕೆ ಅತಿವೃಷ್ಟಿ ಕುರಿತು ಜಿಲ್ಲಾಧಿಕಾರಿ ದೀಪಾ ಚೋಳನ್ ವಿವರಣೆ ನೀಡಿದರು. ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ನಾಲ್ವರು ಸಾವಿಗೀಡಾಗಿದ್ದರೆ. 212 ಜಾನುವಾರುಗಳ ಜೀವ ಹಾನಿಯಾಗಿದೆ. 2743 ಕುಟುಂಬಗಳಿಗೆ ಬಟ್ಟೆ, ಪಾತ್ರೆಗಳ ನೆರವಿಗಾಗಿ ತಲಾ ಹತ್ತು ಸಾವಿರದಂತೆ ಎನ್.ಡಿ.ಆರ್.ಎಫ್ ಅಡಿ 10 ಕೋಟಿ ನೆರೆವು ದೊರತಿದೆ.

ಚಿತ್ರ ಸಹಿತಿ ವಿವರಣೆ
ಅತಿವೃಷ್ಟಿ ಅವಧಿಯಲ್ಲಿ ಜಿಲ್ಲೆಯಾದ್ಯಂತ ಸರಾಸರಿ 5 ದಿನಗಳವರೆಗೆ 127 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿ 38931 ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತದಿಂದ ಅಳವಡಿಸಲಾಗಿದ್ದ ಪ್ರವಾಹ ಪರಿಸ್ಥಿತಿಗಳ ಚಿತ್ರ ಗ್ಯಾಲರಿಯನ್ನು ಕೇಂದ್ರ ಪ್ರವಾಹ ಅಧ್ಯಯನ ತಂಡದ ಅಧಿಕಾರಿಗಳು ವೀಕ್ಷಿಸಿದರು.












Click it and Unblock the Notifications