ಧಾರವಾಡ; 9 ಚಿನ್ನದ ಪದಕ ಪಡೆದ ಪಂಚಾಯಿತಿ ಡಿ ದರ್ಜೆ ಉದ್ಯೋಗಿ ಪುತ್ರಿ
ಧಾರವಾಡ, ಜೂನ್ 08; ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ 72ನೇ ಘಟಿಕೋತ್ಸವ ನಡೆಯಿತು. ನವದೆಹಲಿಯ ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಜೆನೆಟಿಕ್ ಇಂಜಿನಿಯರಿಂಗ್ ಮತ್ತು ಬಯೋಟೆಕ್ನಾಲಜಿ ನಿರ್ದೇಶಕ ಡಾ. ದಿನಕರ ಎಂ.ಸಾಳುಂಕೆ ಘಟಿಕೋತ್ಸವ ಭಾಷಣ ಮಾಡಿದರು.
ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ ಮಂಗಳವಾರ ವಿಶ್ವವಿದ್ಯಾಲಯದ 72ನೇಯ ಘಟಿಕೋತ್ಸವ ನಡೆಯಿತು. ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು. ಕವಿವಿ ಕುಲಪತಿ ಪ್ರೊ. ಕೆ. ಬಿ. ಗುಡಸಿ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಾಜ್ಯ ಬಜೆಟ್: ಕರ್ನಾಟಕದ 7 ಜಿಲ್ಲೆಗಳಲ್ಲಿ ಹೊಸ ಮಾದರಿ ವಿಶ್ವವಿದ್ಯಾಲಯ ಸ್ಥಾಪನೆ
ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಪ್ರೊ. ಶ್ರೀನಿವಾಸ ಕೆ.ಸೈದಾಪುರ ಹಾಗೂ ಮನೋಜ ಗೊರ್ಕೆಲಾಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಘಟಿಕೋತ್ಸವದಲ್ಲಿ 147 ಪಿಹೆಚ್ಡಿ, 4 ಎಂಫಿಲ್, 3943 ಸ್ನಾತಕೋತ್ತರ, 17762 ಸ್ನಾತಕ, 26 ಕಾನೂನು, 119 ಡಿಪ್ಲೊಮಾ ಹಾಗೂ 27 ಸರ್ಟಿಫಿಕೇಟ್ ಕೋರ್ಸುಗಳು ಸೇರಿ ಒಟ್ಟು 948 ಜನರಿಗೆ ಖುದ್ದಾಗಿ ಮತ್ತು 21080 ಜನರಿಗೆ ಅನುಪಸ್ಥಿತಿಯಲ್ಲಿ ಪದವಿ ಪ್ರದಾನ ಮಾಡಲಾಯಿತು.
ಚಾಮರಾಜನಗರ ಜಿಲ್ಲೆಗೆ ವಿಶ್ವವಿದ್ಯಾಲಯ: ಸದ್ಯದಲ್ಲೇ ತೀರ್ಮಾನ- ಅಶ್ವತ್ಥ ನಾರಾಯಣ
ಸುಜಾತ ಜೋಡಳ್ಳಿ ಎಂಎ ಪತ್ರಿಕೋದ್ಯಮ ಪದವಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ, 9 ಚಿನ್ನದ ಪದಕಗಳನ್ನು ಪಡೆದು ಕರ್ನಾಟಕ ವಿಶ್ವವಿದ್ಯಾಲಯದ 72ನೇ ಘಟಿಕೋತ್ಸವದಲ್ಲಿ ಚಿನ್ನದ ಹುಡುಗಿ ಎನಿಸಿಕೊಂಡರು. ಚಿನ್ನದ ಪದಕಗಳಿಗೆ ಮುತ್ತಿಟ್ಟು ಅವರು ಸಂತಸ ಹಂಚಿಕೊಂಡರು.
Explained: ಏನಿದು ಸಂಸ್ಕೃತ ವಿಶ್ವವಿದ್ಯಾಲಯ ವಿವಾದ?
ಚಿನ್ನದ ಹುಡುಗಿ ಸುಜಾತ ಜೋಡಳ್ಳಿ
ಎಂ.ಎ ಪತ್ರಿಕೋದ್ಯಮ ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ, 9 ಚಿನ್ನದ ಪದಕಗಳನ್ನು ಪಡೆದ ಸುಜಾತ ಜೋಡಳ್ಳಿ ನಾಗೇಶ ಜೋಡಳ್ಳಿ ಮತ್ತು ಮಹಾದೇವಿ ದಂಪತಿಗಳ ಪುತ್ರಿ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸೂಳಿಕಟ್ಟಿ ಗ್ರಾಮ ಪಂಚಾಯತ ಡಿ ದರ್ಜೆ ನೌಕರರಾಗಿ ನಾಗೇಶ ಜೋಡಳ್ಳಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಹಲವಾರು ಪುರಸ್ಕಾರಗಳು
ಸುಜಾತ ಜೋಡಳ್ಳಿ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸುವ ವಿದ್ಯಾರ್ಥಿಗಳಿಗೆ ನೀಡುವ ಕುಮಾರ ಮಹಾದೇವ ಸ್ವರ್ಣಪದಕ, ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರ ಸ್ವರ್ಣಪದಕ, ಕೆ. ಎಂ. ರಾಜಶೇಖರಪ್ಪ ಹಿರೇಮಠ ಸ್ವರ್ಣಪದಕ, ಮೋಹರೆ ಹನುಮಂತರಾಯ್ ಸ್ವರ್ಣಪದಕ, ಕೆ.ಶಾಮರಾವ ಸ್ವರ್ಣಪದಕ ಸೇರಿದಂತೆ ಡೆಕ್ಕನ್ ಹೆರಾಲ್ಡ್/ ಪ್ರಜಾವಾಣಿ ನಗದು ಪುರಸ್ಕಾರಗಳನ್ನು ಪಡೆದಿದ್ದಾರೆ.
ಚಿನ್ನದ ಪದಕಕ್ಕೆ ಮುತ್ತಿಟ್ಟು ಸಂತಸ
ಪ್ರಸ್ತುತ ಸುಜಾತ ಜೋಡಳ್ಳಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರಾವಾರ ಕಚೇರಿಯಲ್ಲಿ ಅಪ್ರೆಂಟೀಸ್ ಆಗಿ ತರಬೇತಿ ಪಡೆಯುತ್ತಿದ್ದಾರೆ. "ತಂದೆ, ತಾಯಿ ಹಾಗೂ ಸ್ನೇಹಿತೆ ವಿದ್ಯಾಳ ಸಹಾಯ, ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು. ಮಾಧ್ಯಮದಲ್ಲಿಯೇ ವೃತ್ತಿ ಆರಂಭಿಸುವುದು ನನ್ನ ಆಶಯವಾಗಿದೆ" ಎಂದು ಅವರು ಹೇಳಿದರು. ಚಿನ್ನದ ಪದಕಕ್ಕೆ ಮುತ್ತಿಟ್ಟು ಸಂತಸ ವ್ಯಕ್ತಪಡಿಸಿದರು.
ಯುವಕರು ಪ್ರಮುಖ ಪಾತ್ರ ವಹಿಸಬೇಕು
ಘಟಿಕೋತ್ಸವ ಭಾಷಣ ಮಾಡಿದ ಡಾ. ದಿನಕರ ಎಂ. ಸಾಳುಂಕೆ, "ಜೈವಿಕ ತಂತ್ರಜ್ಞಾನ, ಔಷಧಿ, ಪರಮಾಣು ಶಕ್ತಿ, ದೂರ ಸಂಪರ್ಕ, ಬಾಹ್ಯಾಕಾಶ ತಂತ್ರಜ್ಞಾನ, ರಕ್ಷಣಾಭಿವೃದ್ಧಿ, ಆರೋಗ್ಯ ಮತ್ತು ಕೃಷಿ ಕೇತ್ರಗಳಲ್ಲಿನ ಭಾರತದ ಸಾಧನೆಯನ್ನು ವಿಶ್ವವೇ ಗುರುತಿಸಿದೆ. ಸ್ವಾವಲಂಭಿ ಭಾರತ ನಿರ್ಮಾಣದಲ್ಲಿ ಯುವ ಸಮುದಾಯ ಮಹತ್ವದ ಪಾತ್ರ ನಿರ್ವಹಿಸಬೇಕಾಗಿದೆ" ಎಂದು ಕರೆ ನೀಡಿದರು.
"ನಮ್ಮ ದೇಶದ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿನ ಸಾಧನೆಗಳು, ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಮಾರ್ಗದರ್ಶಿಯಾಗಿವೆ. ಹವಾಮಾನ ಬದಲಾವಣೆ ಸಮಸ್ಯೆಗಳಿಗೆ ಪರಿಹಾರ ಕಾರ್ಯಕ್ರಮಗಳ ಸಿದ್ದಪಡಿಸುವಿಕೆಯಲ್ಲಿ ಭಾರತ ಗಣನೀಯವಾದ ಕೊಡುಗೆ ನೀಡಿದೆ. ಭಾರತ ಜೆನರಿಕ್ ಔಷಧಿಗಳ ತಯಾರಿಕೆ ಹಾಗೂ ಪೂರೈಕೆಯಲ್ಲಿ ಪ್ರಮುಖ ದೇಶವಾಗಿದೆ" ಎಂದು ಬಣ್ಣಿಸಿದರು.
ಶಿಕ್ಷಣ ಬದುಕಿನ ವಿಕಾಸಕ್ಕೆ ಕೊಡುಗೆ ನೀಡಬೇಕು
ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಮಾತನಾಡಿ, "ಉನ್ನತ ಶಿಕ್ಷಣವು ಏಕ್ ಭಾರತ್, ಶ್ರೇಷ್ಠ ಭಾರತ್ ಹಾಗೂ ಆತ್ಮನಿರ್ಭರ ಭಾರತ್ ನಿರ್ಮಿಸಲು ಪೂರಕವಾಗಬೇಕು. ಪದವೀಧರರು ದೇಶದ ಜನಸಾಮಾನ್ಯರ ಬದುಕಿನ ವಿಕಾಸಕ್ಕೆ ಕೊಡುಗೆಗಳನ್ನು ನೀಡಬೇಕು" ಎಂದು ಕರೆ ನೀಡಿದರು.
"ಕರ್ನಾಟಕ ವಿವಿಯು 73 ವರ್ಷಗಳಿಗೂ ಅಧಿಕ ಕಾಲದಿಂದ ಶಿಕ್ಷಣ ಹಾಗೂ ದೇಶದ ವಿಕಾಸಕ್ಕೆ ತನ್ನ ಕೊಡುಗೆಗಳನ್ನು ನೀಡಿದೆ. ಇಲ್ಲಿ ವ್ಯಾಸಂಗ ಮಾಡಿದ ಅನೇಕರು ಉನ್ನತ ಸಾಧನೆ ಮಾಡಿದ್ದಾರೆ. ನಾವು ನಮ್ಮ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯ ಮಾಡಿ ಜನಸಾಮಾನ್ಯರ ಬದುಕಿನ ಏಳಿಗೆಗೆ ಕಾರಣರಾಗಬೇಕು. ಜೀವನ ಸಾರ್ಥಕ ಪಡಿಸಿಕೊಳ್ಳಲು ನಿಮ್ಮ ಶಿಕ್ಷಣ ವರದಾನವಾಗಿದೆ. ಶಿಕ್ಷಣದ ಪ್ರಸಾರದ ಜೊತೆಗೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು" ಎಂದರು.