ಕೊರೊನಾ; ರೈತರಿಂದ ನೇರವಾಗಿ ಮನೆ ಬಾಗಿಲಿಗೆ ತರಕಾರಿ
ಧಾರವಾಡ, ಮಾರ್ಚ್ 27: ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಮಾದರಿ ಎಂಬಂತೆ ಕೆಲಸವೊಂದು ನಡೆದಿದೆ. ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ಸಹಕಾರದಲ್ಲಿ ಕಾಯಕ ಯೋಗಿ ರೈತ ಉತ್ಪಾದಕರ ಸಂಘ ಧಾರವಾಡ ನಗರದಲ್ಲಿರುವ ಗ್ರಾಹಕರ ಮನೆ ಬಾಗಿಲಿಗೆ ಎಲ್ಲ ರೀತಿಯ ತರಕಾರಿ ಪದಾರ್ಥಗಳನ್ನು ಒಯ್ದು ಮಾರಾಟ ಮಾಡುತ್ತಿದೆ.
ರೈತರು ತಮ್ಮ ತೋಟದಲ್ಲಿ ಬೆಳೆದಿರುವ ವಿವಿಧ ರೀತಿ ತರಕಾರಿಗಳನ್ನು ತಾವೇ ಆರಂಭಿಸಿರುವ ಕಾಯಕಯೋಗಿ ರೈತ ಉತ್ಪಾದಕ ಒಕ್ಕೂಟದ ಮೂಲಕ ದಲ್ಲಾಳಿಗಳ ಮದ್ಯಸ್ಥಿಕೆಗಾರರ ಹಾವಳಿ ಇಲ್ಲದೆ ಗ್ರಾಹಕರಿಗೆ ಮನೆವರೆಗೆ ಬಂದು ಮಾರಾಟ ಮಾಡುತ್ತಿದ್ದಾರೆ.
ಅಗತ್ಯ ವಸ್ತುಗಳ ಸೇವೆ ಅಡಿಯಲ್ಲಿ ಜಿಲ್ಲಾಡಳಿತ ಈ ಕಂಪನಿ ತರಕಾರಿ ಮಾರಾಟ ಮಾಡಲು ಪಾಸ್ ನೀಡಿದ್ದು, ಮಾರ್ಚ್ 27 ರಂದು ಧಾರವಾಡ ಕೆ.ಸಿ. ಪಾರ್ಕ್ ಹಿಂಭಾಗದ ಬಡಾವಣೆ, ಸನ್ಮತಿ ನಗರ, ನಾರಾಯಣಪುರ, ಸಾಧನಕೇರಿ ಪ್ರದೇಶಗಳಲ್ಲಿ ವಾಹನಗಳ ಮೂಲಕ ತಿರುಗಾಡಿ ತರಕಾರಿ ಮಾರಾಟ ಮಾಡಿದೆ.

ನಾಳೆಯಿಂದ ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಧಾರವಾಡ ನಗರದ ಬಡಾವಣೆ, ಅಪಾರ್ಟ್ಮೆಂಟ್ ಸೇರಿದಂತೆ ಎಲ್ಲೆಡೆ ಸಂಚರಿಸಿ, ಗ್ರಾಹಕರಿಗೆ ತರಕಾರಿ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.












Click it and Unblock the Notifications