ಜಿನೋಮ್ ಸಿಕ್ವೆನ್ಸಿಂಗ್ ವರದಿ; ಧಾರವಾಡದಲ್ಲಿ ರೂಪಾಂತರಿ ಪತ್ತೆ ಇಲ್ಲ
ಧಾರವಾಡ, ಡಿಸೆಂಬರ್ 02; ಧಾರವಾಡದ ಎಸ್ಡಿಎಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆವರಣದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್ ಸೋಂಕು ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಜಿನೋಮ್ ಸಿಕ್ವೆನ್ಸಿಂಗ್ ಪರೀಕ್ಷೆಗೆ ಕಳಿಸಿದ್ದ ಎಲ್ಲಾ ಮಾದರಿಗಳ ಪರೀಕ್ಷೆಗಳ ವರದಿ ಸಹ ಕೈ ಸೇರಿದೆ.
ಗುರುವಾರ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಈ ಕುರಿತು ಮಾಹಿತಿ ನೀಡಿದ್ದಾರೆ, "ಇಲ್ಲಿನ ಸತ್ತೂರಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಕಾಣಿಸಿಕೊಂಡಿರುವ ಕೋವಿಡ್ ಪಾಸಿಟಿವ್ ಪ್ರಕರಣಗಳ ಬಾಕಿ ಇದ್ದ 140 ಜಿನೋಮ್ ಸಿಕ್ವೆನ್ಸಿಂಗ್ ವರದಿಗಳು ಲಭ್ಯವಾಗಿದ್ದು.ಯಾವುದೇ ಹೊಸ ಪ್ರಬೇಧದ ವೈರಾಣು ಇಲ್ಲ. ಜಿಲ್ಲೆಯ ಜನತೆ ಆತಂಕ ಪಡುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.
"ಎಸ್ಡಿಎಂ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದ ಕೋವಿಡ್ ಪ್ರಕರಣಗಳ, ಪ್ರಯೋಗಾಲಯ ಸ್ಯಾಂಪಲ್ಗಳನ್ನು ಜಿನೋಮ್ ಸಿಕ್ವೆನ್ಸಿಂಗ್ ಪತ್ತೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ಬುಧವಾರ 113 ವರದಿಗಳ ಮಾಹಿತಿ ಸಿಕ್ಕಿತ್ತು. ಬಾಕಿ ಇದ್ದ 140 ವರದಿಗಳು ಗುರುವಾರ ಸಿಕ್ಕಿದ್ದು, ಇವುಗಳಲ್ಲಿ ಯಾವುದೇ ಹೊಸ ತಳಿಯ ವೈರಾಣು ಇಲ್ಲ ಎಂಬುದು ದೃಢಪಟ್ಟಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
"ಜಿಲ್ಲೆಯ ಜನತೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ, ಆದರೆ ಸೋಂಕಿನ ಬಗ್ಗೆ ನಿರ್ಲಕ್ಷ್ಯ ತೋರದೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಕೋವಿಡ್ ನಿರೋಧಕ ಎರಡೂ ಡೋಸ್ ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು" ಎಂದು ಜಿಲ್ಲಾಧಿಕಾರಿಗಳು ಜನರಿಗೆ ಕರೆ ನೀಡಿದ್ದಾರೆ.

ಗುರುವಾರವೂ ಓಪಿಡಿ ಬಂದ್
ಕೋವಿಡ್ ಸೋಂಕಿತರ ಜಿನೋಮ್ ಸಿಕ್ವೆನ್ಸಿಂಗ್ ವರದಿ ಬರಬೇಕಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಗುರುವಾರ ಸಹ ಹೊರ ರೋಗಿಗಳ ವಿಭಾಗದ ಸೇವೆ ಹಾಗೂ ಆಸ್ಪತ್ರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಹೇರಲಾಗಿತ್ತು. 500 ಮೀಟರ್ ಸುತ್ತಮುತ್ತಲಿನ ಪ್ರದೇಶದ ಶಾಲೆ-ಕಾಲೇಜುಗಳ ಪುನರಾರಂಭಕ್ಕೆ ಅನುಮತಿಯನ್ನು ಜಿಲ್ಲಾಡಳಿತ ನೀಡಿತ್ತು.

ತಾಂತ್ರಿಕ ಸಮಿತಿಯೊಂದಿಗೆ ಚರ್ಚೆ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವರದಿಯಾದ ಪ್ರಕರಣಗಳಿಂದ ಕೋವಿಡ್ ಸೋಂಕು ಹೊರಗೆ ಹರಡದಂತೆ ನಿಯಂತ್ರಿಸಲಾಗಿದೆ. ಜಿನೋಮ್ ಸಿಕ್ವೆನ್ಸಿಂಗ್ ವರದಿಗಳು ಸಂಪೂರ್ಣವಾಗಿ ಕೈ ಸೇರಿದ್ದು, ತಾಂತ್ರಿಕ ಸಲಹಾ ತಜ್ಞರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಹೇಳಿದೆ.

ರೋಗಿಗಳಿಗೆ ಮಾಹಿತಿ ನೀಡಲಾಗಿತ್ತು
ಎಸ್ಡಿಎಂ ಆಸ್ಪತ್ರೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು, ಜಿಲ್ಲಾಡಳಿತ ಓಪಿಡಿ ಬಂದ್ ಮಾಡಿತ್ತು, ಹೊಸ ರೋಗಿಗಳ ಪ್ರವೇಶ ನಿರ್ಬಂಧಿಸಿತ್ತು. ಧಾರವಾಡ ಹಾಗೂ ಸುತ್ತಲಿನ ಜಿಲ್ಲೆಗಳಿಂದ ಹುಬ್ಬಳ್ಳಿ-ಧಾರವಾಡಕ್ಕೆ ಚಿಕಿತ್ಸೆಗಾಗಿ ಬರುವ ರೋಗಿಗಳು ಹುಬ್ಬಳ್ಳಿಯ ಕಿಮ್ಸ್, ಧಾರವಾಡ ಜಿಲ್ಲಾ ಆಸ್ಪತ್ರೆ ಅಥವಾ ಅವಳಿನಗರದ ಯಾವುದಾದರೂ ಆಸ್ಪತ್ರೆಗಳಿಗೆ ಭೇಟಿ ನೀಡಬಹುದು ಎಂದು ಜಿಲ್ಲಾಡಳಿತ ಮಾಹಿತಿ ನೀಡಿತ್ತು.

ಆತಂಕಪಡುವ ಅಗತ್ಯವಿಲ್ಲ
ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಧಾರವಾಡದ ಎಸ್ಡಿಎಂಗೆ ಭೇಟಿ ನೀಡಿದ್ದರು. ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡಿದ್ದ ಕೋವಿಡ್ ವೈರಾಣು ಸಂಪೂರ್ಣ ಹತೋಟಿಗೆ ಬಂದಿದೆ. ಜಿಲ್ಲೆಯ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವರು ಹೇಳಿದ್ದರು.
ನವೆಂಬರ್ 15 ರಿಂದ 19ರವರೆಗೆ ಡಿ. ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆದ ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿದ್ದರು. ಅವರಲ್ಲಿ ಜ್ವರ, ಕೆಮ್ಮು ಕಂಡು ಬಂದಿದ್ದರಿಂದ ತಪಾಸಣೆಗೊಳಪಡಿಸಿದಾಗ ಕೋವಿಡ್ ದೃಢಪಟ್ಟಿತ್ತು. ನಂತರ ಉಳಿದವರೆಲ್ಲರೂ ಸೇರಿ 3973 ಎಸ್ಡಿಎಂ ವೈದ್ಯರು, ವಿದ್ಯಾರ್ಥಿಗಳು, ಸಿಬ್ಬಂದಿಯನ್ನು ತಪಾಸಣೆ ಮಾಡಲಾಗಿತ್ತು. ಎಲ್ಲರ ವರದಿಗಳು ಬಂದ ಬಳಿಕ 306 ಜನರಲ್ಲಿ ಸೋಂಕು ದೃಢಪಟ್ಟಿತ್ತು.












Click it and Unblock the Notifications