ಧಾರವಾಡದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯನ ಹತ್ಯೆ

ಧಾರವಾಡ, ಜೂನ್ 15 : ಧಾರವಾಡದಲ್ಲಿ ಬುಧವಾರ ಬೆಳಗ್ಗೆ ಬಿಜೆಪಿಯ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ ಗೌಡ ಅವರನ್ನು ಹತ್ಯೆ ಮಾಡಲಾಗಿದೆ. ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಸಪ್ತಾಪುರ ಪ್ರದೇಶದಲ್ಲಿರುವ ಉದಯ್ ಜಿಮ್‌ನಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ ಗೌಡ (35) ಅವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಹೆಬ್ಬಳ್ಳಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಯೋಗೇಶ ಗೌಡ ಅವರು ಜೈಲಿನಲ್ಲಿ ಇದ್ದುಕೊಂಡೇ ಚುನಾವಣೆಯಲ್ಲಿ ಜಯಗಳಿಸಿದ್ದರು. [ಧಾರವಾಡ ಜಿಲ್ಲಾ ಪಂಚಾಯಿತಿ ಬಿಜೆಪಿ ಮಡಿಲಿಗೆ]

ಸಿಸಿಟಿವಿ ಇಲ್ಲ : ಯೋಗೇಶ ಗೌಡ ಹತ್ಯೆಯಾದ ಜಿಮ್‌ನಲ್ಲಿ ಸಿಸಿಟಿವಿ ಇರಲಿಲ್ಲ. ಈ ಹಿಂದೆ ಎರಡು ಬಾರಿ ಸಿಸಿಟಿವಿ ಹಾಕಲು ಉದ್ದೇಶಿಸಲಾಗಿತ್ತು. ಎರಡು ದಿನದಲ್ಲಿ ಸಿಸಿಟಿವಿ ಅಳವಡಿಸುವ ಕಾರ್ಯ ಕೈಗೊಳ್ಳಬೇಕಿತ್ತು ಎಂದು ಜಿಮ್ ಮಾಲೀಕರು ತಿಳಿಸಿದ್ದಾರೆ. ಜಿಮ್ ಹತ್ತಿರದ ಎರಡು ಪ್ರದೇಶಗಳಲ್ಲಿ ಸಿಸಿಟಿವಿ ಇದ್ದು ಅವುಗಳನ್ನು ಪೊಲೀಸರು ಪರಿಶೀಲಿಲನೆ ನಡೆಸಲು ತೀರ್ಮಾನಿಸಿದ್ದಾರೆ.

ಧಾರವಾಡ ಉಪನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಘಟನೆಯ ಕುರಿತು ಧಾರವಾಡ ಉಪನಗರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಶಿವಾನಂದ ಛಲವಾದಿ ಅವರನ್ನು ಒನ್ ಇಂಡಿಯಾ ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.

hubballi

ಯೋಗೇಶ ಗೌಡ ಅವರು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಅರ್ಹರಲ್ಲ ಎಂದು ಕಾಂಗ್ರೆಸ್‌ನವರು ಪ್ರತಿಭಟನೆ ನಡೆಸಿದ್ದರು. ಇದೇ ರೀತಿ ಯೋಗೇಶ ಗೌಡ ಅವರು ಸಹ ಪೊಲೀಸ್ ಇನ್ಸಪೆಕ್ಟರ್ ಒಬ್ಬರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಯೋಗೇಶ ಗೌಡ ಪರವಾಗಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ ಕೂಡ ಪ್ರತಿಭಟನೆ ನಡೆಸಿದ್ದರು.

ಅಣ್ಣನ ಕೊಲೆಯಾಗಿತ್ತು : 10 ವರ್ಷಗಳ ಹಿಂದೆ ಯೋಗೇಶ ಗೌಡ ಅಣ್ಣ ಉದಯ್ ಗೌಡ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ನಂತರ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. 5 ಜನರ ತಂಡ ಯೋಗೇಶ ಗೌಡ ಹತ್ಯೆ ಮಾಡಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಹತ್ಯೆಯಾದ ಯೋಗೇಶ್ ಗೌಡ ಯಾರು?
ನಗರದ ಮಧ್ಯ ಭಾಗವಾಗಿರುವ ಸಪ್ತಾಪುರದಲ್ಲಿರುವ ಉದಯ್ ಜಿಮ್ ಅನ್ನು ಯೋಗೇಶಗೌಡ ಅವರು ತಮ್ಮ ಅಣ್ಣನ ಹೆಸರಿನಲ್ಲಿ ನಡೆಸುತ್ತಿದ್ದರು. ಹೆಲ್ತ್ ಕೇರ್ ಮತ್ತು ಫಿಟ್ನೆಸ್ ತರಬೇತಿ ನೀಡಲಾಗುತ್ತಿತ್ತು. ಅಲ್ಲಿ ಬೆಳಗ್ಗೆ ಯುವತಿಯರಿಗೆ ತರಬೇತಿ ನೀಡಲಾಗುತ್ತಿತ್ತು. ನಂತರ ಯುವಕರಿಗೆ ತರಬೇತಿ ನೀಡಲಾಗುತ್ತಿತ್ತು. ಇತ್ತೀಚೆಗಷ್ಟೇ ಹೊಸ ಇನ್ನೋವಾ ಕಾರು ಖರೀದಿಸಿದ್ದ ಯೋಗೇಶ ಗೌಡ ಅವರು ಧಾರವಾಡ ಸಮೀಪದ ತಮ್ಮ ಸ್ವಗ್ರಾಮ ಗೋವನಕೊಪ್ಪದಿಂದ ನಿತ್ಯ ತಮ್ಮ ಜಿಮ್ ಬರುತ್ತಿದ್ದರು. ಇನ್ನೋವಾ ಕಾರಿಗೆ ಇನ್ನು ನಂಬರ್ ಕೂಡ ಬಂದಿರಲಿಲ್ಲ.

ಹೊಸ ಇನ್ನೋವಾ ಕಾರಿನಲ್ಲಿ ತಮ್ಮ ಜಿಮ್ ಗೆ ಬಂದ ಯೋಗೇಶಗೌಡ ಪೇಪರ್ ಓದುತ್ತಾ ಕುಳಿತುಕೊಂಡಾಗ ನಾಲ್ಕು ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಲು ಬಂದಿದ್ದಾರೆ. ತಕ್ಷಣ ಓಡಿ ಹೋಗಲು ಯತ್ನಿಸಿ ಯೋಗೇಶಗೌಡನ ಬಲಗೈಗೆ ಮಚ್ಚಿನಿಂದ ಕೊಚ್ಚಲಾಗಿದೆ. ನಂತರ ತಮ್ಮ ಜಿಮ್ ನಲ್ಲಿ ಓಡಿದ ಯೋಗೇಶನನ್ನು ಬೆನ್ನತ್ತಿದ ದುಷ್ಕರ್ಮಿಗಳು ಮಚ್ಚಿನಿಂದ ತಲೆಯ ನೆತ್ತಿಯ ಮೇಲೆ ಮತ್ತು ಕುತ್ತಿಗೆಗೆ ಹಲ್ಲೆ ಮಾಡಿದ್ದಾರೆ.

ಜಿಮ್ ನಲ್ಲಿ ಕೆಲಸ ಮಾಡುವವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಉಪನಗರ ಪೊಲೀಸರು ಶವವನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.

ರಾಜಕೀಯದೊಂದಿಗೆ ರಿಯಲ್ ಎಸ್ಟೇಟ್ ವ್ಯವಹಾರ ಕೂಡ ನಡೆಸುತ್ತಿದ್ದ ಯೋಗೇಶಗೌಡರ ಕೊಲೆಗೆ ಯಾರು ಕಾರಣವೆಂದು ಅವರ ಕುಟುಂಬದವರು ಹೇಳಿಲ್ಲ. ಆದರೆ ಪೊಲೀಸರು ತನಿಖೆ ಮಾಡಿ ಕೂಡಲೇ ಹಂತಕರನ್ನು ಬಂಧಿಸುವುದಾಗಿ ಹೇಳಿದ್ದಾರೆ. ಯೋಗೇಶಗೌಡ ಪತ್ನಿ ಮಲ್ಲಮ್ಮ ಮತ್ತು ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ.

ಘಟನಾ ಸ್ಥಳದಲ್ಲಿ ಬಿಜೆಪಿ ಧುರೀಣರು ಮತ್ತು ಕಾರ್ಯಕರ್ತರು ಜಮಾಯಿಸಿದ್ದು, ಬಿಗುವಿನ ವಾತಾವರಣವಿದೆ. ನಗರದ ಮಧ್ಯಭಾಗದಲ್ಲಿಯೇ ನಡೆದ ಕೊಲೆ ಘಟನೆಯಿಂದ ವಿದ್ಯಾಕಾಶಿ ಎಂದೇ ಹೆಸರಾದ ಧಾರವಾಡದ ಜನರು ಬೆಚ್ಚಿ ಬಿದ್ದಿದ್ದಾರೆ.

ಈ ಹಿಂದೆ ಪಕ್ಷೇತರ ಸದಸ್ಯರಾಗಿ ಆಯ್ಕೆಯಾಗಿ ಧಾರವಾಡ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದ ಯೋಗೇಶಗೌಡ ನಂತರ ಬಿಜೆಪಿಯಿಂದ ಸ್ಪರ್ಧಿಸಿ ಜಿ.ಪಂ.ಗೆ ಆಯ್ಕೆಯಾಗಿದ್ದರು. ಜಿ.ಪಂ.ಚುನಾವಣೆ ದಿನದ ಹಿಂದಿನ ದಿನವೇ ಇವರನ್ನು ಪೊಲೀಸರು ಬಂಧಿಸಿದ್ದರು .ಜೈಲಿನಲ್ಲಿದ್ದುಕೊಂಡೇ ಚುನಾವಣೆಯಲ್ಲಿ ಗೆದ್ದಿದ್ದ ಯೋಗೇಶಗೌಡ ರಾಜ್ಯದಾದ್ಯಂತ ಸುದ್ದಿ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+