KMF ಚುನಾವಣೆ, 8 ನಿರ್ದೇಶಕ ಸ್ಥಾನಗಳಿಗೆ 17 ಅಭ್ಯರ್ಥಿಗಳು: ಹೆಸ್ಕಾಂಗೆ ಹಾನಿ ಆಗಿದ್ದೆಷ್ಟು?
ಹುಬ್ಬಳ್ಳಿ, ಜೂನ್ 25: ಉತ್ತರ ಕರ್ನಾಟಕ ಭಾಗದ ಪ್ರತಿಷ್ಠಿತ ಸಂಘಗಳಲ್ಲಿ ಒಂದಾಗಿರುವ ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಸ್ಪರ್ಧಿಸಿರುವ ಉಮೇದುವಾರರ ಅಂತಿಮ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ.
ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಸೋಮವಾರ, ಮೂವರು ಕಣದಿಂದ ಹಿಂದಕ್ಕೆ ಸರಿದಿದ್ದಾರೆ. 9 ನಿರ್ದೇಶಕ ಸ್ಥಾನಗಳಲ್ಲಿ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದು, 8 ಸ್ಥಾನಗಳಿಗೆ 17 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ ಸಂಸ್ಥೆ ತಿಳಿಸಿದೆ.

ಧಾರವಾಡ ಜಿಲ್ಲೆಯ ಧಾರವಾಡ, ಅಳ್ಳಾವರ, ನವಲಗುಂದ, ಅಣ್ಣಿಗೇರಿ ತಾಲೂಕು ಕ್ಷೇತ್ರಕ್ಕೆ ಶಂಕರಪ್ಪ ಮುಗದ ಮತ್ತು ಹೇಮರಡ್ಡಿ ನಾಗರಡ್ಡಿ ಲಿಂಗರಡ್ಡಿ ಸ್ಪರ್ಧಿಸಿದ್ದಾರೆ. ಕಲಘಟಗಿ ತಾಲೂಕು ಸ್ಥಾನಕ್ಕೆ ಗೀತಾ ಮರಲಿಂಗಣ್ಣವರ ಮತ್ತು ಹನಮಂತಪ್ಪ ಕೊರವರ ಸ್ಪರ್ಧಿಸಿದ್ದಾರೆ.
ಕುಂದಗೋಳ, ಹುಬ್ಬಳ್ಳಿ ಗ್ರಾಮೀಣ ಮತ್ತು ಹುಬ್ಬಳ್ಳಿ ನಗರ ತಾಲೂಕು ಕ್ಷೇತ್ರದಲ್ಲಿ ಗಂಗಪ್ಪ ಮೊರಬದ ಮತ್ತು ಸುರೇಶ ಬಣವಿ ಕಣದಲ್ಲಿದ್ದಾರೆ. ಗದಗ ಜಿಲ್ಲೆಯ ರೋಣ ಮತ್ತು ಗಜೇಂದ್ರಗಡ ತಾಲೂಕು ಕ್ಷೇತ್ರದಲ್ಲಿ ಗದಿಗೆಪ್ಪ ಕಿರೇಸೂರ ಮತ್ತು ನೀಲಕಂಠಪ್ಪ ಅಸೂಟಿ, ಮುಂಡರಗಿ, ಶಿರಹಟ್ಟಿ, ಲಕ್ಷ್ಮೀಶ್ವರ್ ತಾಲೂಕು ಕ್ಷೇತ್ರದಲ್ಲಿ ಲಿಂಗರಾಜಗೌಡ ಪಾಟೀಲ್, ಶೇಖಣ್ಣ ಕಣದಲ್ಲಿದ್ದಾರೆ.
ಉಮೇದುವಾರರಿಗೆ ಚಿಹ್ನೆ ಹಂಚಿಕೆ
ಇನ್ನೂ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಕ್ಷೇತ್ರಕ್ಕೆ ಉಮಾಮಹೇಶ್ವರ, ಹೆಗಡೆ, ಸುರೇಶ್ಚಂದ್ರ ಹೆಗಡೆ, ಸಿದ್ದಾಪುರ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕು ಕ್ಷೇತ್ರಕ್ಕೆ ಪರಶುರಾಮ ನಾಯ್ಕ್, ಮಂಜುನಾಥ ಹೆಗಡೆ, ಸಾಧನಾ ರಾಜೇಶ್ ಭಟ್ಟ, ಯಲ್ಲಾಪುರ, ದಾಂಡೇಲಿ, ಹಳಿಯಾಳ, ಮುಂಡಗೋಡ, ಅಂಕೋಲಾ, ಜೋಯಿಡಾ ಮತ್ತು ಕಾರವಾರ ತಾಲೂಕು ಕ್ಷೇತ್ರಕ್ಕೆ ಪ್ರಶಾಂತ ಸಭಾಹಿತ, ಶಂಕರ ಹೆಗಡೆ ಸ್ಪರ್ಧಿಸಿದ್ದಾರೆ. ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳು ಉಮೇದುವಾರರಿಗೆ ಚಿಹ್ನೆ ಹಂಚಿಕೆ ಮಾಡಲಾಗಿದೆ.
ಕೆಎಂಎಫ್ ಚುನಾವಣೆ ಯಾವಾಗ?
ಇದೇ ತಿಂಗಳು ಜೂನ್ 30ರಂದು ಭಾನುವಾರ ಚುನಾವಣೆ ನಡೆಯಲಿದೆ. ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಧಾರವಾಡ ಉತ್ಪನ್ನ ಡೇರಿಯ ಮುಖ್ಯ ಕಚೇರಿ ಆವರಣದಲ್ಲಿ ಮತದಾನ, ನಂತರ ಮತ ಎಣಿಕೆ ನಡೆಯಲಿದೆ.

ಅವಿರೋಧ ಆಯ್ಕೆಯ ಮಾಹಿತಿ
ಗದಗ ಜಿಲ್ಲೆಯ ನರಗುಂದ ತಾಲೂಕು ಕ್ಷೇತ್ರದ 1 ನಿರ್ದೇಶಕ ಸ್ಥಾನಕ್ಕೆ ಹನುಮಂತಗೌಡ ಗೋವಿಂದಗೌಡ ಹಿರೇಗೌಡರ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ.
ಹೆಸ್ಕಾಂ 3 ತಿಂಗಳಲ್ಲಿ ₹33.81 ಕೋಟಿ ಹಾನಿ
ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಏಪ್ರಿಲ್ನಿಂದ ಜೂನ್ವರೆಗೆ ಗಾಳಿ ಸಹಿತ ಸುರಿದ ಭಾರಿ ಮಳೆಯಿಂದ ₹33.81 ಕೋಟಿ ಮೌಲ್ಯದ ವಿದ್ಯುತ್ ಉಪಕರಣಗಳು ಹಾನಿಯಾಗಿವೆ. ಬೆಳಗಾವಿ ಜಿಲ್ಲೆಯಲ್ಲೇ ಅತಿ ಹೆಚ್ಚು, ₹8.78 ಕೋಟಿ ನಷ್ಟವಾಗಿದೆ.
ಧಾರವಾಡ, ಬೆಳಗಾವಿ, ವಿಜಯಪುರ, ಉತ್ತರ ಕನ್ನಡ, ಗದಗ, ಹಾವೇರಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಒಟ್ಟು 1,216 ವಿದ್ಯುತ್ ಪರಿವರ್ತಕಗಳು, 10,448 ವಿದ್ಯುತ್ ಕಂಬಗಳು ಧರೆಗುಳಿದಿವೆ. ಈ ಪೈಕಿ 1,214 ವಿದ್ಯುತ್ ಪರಿವರ್ತಕಗಳು ಹಾಗೂ 10,076 ಕಂಬಗಳನ್ನು ದುರಸ್ತಿಗೊಳಿಸಲಾಗಿದೆ. ಹಾನಿಗೊಳಗಾದ 94.47 ಕಿ.ಮೀ.ಉದ್ದದ ವಿದ್ಯುತ್ ತಂತಿಗಳಲ್ಲಿ 92.24 ಕಿ.ಮೀ ಉದ್ದದ ವಿದ್ಯುತ್ ತಂತಿ ದುರಸ್ತಿ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ 2,563 ವಿದ್ಯುತ್
ಕಂಬಗಳು ಉರುಳಿದ್ದರೆ, 477 ವಿದ್ಯುತ್ ಪರಿವರ್ತಕಗಳು ಹಾನಿಯಾಗಿದ್ದವು. 2.54 ಕಿ.ಮೀ. ಉದ್ದ ತಂತಿ ತುಂಡಾಗಿತ್ತು. ಬಹುತೇಕ ಎಲ್ಲ ದುರಸ್ತಿ ಕಾರ್ಯಗಳು ಮುಕ್ತಾಯದ ಹಂತದಲ್ಲಿವೆ. ಸಿಬ್ಬಂದಿ ದುರಸ್ತಿ ಕಾರ್ಯ ಕೈಗೊಂಡು ಪೂರ್ಣಗೊಳಿಸಿದ್ದಾರೆ' ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ರೋಷನ್ ಮಾಹಿತಿ ನೀಡಿದ್ದಾರೆ.












Click it and Unblock the Notifications