ಧಾರವಾಡ ಜಿಲ್ಲಾಧಿಕಾರಿ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಧಾರವಾಡ, ಮೇ 18: ಧಾರವಾಡದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿಗೆ ಗುರುವಾರ ಲಾರಿ ಡಿಕ್ಕಿ ಹೊಡೆದಿದೆ. ಜಿಲ್ಲಾಧಿಕಾರಿಗೆ ಯಾವುದೇ ಪೆಟ್ಟಾಗಿಲ್ಲ. ಬೆಳಗಾವಿಯಿಂದ ಧಾರವಾಡಕ್ಕೆ ಬರುತ್ತಿದ್ದಾಗ ಎಂ.ಕೆ ಹುಬ್ಬಳ್ಳಿ ಬಳಿ ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ರಸ್ತೆ ಉಬ್ಬು ದಾಟುತ್ತಿದ್ದಾಗ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.
ಆ ನಂತರ ಜಿಲ್ಲಾಧಿಕಾರಿ ಬೇರೆ ವಾಹನದಲ್ಲಿ ಪ್ರಯಾಣಿಸಿದರು. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಆತ್ಮಹತ್ಯೆ : ಮದ್ಯದ ಅಮಲಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಧಾರವಾಡ ತಾಲ್ಲೂಕಿನ ರಾಮಾಪುರದ ಸುರೇಶ ಅಂಬೇಕರ (38) ಗುರುವಾರ ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ್ದ ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುಡಿತದ ಚಟ ಇದ್ದ ಸುರೇಶ್ ಕಬ್ಬಿಗೆ ಸಿಂಪಡಿಸುವ ವಿಷಕಾರಕ ಔಷಧಿ ಸೇವಿಸಿದ್ದಾರೆ ಎಂದು ಗ್ರಾಮೀಣ ಠಾಣೆ ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.

ಯುವಕ ಸಾವು: ಬೈಕ್ ನಿಂದ ಜಾರಿ ಬಿದ್ದು ಗಾಯಗೊಂಡಿದ್ದ ಧಾರವಾಡ ತಾಲೂಕು ಮುಮ್ಮಿಗಟ್ಟಿ ತಾಂಡಾದ ಸಂತೋಷ ಲಮಾಣಿ (25) ಮೃತಪಟ್ಟಿದ್ದಾರೆ. ಬೇಲೂರು ಕೈಗಾರಿಕಾ ಪ್ರದೇಶದಿಂದ ಗ್ರಾಮಕ್ಕೆ ಮರಳುವಾಗ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ ಸಂತೋಷನನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications