ಸಾಲ ವಾಪಸ್ ಕೊಡಲು ಕಿರಿಕ್ ಮಾಡಿದ್ದಕ್ಕೆ ಕೊಂದೇಬಿಟ್ಟ
ಧಾರವಾಡ, ಆಗಸ್ಟ್ 11: ನಗರದಲ್ಲಿ ಈಚೆಗೆ ನಡೆದ ಎರಡು ಕೊಲೆ ಪ್ರಕರಣವನ್ನು ಭೇದಿಸಿರುವ ಧಾರವಾಡ ಪೊಲೀಸರು, ಮೂವರನ್ನು ವಶಕ್ಕೆ ಪಡೆದಿದ್ದಾರೆ. ಮಹ್ಮದ್ ಆರೀಫ್ ಮಹಮ್ಮದ್ ಶೇಖ್, ಇಮ್ರಾನ್ ಅಸ್ಲಂ ಸಾಬ್, ಸುಲೇಮಾನ್ ಮಹ್ಮದ್ ಇಬ್ರಾಹಿಂ ಬಂಧಿತರು.
ಧಾರವಾಡ ಎಸಿಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಕಮಿಷನರ್ ಪಾಂಡುರಂಗ ರಾಣೆ, ಆಗಸ್ಟ್ 9ರಂದು ಮಾಳಾಪುರ ಸರ್ಕಲ್ ನಲ್ಲಿ ಕಂದಾಯ ಇಲಾಖೆ ಎಸ್ ಡಿಎ ಮಂಜುನಾಥ ಪಂಥರ ಹಾಗೂ ಎಪಿಎಂಸಿ ವಸತಿಗೃಹದಲ್ಲಿ ಜುಬೇರ್ ಅಹ್ಮದ್ ನೆಗಳೂರು ಎಂಬುವರನ್ನು ಬಂಧಿತರು ಕೊಲೆ ಮಾಡಿದ್ದರು ಎಂದು ತಿಳಿಸಿದರು.[ಧಾರವಾಡದಲ್ಲಿ ಮಚ್ಚಿನೇಟಿಗೆ ಮಾಳಾಪುರ ಮಂಜುನಾಥ ಬಲಿ]

ವಿವರ: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಂಜುನಾಥ ಹಾಗೂ ಜುಬೇರ್ ಕೊಲೆಯಾಗಿದೆ. ಮಹ್ಮದ್ ಆರೀಫ್ ನಿಂದ ಮಂಜುನಾಥ 1.50 ಲಕ್ಷ ಸಾಲ ಪಡೆದಿದ್ದ. ಅದನ್ನು ವಾಪಸ್ ಕೊಡದೆ ಸತಾಯಿಸುತ್ತಿದ್ದ ಒಮ್ಮೆ ಹಣ ಕೇಳಲು ಹೋದಾಗ ಮಂಜುನಾಥ ಹಾಗೂ ಜುಬೇರ್ ಸೇರಿ ಮಹ್ಮದ್ ಆರೀಫ್ ಮೇಲೆ ಹಲ್ಲೆ ನಡೆಸಿದ್ದರು.
ಈ ಘಟನೆಯಿಂದ ಕೋಪಗೊಂಡಿದ್ದ ಮಹ್ಮದ್ ಆರೀಫ್ ತನ್ನಿಬ್ಬರು ಸಹಚರರೊಂದಿಗೆ ಸೇರಿ ಮಂಜುನಾಥನನ್ನು ನಡು ರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿ, ಆ ನಂತರ ಜುಬೇರ್ ಅಹ್ಮದ್ ನನ್ನು ಹಳೇ ಎಪಿಎಂಸಿ ವಸತಿಗೃಹದ ಬಳಿ ಕೊಲೆ ಮಾಡಿ ಪರಾರಿಯಾಗಿದ್ದ. ಕೆಲಗೇರಿ ಬಳಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.[ಪಡಿತರ ಕೂಪನ್ ಗೊಂದಲ: ಹುಬ್ಬಳ್ಳಿಯಲ್ಲಿ ಕಲ್ಲು ತೂರಾಟ]
ಇಬ್ಬರ ಬಂಧನ:
ಹುಬ್ಬಳ್ಳಿಯ ವಿದ್ಯಾನಗರದ ಶೆಟ್ಟರ್ ಲೇಔಟ್ ನಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಟ್ರಾನ್ಸ್ ಪೋರ್ಟ್ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಉಮೇಶ ಎಂಬಾತನನ್ನು ವಾಸು ಪೂಜಾರ ಮತ್ತು ಮಂಜುನಾಥ ಮಾದಪ್ಪನವರ ಕೊಲೆ ಮಾಡಿದ್ದರು.
ಟ್ರಾನ್ಸ್ ಪೋರ್ಟ್ ಕಂಪನಿಯಲ್ಲಿದ್ದ ಉಮೇಶ ಅಲ್ಲಿ ಕಳ್ಳತನ ಮಾಡಿ, ನಂತರ ಕೆಲಸ ಬಿಟ್ಟಿದ್ದ. ವಾಸು ಮತ್ತು ಮಂಜುನಾಥ ಕಾರವಾರ ರಸ್ತೆಯ ಹೊರಭಾಗಕ್ಕೆ ಉಮೇಶನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದರು. ಆ ನಂತರ ಶವವನ್ನು ಶೆಟ್ಟರ್ ಲೇಔಟ್ ನಲ್ಲಿ ಬಿಸಾಡಿದ್ದರು.












Click it and Unblock the Notifications