ಪೇಢಾ ನಗರದಲ್ಲಿಯೇ ಐಐಟಿಯಂತೆ, ವಿದ್ಯಾಕಾಶಿಗೆ ಮತ್ತೊಂದು ಗರಿ

ಧಾರವಾಡ, ಡಿಸೆಂಬರ್ 14 : ನಿರ್ಲಕ್ಷ್ಯಿತ, ಹಿಂದುಳಿದ ಪ್ರದೇಶವೆಂದು ಕೊರಗುತ್ತಿದ್ದ ಉತ್ತರ ಕರ್ನಾಟಕದ ಜನತೆಗೆ ಐಐಟಿ ಸ್ಥಾಪನೆಯಾಗುತ್ತಿರುವುದು ಸಂತಸ ತಂದಿದೆ. ಈ ಬಗ್ಗೆ ಇತ್ತೀಚೆಗಷ್ಟೇ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ ಅಂತಿಮವಾಗಿ ಧಾರವಾಡದಲ್ಲಿಯೇ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸ್ಥಾಪಿಸಲು ನಿರ್ಧರಿಸಿದೆ.

ಬೆಂಗಳೂರು ಬಿಟ್ಟರೆ ಇಲ್ಲಿಯೇ ವಿಜ್ಞಾನ ಕೇಂದ್ರವಿದೆ. ಇನ್ನು ಐಐಟಿ ಕೂಡ ಬಂದಿರುವುದು ವಿದ್ಯಾಕಾಶಿ ಎಂದೆನಿಸಿಕೊಂಡಿರುವ ಪೇಢಾ ನಗರಿಗರಿಗೆ ಪೇಢೆ ತಿಂದಷ್ಟೇ ಖುಷಿ ನೀಡಿದೆ. ರಾಯಚೂರಿನಲ್ಲಿ ಐಐಟಿ ಆಗಬೇಕೆಂದು ಆ ಭಾಗದ ಜನರು ಹಲವಾರು ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಆದರೆ ಅಂತಿಮವಾಗಿ ಧಾರವಾಡ ಆಯ್ಕೆಗೊಂಡಿದೆ. [ಈಗ ಅಧಿಕೃತ, ಧಾರವಾಡದಲ್ಲಿಯೇ ಐಐಟಿ ಸ್ಥಾಪನೆ]

iit

ಸುಬ್ರಹ್ಮಣ್ಯಂ ಸಮಿತಿಯು ಸಮಗ್ರವಾಗಿ ವರದಿ ನೀಡಿ ಧಾರವಾಡವೇ ಸೂಕ್ತ ಎಂದು ಹೇಳಿತ್ತು. ಇದರಿಂದ ಹೈದ್ರಾಬಾದ್ ಕರ್ನಾಟಕ ಭಾಗದ ಜನರಿಗೆ ಸಂಕಟ ಮೂಡಿತ್ತು. ಅವರನ್ನು ಸಮಾಧಾನ ಪಡಿಸಲೆಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಯಚೂರಿನಲ್ಲಿಯೇ ಐಐಟಿ ಸ್ಥಾಪನೆ ಮಾಡಿ ಎಂದು ಕೇಂದ್ರಕ್ಕೆ ಪತ್ರ ಬರೆದು ಉತ್ತರ ಕರ್ನಾಟಕದವರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ, ಕೇಂದ್ರ ಸಿದ್ದು ಪತ್ರಕ್ಕೆ ಕ್ಯಾರೆ ಎನ್ನದೇ ಧಾರವಾಡವನ್ನೇ ಅಂತಿಮವಾಗಿ ಆಯ್ಕೆ ಮಾಡಿಕೊಂಡಿದೆ. [ಐಐಟಿ ರಾಯಚೂರಿಗೆ ನೀಡಿ: ಕೇಂದ್ರಕ್ಕೆ ಸಿಎಂ ಪತ್ರ]

ಕೆಐಎಡಿಬಿ ಮಧ್ಯ ಪ್ರವೇಶ : ಈಗಾಗಲೇ ಜಿಲ್ಲಾಡಳಿತ ಐಐಟಿಗೆಂದೇ ಸುಮಾರು 507 ಎಕರೆಯಷ್ಟು ಜಮೀನನ್ನು ಗುರುತಿಸಿದೆ. ಕೆಲಗೇರಿ ಹಾಗೂ ಮುಮ್ಮಿಗಟ್ಟಿ ಸಮೀಪದಲ್ಲಿಯೇ ಭೂಮಿ ಗುರುತಿಸಲಾಗಿತ್ತು. ಆದರೆ 30 ಎಕರೆ ಜಾಗೆಯಷ್ಟನ್ನು ಜಮೀನು ಮಾಲೀಕರು ನೀಡಲು ನಿರಾಕರಿಸಿದ್ದಾರೆ. ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆ. ಈ ಬಗ್ಗೆ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಮಧ್ಯಸ್ಥಿಕೆ ವಹಿಸಿ ಸೂಕ್ತ ಕ್ರಮಕ್ಕೆ ಮುಂದಾಗುವುದಾಗಿ ಜಿಲ್ಲಾಡಳಿತಕ್ಕೆ ಭರವಸೆ ನೀಡಿದೆ. [ಐಐಟಿ ವಿವಾದ: ಮಗು ಚಿವುಟಿ, ತೊಟ್ಟಿಲು ತೂಗುತ್ತಿರುವವರು ಯಾರು?]

ಏಳೆಂಟು ವರ್ಷ ಬೇಕು : ಹೊಸ ಜಾಗದಲ್ಲಿ ಐಐಟಿ ಸ್ಥಾಪನೆಯಾಗಿ ಕಾರ್ಯಾರಂಭ ಮಾಡಲು ಇನ್ನೂ ಕನಿಷ್ಠ ಏಳೆಂಟು ವರ್ಷಗಳು ಬೇಕಾಗುತ್ತವೆ. ಅಲ್ಲಿಯವರೆಗೂ ತಾತ್ಕಾಲಿಕ ಕ್ಯಾಂಪಸ್ ಗುರುತಿಸುವ ಕೆಲಸ ಸದ್ಯಕ್ಕಂತೂ ನಡೆದಿದೆ. ಹೈಕೋರ್ಟ್ ಹತ್ತಿರವಿರುವ ವಾಲ್ಮಿ (ನೆಲ-ಜಲ ನಿರ್ವಹಣಾ ಸಂಸ್ಥೆ) ಕಟ್ಟಡವನ್ನು ಅಂತಿಮವಾಗಿ ತಾತ್ಕಾಲಿಕ ಕ್ಯಾಂಪಸ್ ಗಾಗಿ ಪರಿಶೀಲಿಸಿ ಗುರುತಿಸಲಾಗಿದೆ. ಶೀಘ್ರದಲ್ಲಿಯೇ ಈ ವಾಲ್ಮಿ ಕಟ್ಟಡವನ್ನು ನವೀಕರಿಸಿ ಸೂಕ್ತ ಮತ್ತು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಳ್ಳಳು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಅನುದಾನ ಬೇಕು : ತಾತ್ಕಾಲಿಕ ಕ್ಯಾಂಪಸ್ ಸೌಲಭ್ಯಕ್ಕಾಗಿ ಕೇಂದ್ರ ಸರ್ಕಾರ ಅನುದಾನ ನೀಡಬೇಕಾಗಿದೆ. ಅನುದಾನ ಬಂದ ಕೂಡಲೇ ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಲಿದೆ.
ಆಗ ಐಐಟಿ ಕಾರ್ಯರಂಭ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾತ್ಕಾಲಿಕ ಕ್ಯಾಂಪಸ್‌ನಲ್ಲಿ ಮೂರು ವರ್ಷಗಳ ತನಕ ಕಾರ್ಯಾರಂಭ ಮಾಡಲಾಗುವುದು. ನಂತರ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಸದ್ಯ ಕೇಂದ್ರ ಸರ್ಕಾರದ ಸೂಚನೆಯಂತೆ ಕೇವಲ 180 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ. ಹಾಸ್ಟೆಲ್, ಕ್ಲಾಸ್ ರೂಮ್, ಮತ್ತು ಸಭಾಂಗಣವನ್ನು ನವೀಕರಣ ಮಾಡಲು ಜಿಲ್ಲಾಡಳಿತ ಸಿದ್ಧವಾಗಿಯೇ ಇದೆ.

ಇದರೊಂದಿಗೆ ದೇಶದಲ್ಲಿ ಒಟ್ಟು 22 ಐಐಟಿಗಳು ಅಸ್ತಿತ್ವದಲ್ಲಿರಲಿವೆ. ಎಲ್ಲೆಡೆ ಮೊದಲಿಗೆ 180 ವಿದ್ಯಾರ್ಥಿಗಳೊಂದಿಗೆ ಆರಂಭವಾಗುವ ಐಐಟಿ ಕೇಂದ್ರಗಳು ನಂತರ 450 ತದನಂತರ 928 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗುತ್ತದೆ.

ಒಟ್ಟಿನಲ್ಲಿ ಧಾರವಾಡಕ್ಕೆ ಮತ್ತೊಂದು ಗರಿಯಾಗಲಿರುವ ಐಐಟಿಯು ಪೇಢಾನಗರಿ ವಿದ್ಯಾಕಾಶಿ ಎಂಬುದನ್ನು ಸಾಬೀತು ಪಡಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+