ಕನಿಷ್ಠ 20 ಜಿ.ಪಂ.ಯಲ್ಲಿ ಕಾಂಗ್ರೆಸ್ಸಿಗೆ ಸ್ಥಾನ ಕೈತಪ್ಪಲು ಸಿದ್ದು ಕಾರಣ
ಹುಬ್ಬಳ್ಳಿ,ಫೆಬ್ರವರಿ,23: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ನೀಡದಿರುವುದೇ ಪಕ್ಷದ ಸೋಲಿಗೆ ಕಾರಣ ಎಂದು ಹುಬ್ಬಳ್ಳಿ-ಧಾರವಾಡ ಜಿಲ್ಲಾ ಕಾಂಗ್ರೆಸ್ ವಕ್ತಾರ ವೇದವ್ಯಾಸ ಕೌಲಗಿ ದೂರಿದರು.
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಪಕ್ಷದ ಗಣನೀಯ ಸೋಲಿನ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕೌಲಗಿ ಅವರು, 'ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದು ಮೂರು ವರ್ಷಗಳಾದರೂ ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಅಧಿಕಾರ ಹಂಚಿಕೆ ವಿಳಂಬ ಮಾಡಿರುವುದರಿಂದ ಜಿ.ಪಂ. ತಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ನಿರೀಕ್ಷಿತ ಸ್ಥಾನಗಳು ಬಂದಿಲ್ಲ ಎಂದು ಹೇಳಿದರು.[LIVE: ಜಿಲ್ಲಾ ಪಂಚಾಯಿತಿ ಚುನಾವಣಾ ಫಲಿತಾಂಶ]
ವೇದವ್ಯಾಸ ಕೌಲಗಿ ಹೇಳಿದ್ದೇನು?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕರ್ತರನ್ನು ನಿರ್ಲಕ್ಷಿಸಿರುವುದರಿಂದ ಕನಿಷ್ಠ 20 ಜಿಲ್ಲಾ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಜಯಶಾಲಿಯಾಗಿರುವುದು ತಪ್ಪಿದೆ ಎಂದು ಕಿಡಿಕಾರಿದರು. ಬಜೆಟ್ ಅಧಿವೇಶನ ನೆಪ ಹೇಳದೇ ಕಾರ್ಯಕರ್ತರಿಗೆ ಅಧಿಕಾರ ನೀಡಬೇಕೆಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ವಕ್ತಾರ ವೇದವ್ಯಾಸ ಕೌಲಗಿಯ ಪಕ್ಷದ ನಾಯಕರಿಗೆ ವಿನಂತಿಸಿದ್ದಾರೆ.
ಕಳೆದ ವರ್ಷ ನಿಗಮ ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಮಾಡಿದರೂ ಅವುಗಳಿಗೆ ನಿರ್ದೇಶಕರನ್ನು ನೇಮಿಸುವ ವಿಚಾರವನ್ನು ಚುನಾವಣೆಗಳ ನೆಪದಲ್ಲಿ ಮುಂದೂಡುತ್ತಾ ಬಂದಿರುವುದು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ.[ತಾಲೂಕು ಪಂಚಾಯಿತಿ ಫಲಿತಾಂಶ : ಬಿಜೆಪಿ-ಕಾಂಗ್ರೆಸ್ ಸಮಬಲ]
ಕಳೆದ ಬಾರಿ ಮೈಸೂರಿನಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಹಿರಿಯ ನಾಯಕ ಜನಾರ್ಧನ ಪೂಜಾರಿ ಕಾರ್ಯಕರ್ತರನ್ನು ನಿರ್ಲಕ್ಷಿಸುತ್ತಿರುವುದರ ಬಗ್ಗೆ ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸಿದ್ದರು. ಕೆಲ ಶಾಸಕರು ಸಚಿವರಂತೆ ಕೇವಲ ಅವರ ವಂದಿ ಮಾದಿಗರ ಗುಂಪು ಕಟ್ಟಿಕೊಂಡು ನಿಷ್ಠಾವಂತರನ್ನು ಕಡೆಗಣಿಸುತ್ತಾ ಬಂದಿದ್ದಾರೆ.
ವಿಧಾನ ಸಭೆ ಚುನಾವಣೆ ಬರುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಅಧ್ಯಕ್ಷರು ದಿಟ್ಟ ಕ್ರಮ ತೆಗೆದುಕೊಂಡು ಕಾರ್ಯಕರ್ತರಿಗೆ ಸ್ಥಾನಮಾನ ನೀಡಬೇಕು. ಜಿಲ್ಲಾ ತಾಲೂಕು ಮಟ್ಟದಲ್ಲಿ ಸಚಿವರು, ಶಾಸಕರು, ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆಯ ಬಗ್ಗೆ ಸಮಾಲೋಚಿಸಿ ಅವರ ಕಷ್ಟ ಸುಖ ಕೇಳುವ ಪರಿಪಾಠ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.[ಚುನಾವಣೆಯಲ್ಲಿ ಗೆದ್ದವರು ಬಿದ್ದವರು, ಎಲ್ರೂ ನಮ್ಮವರೇ!]
ಕಾರ್ಯಕರ್ತರಿದ್ದರೆ ಪಕ್ಷ, ಪಕ್ಷವಿದ್ದರೆ ಅಧಿಕಾರ ಎಂಬುದನ್ನು ನಾಯಕರು ಅರ್ಥಮಾಡಿಕೊಳ್ಳಬೇಕು. ಈಗಾಗಲೇ ನಿಗಮ ಮಂಡಳಿ, ಅಧ್ಯಕ್ಷ, ಉಪಾಧ್ಯಕ್ಷರು ತಮಗೂ ಪಕ್ಷಕ್ಕೂ ಕಾರ್ಯಕರ್ತರಿಗೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಾರೆ. ಅಂತಹವರನ್ನು ಪಕ್ಷದಲ್ಲಿ ಇಟ್ಟುಕೊಳ್ಳು ಆಸಕ್ತಿ ತೋರಬಾರದು.