ಧಾರವಾಡ-ಬೆಂಗಳೂರು ವಂದೇ ಭಾರತ ರೈಲು ಸಂಚಾರಕ್ಕೆ ಕ್ರಮ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
ಧಾರವಾಡ, ಅಕ್ಟೋಬರ್ 11: ಅತಿ ವೇಗದ ವಿದ್ಯುತ್ಚಾಲಿತ ಧಾರವಾಡ-ಬೆಂಗಳೂರು ವಂದೇ ಭಾರತ ರೈಲು ಸಂಚಾರವನ್ನು ಫೆಬ್ರವರಿ ನಂತರ ಅನುಷ್ಠಾನಗೊಳಿಸುವುದೆಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಮಂಗಳವಾರ ಅವರು 20 ಕೋಟಿ ರೂ.ವೆಚ್ಚದಲ್ಲಿ ಪುನರಾಭಿವೃದ್ಧಿಗೊಂಡ ಧಾರವಾಡದ ರೈಲು ನಿಲ್ದಾಣವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಧಾರವಾಡದ ರೈಲು ವಿದ್ಯುದ್ಧೀಕರಣ ಶೇ.70 ರಷ್ಟು ಪೂರ್ಣಗೊಂಡಿದ್ದು ಫೆಬ್ರವರಿಯಲ್ಲಿ ಪೂರ್ಣಗೊಳ್ಳಲಿದೆ. ನಂತರ ಧಾರವಾಡ-ಬೆಂಗಳೂರು ವಂದೇ ಭಾರತ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಹುಬ್ಬಳ್ಳಿ-ನಿಜಾಮುದ್ದೀನ್ ರೈಲು ವೇಳಾಪಟ್ಟಿ
ಧಾರವಾಡ ಪೇಡಾವನ್ನು ಕೊಂಡಾಡಿದ ಸಚಿವ ಅಶ್ವಿನಿ ವೈಷ್ಣವ ಅವರು ಆರಂಭದಲ್ಲೇ "ಪೇಡಾನಗರ ಧಾರವಾಡ ಜನತೆಗೆ ನಮಸ್ಕಾರಗಳು, ನೀವು ನನಗೆ ಪೇಡಾ ಕೊಟ್ಟಿದ್ದೀರಿ ನಾವು ನಿಮಗೆ ವಂದೇ ಭಾರತ ರೈಲನ್ನು ಕೊಡುಗೆಯಾಗಿ ಕೊಡುತ್ತೇವೆ" ಎಂದ ಅವರು ತಪೋವನ ಹತ್ತಿರ ಎಲ್ಸಿ 300 ಮೇಲ್ಸೆತುವೆಗೆ ತಕ್ಷಣವೇ ವಾಟ್ಸ್ಅಪ್ನಲ್ಲಿ ಹಿರಿಯ ಅಧಿಕಾರಿಗಳಿಂದ ದೊರೆತ ಅನುಮೋದನೆಯನ್ನು ಸ್ಳಳದಲ್ಲೇ ಓದಿ ಹೇಳಿದರು.
ಹುಬ್ಬಳ್ಳಿ-ಅಂಕೋಲಾ ರೈಲುಮಾರ್ಗಕ್ಕೆ ಸಿದ್ಧ
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗವು ಈ ಭಾಗದ ಆರ್ಥಿಕತೆಯ ಬೆಳವಣಿಗೆಗೆ ಅತೀ ಮಹತ್ವದಾಗಿದ್ದು, ಕೆಲ ಪರಿಸರವಾದಿಗಳು ಇದನ್ನು ವಿರೋಧಿಸಿರುವುದರಿಂದ ಹೈಕೋರ್ಟ್ನಲ್ಲಿ ಪ್ರಕರಣ ಬಾಕಿ ಇದೆ. ಪಶ್ಚಿಮ ಘಟ್ಟಗಳ ಪರಿಸರಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಯೋಜನೆಯನ್ನು ಕೈಗೊಳ್ಳಲು ತಾವು ಸಿದ್ದರಿದ್ದು, ಸ್ಥಳೀಯ ಪರಿಸರವಾದಿಗಳ ಮನ ಓಲೈಸುವಂತೆ ತಿಳಿಸಿದರು.
ಹುಬ್ಬಳ್ಳಿ- ವಾರಣಾಸಿಗೆ ವಾರಕ್ಕೆ ಎರಡು ದಿನ ರೈಲು ಸಂಚಾರ
ಹುಬ್ಬಳ್ಳಿ-ನಿಜಾಮುದ್ದಿನ್ ರೈಲನ್ನು ಪಂಡಿತ ಸವಾಯಿ ಗಂಧರ್ವ ಎಂದು ಮರುನಾಮಕರಣ ಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ವಾರಣಾಸಿಗೆ ವಾರಕ್ಕೆ ಎರಡು ದಿನ ರೈಲು ಸಂಚಾರ ನಿಗದಿಗೊಳಿಸುವ ಬಗ್ಗೆ ವಾರಣಾಸಿಯಲ್ಲಿ ರೇಲ್ವೆ ಸಂಚಾರದ ಸಮಯವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಲ್ಹಾದ್ ಜೋಶಿ ಪ್ರಭಾವಿ ಮಂತ್ರಿ
ಈ ಎಲ್ಲ ಬೇಡಿಕೆಗಳನ್ನು ರೇಲ್ವೆ ಸಚಿವರ ಗಮನಕ್ಕೆ ತಂದ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರ ಕಾರ್ಯಕ್ಷಮತೆಯನ್ನು ಕೊಂಡಾಡಿದ ಸಚಿವ ಅಶ್ವಿನಿ ವೈಷ್ಣವ ಅವರು ಜೋಶಿ ಅವರು ನನ್ನ ಗುರುಗಳು ಎಂದು ಸಂಭೋದಿಸಿದರಲ್ಲದೇ ಪಾರ್ಲಿಮೆಂಟ್ನಲ್ಲಿ ಯಾವ ರೀತಿ ಪ್ರಶ್ನೋತ್ತರಕ್ಕೆ ಅಣಿಯಾಗಬೇಕೆಂಬುದನ್ನು ಮಾರ್ಗದರ್ಶನ ನೀಡುತ್ತಿರುತ್ತಾರೆ. ಸಚಿವ ಪ್ರಲ್ಹಾದ್ ಜೋಶಿ ಅವರು ಮೋದಿ ಅವರ ನಿಕಟ ಹಾಗೂ ಪ್ರಭಾವಿ ಮಂತ್ರಿಯಲ್ಲೊಬ್ಬರಾಗಿದ್ದಾರೆ. ಮೋದಿಯವರಿಂದಾಗಿ ಈ ದೇಶದ ಸಮಗ್ರ ಅಭಿವೃದ್ಧಿಯ ಚಿತ್ರಣ ಬದಲಾಗಿದ್ದು ಮುಂಬರುವ ಪೀಳಿಗೆ ಮೋದಿಯವರ ನೇತೃತ್ವದಲ್ಲಿ ಬೃಹತ್ ಭಾರತವನ್ನು ಕಾಣಲಿದ್ದಾರೆ ಎಂದು ನುಡಿದರು.
ವೈಷ್ಣವ್ರಿಂದ ರೈಲ್ವೆ ಇಲಾಖೆಗೆ ಆಧುನಿಕ ಸ್ಪರ್ಶ
ಕೇಂದ್ರ ಗಣಿ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಪ್ರಲ್ಹಾದ ಜೋಶಿ ಮಾತನಾಡಿ, ಸಚಿವ ಅಶ್ವಿನಿ ವೈಷ್ಣವ್ ಐಎಎಸ್ ಅಧಿಕಾರಿಯಾಗಿ, ಉದ್ಯಮಿಯಾಗಿ, ವಾಜಪೇಯಿ ಅವರ ಆಪ್ತ ಕಾರ್ಯದರ್ಶಿಯಾಗಿ ಈಗ ಮೋದಿಯವರ ನೇತೃತ್ವದಲ್ಲಿ ರೈಲ್ವೆ ಹಾಗೂ ತಂತ್ರಜ್ಞಾನ ಸಚಿವರಾಗಿದ್ದಾರೆ. ರೈಲ್ವೆಯಲ್ಲಿ ಹೊಸ ಹೊಸ ಆಧುನಿಕ ತಂತ್ರಜ್ಞಾನವನ್ನು ಸಚಿವರು ತರುತ್ತಿದ್ದಾರೆ ಎಂದು ವೈಷ್ಣವ್ರನ್ನು ಪ್ರಶಂಶಸಿದರು.
ರೇಲ್ವೆ ಪ್ರಯಾಣಿಕರಿಗೆ ಒಟ್ಟು 62 ಸಾವಿರ ಕೋಟಿ ಸಬ್ಸಿಡಿ ನೀಡಲಾಗಿದೆ. ಆತ್ಮ ನಿರ್ಭರ ಭಾರತ ಯೋಜನೆಯಲ್ಲಿ ಕವಚ ಎಂಬ ವಿಶ್ವದರ್ಜೆ ರೇಲ್ವೆ ಸುರಕ್ಷಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. 2014-2022 ರ ಅಭಿವೃದ್ಧಿಯಲ್ಲಿ 30.446 ಕಿ.ಮೀ ವಿದ್ಯುದ್ದೀಕರಣ ಮಾಡಲಾಗಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.