ಸಹಿ ಸರಿ ಇಲ್ಲ ಎಂದ ಬ್ಯಾಂಕ್; 11 ಲಕ್ಷ ರೇವಣಿ ನೀಡಲು ಆಯೋಗದ ಆದೇಶ
ಮಂಡ್ಯ, ಸೆಪ್ಟೆಂಬರ್ 19; ಸಹಿ ಸರಿ ಇಲ್ಲ ಎಂದು ಹೇಳಿದ್ದ ಬ್ಯಾಂಕ್ ವಿರುದ್ಧ ಮಹಿಳೆಯೊಬ್ಬರು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು. ಮೃತ ತಂದೆಯ ಠೇವಣಿ ಹಾಗೂ ಪರಿಹಾರವನ್ನು ನೀಡಲು ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಬ್ಯಾಂಕ್ಗೆ ಆದೇಶ ನೀಡಿದೆ.
ಹುಬ್ಬಳ್ಳಿ ನಾಗಶೆಟ್ಟಿಕೊಪ್ಪದ ನಿವಾಸಿ ಅರ್ಚನಾ ಮಲ್ಲಿಕಾರ್ಜುನ ಮಳಗಿಗೆ ತಂದೆ ದಿ. ಮಲ್ಲಿಕಾರ್ಜುನ ಮಳಗಿ ಗದಗ ಜಿಲ್ಲೆ ರೋಣ ತಾಲೂಕಿನ ಪ್ರೈಮರಿ ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕನಲ್ಲಿ ವಿವಿಧ ದಿನಾಂಕಗಳಂದು ಇರಿಸಿದ್ದ 11 ಲಕ್ಷ 55 ಸಾವಿರ ರೂ. ಠೇವಣಿ ಹಣವನ್ನು ನೀಡುವಂತೆ ಆದೇಶ ನೀಡಲಾಗಿದೆ.
ರೇವಣಿ ಹಣವನ್ನು ಬಡ್ಡಿಯ ಸಹಿತವಾಗಿ ಹಾಗೂ 5 ಸಾವಿರ ರೂ. ದೈಹಿಕ ಪರಿಹಾರ, 2 ಸಾವಿರ ರೂ. ಫಿರ್ಯಾಧಿ ವೆಚ್ಚದೊಂದಿಗೆ ಪಾವತಿಸಬೇಕು ಎಂದು ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ದೂರುದಾರರಾದ ಅರ್ಚನಾ ಅವರ ತಂದೆ ಮಲ್ಲಿಕಾರ್ಜುನ ಮಳಗಿ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ 2019ರ ಮೇ 23 ರಂದು ನಿಧನ ಹೊಂದಿದ್ದರು. ಇದಕ್ಕೂ ಮುನ್ನ ಅವರ ತಾಯಿ ಶಶಿಕಲಾ ಮಲ್ಲಿಕಾರ್ಜುನ ಮಳಗಿ 2004ರ ಜನವರಿ 23ರಂದು ಹುಬ್ಬಳ್ಳಿಯಲ್ಲಿ ನಿಧನ ಹೊಂದಿದ್ದರು.
ಮಲ್ಲಿಕಾರ್ಜುನ ಮಳಗಿ ಗದಗ ಜಿಲ್ಲೆ ರೋಣ ತಾಲೂಕಿನ ಪ್ರೈಮರಿ ಟೀಚರ್ಸ್ ಕೋ- ಆಪರೇಟಿವ್ ಬ್ಯಾಂಕನಲ್ಲಿ ವಿವಿಧ ದಿನಾಂಕಗಳಂದು 11 ಲಕ್ಷ 55 ಸಾವಿರ ರೂ. ಠೇವಣಿ ಹಣವನ್ನು ಇರಿಸಿದ್ದರು. ಶಾಂತವ್ವ ಸುರೇಶ ಅಂಗಡಿ ಎಂಬ ಮಹಿಳೆಯ ಹೆಸರಿಗೆ ಠೇವಣಿಯನ್ನು ನಾಮನಿರ್ದೇಶನ ಮಾಡಿದ್ದರು.
ಮಲ್ಲಿಕಾರ್ಜುನ ಮಳಗಿ ನಿಧನದ ನಂತರ ಮಗಳಾದ ಅರ್ಚನಾ ವಾರಸುದಾರರ ಪ್ರಮಾಣ ಪತ್ರದೊಂದಿಗೆ ಬ್ಯಾಂಕಿಗೆ ಅರ್ಜಿ ಸಲ್ಲಿಸಿ ತಮ್ಮ ತಂದೆಯ ಠೇವಣಿ ಹಣ ಪಾವತಿಸಲು ಕೋರಿದ್ದರು. ಬ್ಯಾಂಕಿನವರು ನಾಮನಿರ್ದೇಶನ ಹೊಂದಿದ ವ್ಯಕ್ತಿಯ ಒಪ್ಪಿಗೆ ಪತ್ರ ತರಲು ಸೂಚಿಸಿದ್ದರು.
ಅರ್ಚನಾ ತೆಗೆದುಕೊಂಡು ಬಂದ ಒಪ್ಪಿಗೆ ಪತ್ರದಲ್ಲಿನ ಸಹಿಗೂ ಬ್ಯಾಂಕಿನ ನಾಮ ನಿರ್ದೇಶನದಲ್ಲಿನ ಸಹಿಗೂ ವ್ಯತ್ಯಾಸ ಇತ್ತು. ಬ್ಯಾಂಕು ಒಪ್ಪಿಗೆ ಪತ್ರ ಸ್ವೀಕರಿಸಲಿಲ್ಲ. ನಂತರ ಅರ್ಚನಾ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದರು.
ಅರ್ಜಿದಾರರು ಹಾಗೂ ಎದುರುದಾರರ ವಾದಗಳನ್ನು ಆಲಿಸಿದ ಆಯೋಗವು ಬ್ಯಾಂಕು ಠೇವಣಿ ಮರುಪಾವತಿಸುವಲ್ಲಿ ಸಮಂಜಸ ಮತ್ತು ಕಾನೂನು ರೀತ್ಯ ವ್ಯವಹರಿಸಿ ಕ್ರಮಕೈಗೊಳ್ಳಲು ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಅರ್ಜಿದಾರರಾದ ಅರ್ಚನಾ ಮಳಗಿ ಅವರಿಗೆ ಠೇವಣಿ ಹಣ, ಬಡ್ಡಿ ಹಾಗೂ ಪರಿಹಾರ ಒದಗಿಸಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಜಿ. ಎಂ. ಕುಂಬಾರ, ಸದಸ್ಯರಾದ ವಿ.ಎ.ಬೋಳಶೆಟ್ಟಿ ಹಾಗೂ ಪಿ.ಸಿ. ಹಿರೇಮಠ ಸೆಪ್ಟೆಂಬರ್ 17ರಂದು ಆದೇಶ ಹೊರಡಿಸಿದ್ದಾರೆ.
ಸದಸ್ಯ ಸ್ಥಾನಕ್ಕೆ ಅರ್ಜಿ ಆಹ್ವಾನ; ಧಾರವಾಡ ಜಿಲ್ಲಾ ಪೊಲೀಸ್ ದೂರು ಪ್ರಾದಿಕಾರಕ್ಕೆ ನಾಗರಿಕ ಸೇವಾ ಸಮಾಜದಿಂದ ಒಬ್ಬ ಹಾಗೂ ನಿವೃತ್ತ ನಾಗರೀಕ ಸೇವಾ ಅಧಿಕಾರಿಯನ್ನು ಸದ್ಯಸ್ಯರನ್ನಾಗಿ ನೇಮಕ ಮಾಡಲು ಅರ್ಜಿ ಕರೆಯಲಾಗಿದೆ.
ಈಗಾಗಲೇ ಇರುವ ಸದಸ್ಯರ ಅವಧಿಯು ಮೂರು ವರ್ಷಗಳಾಗಿದ್ದು, ಈಗಾಗಲೇ ಅವಧಿ ಮುಕ್ತಾಯಗೊಂಡಿರುವುದರಿಂದ ಧಾರವಾಡ ಜಿಲ್ಲಾ ಪೊಲೀಸ್ ದೂರು ಪ್ರಾದಿಕಾರಕ್ಕೆ ಹೊಸದಾಗಿ ನಾಗರಿಕ ಸೇವಾ ಸಮಾಜದಿಂದ ಒಬ್ಬ ಸದಸ್ಯ ಮತ್ತು ಒಬ್ಬ ನಿವೃತ್ತ ನಾಗರೀಕ ಸೇವಾ ಅಧಿಕಾರಿಯನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತಿದೆ.
ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಪ್ಟೆಂಬರ್ 30 ರೊಳಗಾಗಿ ಧಾರವಾಡ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಬೇಕು. ಆಸಕ್ತರು ತಮ್ಮ ಪರಿಚಯ ಪತ್ರವನ್ನು ಮತ್ತು ತಮ್ಮ ವಿವರಗಳನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಇ-ಮೇಲ್ ಮೂಲಕ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2233840, 2233888 ಸಂಖ್ಯೆಗೆ ಕರೆ ಮಾಡಬಹುದು. ವಿವರಗಳನ್ನು ಸಲ್ಲಿಕೆ ಮಾಡಲು ವಿಳಾಸ [email protected].












Click it and Unblock the Notifications