Vande Bharat Express: ಧಾರವಾಡ-ಬೆಂಗಳೂರು ವಂದೇ ಭಾರತ್ ವೇಳಾಪಟ್ಟಿ ಪರಿಷ್ಕರಣೆ?
ಧಾರವಾಡ, ಅಕ್ಟೋಬರ್ 05: ಕರ್ನಾಟಕದ 2ನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ಸಂಚಾರ ನಡೆಸುತ್ತದೆ. ಈ ರೈಲು ವೇಳಾಪಟ್ಟಿ ಬಗ್ಗೆ ಮೊದಲಿನಿಂದಲೂ ಅಪಸ್ವರ ಇದ್ದೇ ಇದೆ. ಈಗ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಧಾರವಾಡ-ಬೆಂಗಳೂರು ನಡುವಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಬೇಕು ಎಂದು ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣಗೆ ಮನವಿ ಸಲ್ಲಿಸಲಾಗಿದೆ.
ಈ ಕುರಿತು ಮಹೇಶ ಟೆಂಗಿನಕಾಯಿ, ಬಿಜೆಪಿ ಶಾಸಕರು, ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರ ಸಚಿವ ವಿ. ಸೋಮಣ್ಣಗೆ ಪತ್ರವನ್ನು ಬರೆದಿದ್ದಾರೆ. ಧಾರವಾಡ-ಬೆಂಗಳೂರು ನಗರಗಳ ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವಂತೆ ಮನವಿ ಸಲ್ಲಿಸಲಾಗಿದ್ದು, ಮನವಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಶಾಸಕರು ಪೋಸ್ಟ್ ಹಾಕಿದ್ದಾರೆ.

ಪತ್ರದಲ್ಲಿ ಏನಿದೆ?; ಈ ಪತ್ರ ಧಾರವಾಡ-ಬೆಂಗಳೂರು ನಗರಗಳ ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ರೈಲಿನ ವೇಳಾಪಟ್ಟಿ ಬದಲಾವಣೆ ಮಾಡುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ, ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ಮಹತ್ತರ ಕೊಡುಗೆಗಳಲ್ಲಿ ಒಂದಾದ ವಂದೇ ಭಾರತ್ ರೈಲು ಕಳೆದ ಒಂದು ವರ್ಷದಿಂದ ಧಾರವಾಡ-ಬೆಂಗಳೂರು ನಗರಗಳ ನಡುವೆ ಸಂಚರಿಸುತ್ತಿದ್ದು, ಸದರಿ ರೈಲಿನ ಸಂಚಾರದಿಂದ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ಹಾಗೂ ಸುತ್ತಮುತ್ತಲಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳ ನಾಗರಿಕರು ಕೆಲವೇ ಘಂಟೆಗಳ ಪ್ರಯಾಣದ ಅವಧಿಯಲ್ಲಿ ಬೆಂಗಳೂರು ತಲುಪಿ ತಮ್ಮ ಕೆಲಸ-ಕಾರ್ಯಗಳನ್ನು ಪೂರೈಸಿಕೊಳ್ಳಲು ಅತ್ಯಂತ ಅನುಕೂಲಕರವಾಗಿದೆ.
ಆದರೆ, ಸದ್ಯದ ವಂದೇ ಭಾರತ್ ರೈಲು ಧಾರವಾಡದಿಂದ ಮಧ್ಯಾಹ್ನ 1-15ಕ್ಕೆ ಹೊರಟು ಬೆಂಗಳೂರಿಗೆ ಸಂಜೆ 7-45ಕ್ಕೆ ತಲುಪುವುದರಿಂದ ನಾಗರಿಕರು ಪ್ರಯಾಣಿಸಿದ ದಿನವೇ ಕೆಲಸಗಳನ್ನು ಮುಗಿಸಿಕೊಂಡು ಮರಳಿ ಬರಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಆದ್ದರಿಂದ ಸದರಿ ವಂದೇ ಭಾರತ್ ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿ ಬೆಳಗ್ಗೆ 5ಕ್ಕೆ ಧಾರವಾಡದಿಂದ ಹೊರಟು, ಪುನಃ ಸಂಜೆ 5ಕ್ಕೆ, ಬೆಂಗಳೂರಿನಿಂದ ಹೊರಟರೆ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಮನವಿ ಮಾಡಲಾಗಿದೆ. ಆದ್ದರಿಂದ ಸದರಿ ಮನವಿಯನ್ನು ಪರಿಶೀಲಿಸಿ ವಂದೇ ಭಾರರ್ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತೇನೆ ಎಂದು ಶಾಸಕರು ಪತ್ರದಲ್ಲಿ ವಿವರಿಸಿದ್ದಾರೆ.
ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲಿಗೆ ತುಮಕೂರಿನಲ್ಲಿ ನಿಲುಗಡೆ ಬೇಕು ಎಂಬುದು ಬೇಡಿಕೆಯಾಗಿತ್ತು. ಆಗಸ್ಟ್ ತಿಂಗಳಿನಲ್ಲಿ ಈ ಬೇಡಿಕೆಗೆ ಒಪ್ಪಿಗೆ ನೀಡಲಾಗಿದೆ. ಈಗ ರೈಲು ತುಮಕೂರಿನಲ್ಲಿಯೂ ನಿಲುಗಡೆಗೊಳ್ಳುತ್ತಿದೆ. ಈಗ ಧಾರವಾಡದಿಂದ ಹೊರಡುವ ವೇಳಾಪಟ್ಟಿ ಬದಲಾವಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ.
ಸದ್ಯ ರೈಲು ಸಂಖ್ಯೆ 20662 ಧಾರವಾಡ-ಕೆಎಸ್ಆರ್ ಬೆಂಗಳೂರು ನಡುವೆ 6 ದಿನ (ಮಂಗಳವಾರ ಹೊರತುಪಡಿಸಿ) ಸಂಚಾರ ನಡೆಸುತ್ತಿದೆ. ಬಿಳಿ ಬಣ್ಣದ ವಂದೇ ಭಾರತ್ ರೈಲು 13:15ಕ್ಕೆ ಧಾರವಾಡದಿಂದ ಹೊರಟು, ಎಸ್ಎಸ್ಎಸ್ ಹುಬ್ಬಳ್ಳಿ 13:35/ 13:40, 15:38/ 15:40 ದಾವಣಗೆರೆ, 18:18/ 18:20 ತುಮಕೂರು, 18.58/19:00 ಯಶವಂತಪುರ, 19:45 ಕೆಎಸ್ಆರ್ ಬೆಂಗಳೂರು ಆಗಮಿಸಿ/ ನಿರ್ಗಮಿಸಲಿದೆ.
ರೈಲು ಸಂಖ್ಯೆ 20661 ಕೆಎಸ್ಆರ್ ಬೆಂಗಳೂರು-ಧಾರವಾಡ 6 ದಿನ (ಮಂಗಳವಾರ ಹೊರತುಪಡಿಸಿ) 5:45ಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ನಿರ್ಗಮಿಸುತ್ತದೆ. ಯಶವಂತಪುರ 05.55/ 05.57, ತುಮಕೂರು 06.32/ 06.34, ದಾವಣಗೆರೆ 09.15/ 09.17, ಎಸ್ಎಸ್ಎಸ್ ಹುಬ್ಬಳ್ಳಿ 11.00/ 11.05, ಧಾರವಾಡ 12.10 ಆಗಮಿಸಿ/ ನಿರ್ಗಮಿಸಲಿದೆ.
ಪ್ರಧಾನಿ ನರೇಂದ್ರ ಮೋದಿ ಜೂನ್ 27, 2023ರಂದು ಮಧ್ಯಪ್ರದೇಶದ ಭೋಪಾಲ್ನ ರಾಣಿ ಕಮಲಾಪತಿ ರೈಲು ನಿಲ್ದಾಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲಿಗೆ ಚಾಲನೆ ನೀಡಿದ್ದರು. ಸದ್ಯ ರೈಲು ಯಶವಂತಪು, ತುಮಕೂರು, ದಾವಣಗೆರೆ, ಹುಬ್ಬಳ್ಳಿಯಲ್ಲಿ ನಿಲುಗಡೆಯನ್ನು ಹೊಂದಿದೆ.












Click it and Unblock the Notifications