ಹುಬ್ಬಳ್ಳಿ: ಸಿದ್ದು ಸರ್ಕಾರದ ಮೇಲೆ ಅನಂತಕುಮಾರ್ ಅಸಮಾಧಾನ
ಹುಬ್ಬಳ್ಳಿ, ಫೆಬ್ರವರಿ,08: ಯೂರಿಯಾ ಗೊಬ್ಬರ ತಯಾರಿಕಾ ಘಟಕ ಆರಂಭಿಸಲು ಉತ್ತರ ಕರ್ನಾಟಕದಲ್ಲಿ 500 ಎಕರೆ ಸ್ಥಳಾವಕಾಶ ಕೇಳಿದರೂ ಮುಖ್ಯಮಂತ್ರಿ ಸಿದ್ಧರಾಮಯ್ಯ ನೀಡುತ್ತಿಲ್ಲ ಎಂದು ಕೇಂದ್ರ ರಸಾಯನ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ ಆರೋಪಿಸಿದ್ದಾರೆ.
ಜಿಲ್ಲಾ ಪಂಚಾಯತಿ ಚುನಾವಣಾ ಪ್ರಚಾರದ ಅಂಗವಾಗಿ ಸಮೀಪದ ಕೋಳಿವಾಡ ಗ್ರಾಮದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, 'ಉತ್ತರ ಕರ್ನಾಟಕಕ್ಕೆ ಚೀನಾದಿಂದ ಯೂರಿಯಾ ಗೊಬ್ಬರವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿಯೇ 6 ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೂರಿಯಾ ಗೊಬ್ಬರ ತಯಾರಿಸುವ ಘಟಕ ಆರಂಭಿಸಲು ರಾಜ್ಯ ಸರಕಾರ ಜಾಗ ನೀಡಿದರೆ ಅನುಕೂಲವಾಗುತ್ತದೆ. ಆದರೆ ಇದಕ್ಕೆ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದರು.[Live : ಹುಬ್ಬಳ್ಳಿಯಲ್ಲಿ ಕಟ್ಟಡ ಕುಸಿತ, ಜೀವ ಉಳಿಸಲು ಶತಪ್ರಯತ್ನ]
ಈ ಹಿಂದೆ ಈ ಭಾಗದಲ್ಲಿ ಗೊಬ್ಬರಕ್ಕಾಗಿ ಗೋಲಿಬಾರ್, ಹೊಡೆದಾಟ, ಪ್ರತಿಭಟನೆಗಳಾಗಿವೆ. 2 ವರ್ಷಗಳಿಂದ ಗೊಬ್ಬರ ಸುಲಭವಾಗಿ ಸಿಗುತ್ತಿದೆ. ನಮ್ಮ ಸರಕಾರ ಗೊಬ್ಬರದ ಬೆಲೆ ಹೆಚ್ಚಳ ಮಾಡಿಲ್ಲ ಕರ್ನಾಟಕ ಅಲ್ಲದೇ ದೇಶದ ಯಾವುದೇ ಪ್ರದೇಶದಲ್ಲೂ ಗೊಬ್ಬರದ ಕೊರತೆ ಉಂಟಾಗಿಲ್ಲ ಎಂದರು.
ಕೇಂದ್ರ ಸರಕಾರ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುತ್ತಿದೆ. ಆದರೆ ಸಿದ್ಧರಾಮಯ್ಯ ಸರಕಾರ ನಿದ್ರಾವಸ್ಥೆಯಲ್ಲಿದೆ. ಬಿಜೆಪಿಯ ಪ್ರಧಾನಮಂತ್ರಿ ಫಸಲ ಭಿಮಾ ಯೋಜನೆ ಬೆಳೆ ವಿಮೆಯ ಎಲ್ಲ ಹಣವನ್ನು ರೈತ ಬಾಂಧವರಿಗೆ ನೀಡುವ ಯೋಜನೆ. ಕಾಂಗ್ರೆಸ್ ನವರ ಬೆಳೆ ವಿಮೆ ಯೋಜನೆ ರೈತರನ್ನು ಮೋಸ ಮಾಡುವ ಯೋಜನೆ ಎಂದು ಅನಂತಕುಮಾರ ವ್ಯಂಗ್ಯವಾಡಿದರು.['ಕರ್ನಾಟಕ ಸೇರಿ ದೇಶದ 6 ಕಡೆ ಫಾರ್ಮಾಪಾರ್ಕ್ ಸ್ಥಾಪನೆ']
ಕೇಂದ್ರ ಸರಕಾರ ಬರಪರಿಹಾರಕ್ಕೆಂದು ನೀಡಿದ 1540 ಕೋಟಿ ರೂ. ಹಣವನ್ನು ರಾಜ್ಯದ ರೈತರಿಗೆ ವಿತರಿಸಿಲ್ಲ. ಕಬ್ಬು ಬೆಳೆಗಾರರಿಗೆ ನೀಡಲು ಕೊಟ್ಟಿದ್ದ 600 ಕೋಟಿ ರೂ.ಗಳಲ್ಲಿ ಬರೀ 156 ಕೋಟಿ ರೂ. ವೆಚ್ಚ ಮಾಡಿದೆ ಎಂದರು.