ಯೂರಿಯಾ ಘಟಕ ಸ್ಥಾಪನೆಗೆ ಜಮೀನು ನೀಡ್ತೇನೆ: ಸಿಎಂ ತಿರುಗೇಟು
ಹುಬ್ಬಳ್ಳಿ,ಫೆಬ್ರವರಿ,10: ಯೂರಿಯಾ ಗೊಬ್ಬರ ಘಟಕ ಸ್ಥಾಪನೆಗೆ ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ ಕೇಳಿದ 500 ಎಕರೆ ಜಮೀನನ್ನು ಉತ್ತರ ಕರ್ನಾಟಕ ಯಾವ ಭಾಗದಲ್ಲಾದರೂ ನೀಡಲು ರಾಜ್ಯ ಸರಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹುಬ್ಬಳ್ಳಿಯ ಹೊರವಲಯದಲ್ಲಿ ಮಂಗಳವಾರ ಜರುಗಿದ ಕಾಂಗ್ರೆಸ್ ಪಕ್ಷದ ಬೆಳಗಾವಿ ವಿಭಾಗ ಮಟ್ಟದ ಗ್ರಾಮ್ ಸ್ವರಾಜ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಯೂರಿಯಾ ರಸಗೊಬ್ಬರ ಘಟಕ ಸ್ಥಾಪನೆಗೆ ಜಮೀನು ನೀಡುತ್ತಿಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ ಆರೋಪಿಸಿರುವುದು ಶುದ್ಧ ಸುಳ್ಳು. ಒಂದು ವರ್ಷದಿಂದ ಕಾರ್ಖಾನೆ ಸ್ಥಾಪನೆ ಮಾಡುತ್ತೇವೆ ಎನ್ನುವ ಇವರು ಎಲ್ಲಿ ಸ್ಥಾಪನೆ ಮಾಡುತ್ತೇವೆಂದು ತಿಳಿಸಿಲ್ಲ. ಜಾಗ ಕೇಳಿದರೆ ಕೂಡಲೇ ನೀಡಲು ಸಿದ್ಧ' ಎಂದು ಭರವಸೆ ನೀಡಿದರು.[ಹುಬ್ಬಳ್ಳಿ: ಸಿದ್ದು ಸರ್ಕಾರದ ಮೇಲೆ ಅನಂತಕುಮಾರ್ ಅಸಮಾಧಾನ]
ಅನಂತಕುಮಾರ್ ಅವರು, 'ರಾಜ್ಯ ಸರಕಾರ ರಿವರ್ಸ್ ಗೇರ್ ಹೋಗ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ಅವರು ತಾವೇ ಸ್ಟ್ಯಾಂಡ್ ಹಾಕಿದ ಸೈಕಲ್ ಮೇಲೆ ಕುಳಿತು ಸುಮ್ಮನೇ ಸೈಕಲ್ ಹೊಡೀತಾ ಇದ್ದಾರೆ ಎಂದು ವ್ಯಂಗ್ಯವಾಡಿದರು. ಕೇಂದ್ರದಲ್ಲಿ ಸಚಿವರಾಗಿರುವ ಅನಂತಕುಮಾರ ರಾಜ್ಯಕ್ಕೆ ಯಾವ ಸೇವೆ ನೀಡಿದ್ದಾರೆ ಎಂಬುದನ್ನು ಸಾಬೀತು ಪಡಿಸಲಿ' ಎಂದರು.
ಕಳಸಾ ವಿವಾದ : ಕಳಸಾ ಬಂಡೂರಿ ವಿವಾದವನ್ನು ನ್ಯಾಯಾಧೀಕರಣ ಹೊರಗೆ ಬಗೆಹರಿಸಿಕೊಳ್ಳಲು ರಾಜ್ಯ ಸರಕಾರ ಸಿದ್ಧವಿದೆ. ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿದರೆ ತಾವು ಮಾತುಕತೆಗೆ ಮುಂದಾಗುತ್ತೇವೆ ಎಂದಿರುವ ಸಿಎಂ, ಬಿಜೆಪಿಯವರು ಈ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾರೆ, ಸಮಸ್ಯೆ ಬಗೆಹರಿಯುವುದು ಬಿಜೆಪಿಗೆ ಬೇಕಾಗಿಲ್ಲ. ಹುಬ್ಬಳ್ಳಿ ಹಾಗೂ ಇತರ ನಗರಗಳಿಗೆ ಕುಡಿಯುವ ನೀರು ಕೊಡುವ ಇಚ್ಛೆ ಅವರಿಗೆ ಇಲ್ಲ. ನಿಜವಾಗಲೂ ಅವರಿಗೆ ಕಾಳಜಿ ಇದ್ದರೆ ಪ್ರಧಾನಿ ಮೋದಿಯವರ ಮನವೊಲಿಸಬೇಕು ಎಂದು ಹೇಳಿದರು.[ಹುಬ್ಬಳ್ಳಿ: ಮೃತರ ಕುಟುಂಬಕ್ಕೆ 2ಲಕ್ಷ ಪರಿಹಾರ ಘೋಷಿಸಿದ ಸಿದ್ದು]
ಮಹದಾಯಿ ಸಮಸ್ಯೆ ಪರಿಹರಿಸಲು ರಾಜ್ಯ ಸರಕಾರ ಬಿಜೆಪಿಯವರು ಹೇಳಿದಂತೆ ಕೇಳಿದೆ. ಸರ್ವಪಕ್ಷ ನಿಯೋಗಕ್ಕಾಗಿ ಗೋವಾ ಮುಖ್ಯಮಂತ್ರಿ ಮತ್ತು ಕೇಂದ್ರ ನೀರಾವರಿ ಸಚಿವರಿಗೆ ಪತ್ರ ಬರೆಯಲು ಹೇಳಿದ್ದರು. ಅದರಂತೆ ನಾನು ನಡೆದುಕೊಂಡೆ. ಆದರೆ ಉಮಾಭಾರತಿ ಮತ್ತು ಗೋವಾ ಸಿಎಂ ಲಕ್ಷ್ಮೀಕಾಂತ್ ಪರ್ಸೇಕರ್ ನ್ಯಾಯಾಧೀಕರಣದ ಹೊರಗಡೆ ವಿವಾದ ಬಗೆಹರಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಇದರಲ್ಲೇ ಬಿಜೆಪಿಯವರ ನಿಲುವು ಏನು ಎಂಬುದು ಗೊತ್ತಾಗುತ್ತದೆ ಎಂದು ದೂರಿದರು.[ಮಹದಾಯಿ ಜಲವಿವಾದ : ಮುರಿದು ಬಿತ್ತು ಮಾತುಕತೆ ಪ್ರಸ್ತಾಪ?]
ಎಚ್ಡಿಕೆ ಸುಳ್ಳುಗಾರ : ಜೆಡಿಎಸ್ ಎಚ್.ಡಿ.ಕುಮಾರಸ್ವಾಮಿ ದೊಡ್ಡ ಸುಳ್ಳುಗಾರ ಆತನನ್ನು ನಂಬಬೇಡಿ ಎಂದು ಸಿಎಂ ಹೇಳಿದರು. ಸಮಾವೇಶದ ನಂತರ ಮಾತನಾಡಿ, ನಾನು 50 ಲಕ್ಷ ರೂ. ಮೌಲ್ಯದ ವಾಚ್, ಒಂದೂವರೆ ಲಕ್ಷ ರೂ. ಮೌಲ್ಯದ ಗ್ವಾಗಲ್ ಹಾಕಿಕೊಳ್ಳುತ್ತೇನೆ ಎಂದು ಆರೋಪಿಸುತ್ತಿರುವುದು ಸುಳ್ಳಿನ ಸರಮಾಲೆ ಎಂದರು. ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ ಜಿ.ಪರಮೇಶ್ವರ್, ಸಚಿವ ಮನೋಹರ ತಹಶೀಲ್ದಾರ್ ಮತ್ತಿತರರು ಉಪಸ್ಥಿತರಿದ್ದರು.