Dharwad LoK Sabha: 'ಕೈ' ಯುವ ಅಭ್ಯರ್ಥಿ ಜತೆ ಬಿಜೆಪಿ ಹಿರಿಯ ನಾಯಕರ ಮಧ್ಯೆ ನೇರ ಪೈಪೋಟಿ
ಹುಬ್ಬಳ್ಳಿ, ಮಾರ್ಚ್ 22: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರಸ್ ಯುವ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಹುಬ್ಬಳ್ಳಿ ಭಾಗದಲ್ಲಿ ಕುರುಬ ಸಮುದಾಯಕ್ಕೆ ಲೋಕಸಭಾ ಟಿಕೆಟ್ ನೀಡಿದೆ. ಇಲ್ಲಿ ಯುವ ಅಭ್ಯರ್ಥಿ ಜೊತೆಗೆ ಬಿಜೆಪಿಯ ಹಿರಿಯ ನಾಯಕ, ನಾಲ್ಕು ಬಾರಿ ಸಂಸತ್ಗೆ ಆಯ್ಕೆಯಾದ ಪ್ರಹ್ಲಾದ್ ಜೋಶಿ ಮಧ್ಯೆ ತೀವ್ರ ಪೈಪೋಟಿ ನಡೆಯಲಿದೆ.
ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಯುವಕಾಂಗ್ರೆಸ್ ಘಟಕದ ಜಿಲ್ಲಾ ಅಧ್ಯಕ್ಷ 'ವಿನೋದ ಅಸೂಟಿ' (Vinod Asuti) ಅವರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ. ಗುರುವಾರ ರಾತ್ರಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಧಾರವಾಡಕ್ಕೆ ಅಭ್ಯರ್ಥಿ ಘೋಷಿಸಲಾಗಿದೆ.

ಕಾಂಗ್ರೆಸ್ನ ವಿನೋದ ಅಸೂಟಿ ಅವರು ಇದೇ ಮೊದಲ ಬಾರಿಗೆ ಲೋಕಸಭೆಗೆ ಟಿಕೆಟ್ ಪಡೆದಿದ್ದಾರೆ. ಅವರು ಕ್ಷೇತ್ರದಲ್ಲಿ ತಮ್ಮ ವಿರುದ್ಧ ಬಿಜೆಪಿಯ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರ ವಿರುದ್ಧ ಸೆಣಸಿ ಗೆಲ್ಲಬೇಕಾದ ಅನಿವಾರ್ಯತೆ ಇದೆ. ಯುವ ನಾಯಕನಾಗಿದ್ದರಿಂದ ಇವರ ಕಾಂಗ್ರೆಸ್ ಹೆಚ್ಚು ವಿಶ್ವಾಸ ಇಟ್ಟು ಕಣಕ್ಕಿಳಿಸಿದೆ.
ರಾಜಕೀಯ ಹಿನ್ನೆಲೆ ಇಲ್ಲದ ಅಭ್ಯರ್ಥಿ
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಕಾರಣ ಜೆಡಿಎಸ್ ಪಕ್ಷವು ಧಾರವಾಡದಲ್ಲಿ ತನ್ನ ಅಭ್ಯರ್ಥಿಯನ್ನು ಇಳಿಸಿಲ್ಲ. ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಜಿಲ್ಲೆಯ ನವಲಗುಂದ ಮೂಲದವರು. ಅವರದ್ದು ಕುರುಬ ಸಮುದಾಯಕ್ಕೆ ಸೇರಿದ್ದಾರೆ. ಬಿಬಿಎ ಪದವಿ ಹೊಂದಿರುವ ಇವರ ತಂದೆ ನಿವೃತ್ತ ಸರ್ಕಾರಿ ನೌಕರ. ಕುಟುಂಬದಲ್ಲಿ ಯಾರಿಗೂ ರಾಜಕೀಯ ನಂಟಿಲ್ಲ ಎಂಬುದು ಮತ್ತೊಂದು ವಿಶೇಷ.
2018 ರ ಚುನಾವಣೆಯಲ್ಲಿ ಸೋಲು
ವಿದ್ಯಾರ್ಥಿ ಇದ್ದಾಗಿನಿಂದಲೂ ವಿನೋದ ಅಸೂಟಿಯವರು ರಾಜಕೀಯದೊಂದಿಗೆ ನಂಟು ಬೆಳೆಸಿಕೊಂಡು ಬಂದಿದ್ದಾರೆ. ಯುವ ಕಾಂಗ್ರೆಸ್ ನಲ್ಲಿಂದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. 2018ರಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದೀಗ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗಿ ಆಯ್ಕೆ ಆಗಿದ್ದಾರೆ.
ಹಲವು ಆಕಾಂಕ್ಷಿಗಳ ಮಧ್ಯೆ ಅಸೂಟಿಗೆ ಟಿಕೆಟ್
ಅಂದು ಸಿದ್ದರಾಮಯ್ಯ ಅವರ ಮಾತಿಗೆ ಬೆಲೆ ಕೊಟ್ಟಿ ಎನ್. ಎಚ್. ಕೋನರಡ್ಡಿ ಅವರಿಗೆ ನವಲಗುಂದ ಕ್ಷೇತ್ರದ ಟಿಕೆಟ್ ಕುರುಬ ಸಮುದಾಯದ ಬಿಟ್ಟುಕೊಟ್ಟಿದ್ದರು. ಇದರ ಫಲವಾಗಿ ಇತ್ತೀಚೆಗೆ ಅವರಿಗೆ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಜೊತೆಗೆ ಅವಿಭಜಿತ ಧಾರವಾಡ ಜಿಲ್ಲೆಯ ಭಾಗವಾಗಿದ್ದ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ಕಾಂಗ್ರೆಸ್ ಲಿಂಗಾಯತ ಅಭ್ಯರ್ಥಿಗೆ ನೀಡಿದೆ.

ಕಾಂಗ್ರೆಸ್ನಿಂದ ಹಲವು ನಾಯಕರು ಧಾರವಾಡದ ಟಿಕೆಟ್ ಬಯಸಿದ್ದರು. ಮೋಹನ್ ಲಿಂಬಿಕಾಯಿ ಶಿವಲೀಲಾ ಕುಲಕರ್ಣಿ, ರಜತ ಉಳ್ಳಾಗಡ್ಡಿಮಠ ಅವರ ಹೆಸರನ್ನು ಕೈಬಿಟ್ಟು ಕುರುಬ ಸಮುದಾಯಕ್ಕೆ ನೀಡಲಾಗಿದೆ. ಈ ಸಮುದಾಯದವರಿಗೆ ಟಿಕೆಟ್ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪಟ್ಟು ಹಿಡಿದಿದ್ದರು. ಅದರ ಭಾಗವಾಗಿ ಕುರುಬ ಸಮುದಾಯದ ವಿನೋದ ಅಸೂಟಿ ಅವರಿಗೆ ಟಿಕೆಟ್ ದೊರೆತಿದೆ.
ಕುರುಬ ಸಮುದಾಯಕ್ಕೆ 2 ಟಿಕೆಟ್
ಕಾಂಗ್ರೆಸ್ನಲ್ಲಿ ಕುರುಬ ಸಮುದಾಯದ ನಾಯಕರು ಹೆಚ್ಚಿದ್ದಾರೆ. ಆ ಸಮುದಾಯದ ಅಭ್ಯರ್ಥಿಗಳಿಗೆ ಎರಡು ಕ್ಷೇತ್ರಗಳಿಗೆ ಟಿಕೆಟ್ ನೀಡಬೇಕಿತ್ತು. ಆದರೆ ಈವರೆಗೆ ಕೊಪ್ಪಳ ಕ್ಷೇತ್ರದಲ್ಲಿ ಮಾತ್ರ ಒಂದು ಟಿಕೆಟ್ ಕುರುಬ ಸಮುದಾಯಕ್ಕೆ ನೀಡಲಾಗಿತ್ತು. ಇನ್ನೊಂದು ಟಿಕೆಟ್ ಅನ್ನು ಧಾರವಾಡದಲ್ಲಿ ನೀಡಲಾಗಿದೆ. ಸಾಮಾಜಿಕ ನ್ಯಾಯ ಕಲ್ಪಿಸಲು, ಎಲ್ಲ ಜಾತಿ- ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ವರಿಷ್ಠರು ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಗೆಲುವಿನ ಲೆಕ್ಕಾಚಾರವೇನು?
ಧಾರವಾಡ ಕ್ಷೇತ್ರದಲ್ಲಿ ಕುರುಬ ಸಮುದಾಯದ ಮತದಾರರು ಗಮನಾರ್ಹ ಸಂಖ್ಯೆಯಲ್ಲಿದ್ದಾರೆ. 1980ರಿಂದ ಸತತ ನಾಲ್ಕು ಲೋಕಸಭಾ ಚುನಾವಣೆಯಲ್ಲಿ ಇದೇ ಸಮುದಾಯದ ಡಿ.ಕೆ.ನಾಯ್ಕರ್ ಜಯ ಗಳಿಸಿದ್ದರು. 1996ರಿಂದ ಆ ಸಮುದಾಯದವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಇದೀಗ ಮತ್ತೆ ಕುರುಬ ಸಮುದಾಯವು ಟಿಕೆಟ್ ಪಡೆದಿದೆ. ಇದರ ಆಧಾರದಲ್ಲಿ ಧಾರವಾಡದಲ್ಲಿ ಗೆಲುವಿನ ಲೆಕ್ಕಾಚಾರಗಳು ಶುರುವಾಗಿವೆ.
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ನವಲಗುಂದ, ಕಲಘಟಗಿ,ಧಾರವಾಡ ಗ್ರಾಮೀಣ, ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರಗಳ ಲ್ಲಿ ಕಾಂಗ್ರೆಸ್ ಶಾಸಕರು, ಸಚಿವ ಸಂತೋಷ ಲಾಡ್ ಅವರ ಪ್ರಭಾವ ಇದೆ. ಇದೆಲ್ಲ ಕಾರಣದಿಂದ ಕುರುಬ ಸಮುದಾಯದಿಂದ ವಿನೋದ ಅಸೂಟಿ ಸ್ಪರ್ಧಿಸಿದರೆ ಧಾರವಾಡ ಗೆಲ್ಲಬಹುದು ಎಂಬ ನಂಬಿಕೆಯಲ್ಲಿ ಕಾಂಗ್ರೆಸ್ ಇದೆ. ಇದೆಲ್ಲದ್ದಕ್ಕೂ ಉತ್ತರ ಸಿಗಲು ಚುನಾವಣೆ ಮುಗಿಯುವವರೆಗೂ ಕಾಯಬೇಕಿದೆ.












Click it and Unblock the Notifications