ಹುಬ್ಬಳ್ಳಿ-ಧಾ. ಪಾಲಿಕೆ ಚುನಾವಣೆ; ಬಿಜೆಪಿಯ ಪ್ರಣಾಳಿಕೆ
ಧಾರವಾಡ, ಆಗಸ್ಟ್ 30; ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. 82 ವಾರ್ಡ್ಗಳಿಗೆ ಸೆಪ್ಟೆಂಬರ್ 3ರಂದು ಮತದಾನ ನಡೆಯಲಿದ್ದು, ಒಟ್ಟು 420 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಸೆಪ್ಟೆಂಬರ್ 6ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
'ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ಬಿಜೆಪಿ ಸಂಕಲ್ಪ' ಎಂಬ ಹೆಸರಿನಲ್ಲಿ ಪ್ರಣಾಳಿಕೆಯನ್ನು ರಚನೆ ಮಾಡಲಾಗಿದೆ. ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ, ಮಾಜಿ ಸಚಿವ ಜಗದೀಶ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ್ ಮುಂತಾದವರು ಪ್ರಣಾಳಿಕೆ ಬಿಡುಗಡೆ ಮಾಡಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ 67 ವಾರ್ಡ್ಗಳಿದ್ದವು. ಈಗ ವಾರ್ಡ್ಗಳ ಪುನರ್ ವಿಂಗಡನೆಯಾಗಿದ್ದು, ವಾರ್ಡ್ಗಳ ಸಂಖ್ಯೆ 82ಕ್ಕೆ ಏರಿಕೆಯಾಗಿದೆ. ವಾರ್ಡ್ ಪುನರ್ ವಿಂಗಡನೆ ಬಳಿಕ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ. ಆದ್ದರಿಂದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಚುನಾವಣೆಗಾಗಿ ತಯಾರಿಯನ್ನು ಮಾಡಿಕೊಂಡಿವೆ.
ಸೆಪ್ಟೆಂಬರ್ 3ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ಮಾಡಬಹುದಾಗಿದೆ. ಬಿಜೆಪಿ ಎಲ್ಲಾ 82 ವಾರ್ಡ್ಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿ ನಾಯಕರು ಭರ್ಜರಿಯಾಗಿ ಪ್ರಚಾರವನ್ನು ನಡೆಸುತ್ತಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 8,11,537 ಮತದಾರರು ಇದ್ದಾರೆ.

ಜನರಿಗೆ ಬಿಜೆಪಿಯ ಭರವಸೆಗಳು
* ನಿರಂತರ ಕುಡಿಯುವ ನೀರಿನ ಯೋಜನೆ ಎಲ್ಲಾ ವಾರ್ಡ್ಗಳಿಗೆ ವಿಸ್ತರಣೆ
* ನೀರಿನ ಕರದ ಮೇಲಿನ ದಂಡ ರೂಪದ ಹಣವನ್ನು ಸಂಪೂರ್ಣ ಮನ್ನಾ ಮಾಡುವುದಕ್ಕೆ ಆದ್ಯತೆ
* ಆರ್ಥಿಕವಾಗಿ ಹಿಂದುಳಿದವರ ಮನೆಗಳನ್ನು ಗುರುತಿಸಿ, ನೀರಿನ ಕರವನ್ನು ಸಂಪೂರ್ಣ ಮನ್ನಾಕ್ಕೆ ಒತ್ತು
* ಶತ ಪ್ರತಿಶತ ಒಳಚರಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದು
* ಮಹಾನಗರದ ಎಲ್ಲಾ ವಿದ್ಯುತ್ ಕಂಬಗಳಿಗೆ ಸಂವೇದಕ ಸಹಿತ ಎಲ್ಇಡಿ ಬಲ್ಪಗಳ ಅಳವಡಿಕೆಗೆ ಕ್ರಮ

ಕಸ ಮುಕ್ತ ನಗರ ನಿರ್ಮಾಣ ಸಂಕಲ್ಪ
* ಟಿಪ್ಪರ್ಗಳ ಮೂಲಕ ಕಸ ಸಂಗ್ರಹ ಯೋಜನೆಯನ್ನು ಪ್ರಭಾವಿಯಾಗಿ ಕಾರ್ಯ ರೂಪಕ್ಕೆ ತರುವುದು
* ಕಸ ಮರು ಬಳಕೆ ಸಂಸ್ಕರಣ ಘಟಕಗಳ ನಿರ್ಮಾಣ ಹಾಗೂ ಎಸ್ಟಿಪಿಗಳನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರುವ ಮೂಲಕ ಸ್ವಚ್ಛ, ಸುಂದರ ಹಾಗೂ ಆರೋಗ್ಯ ಪೂರ್ಣ ವಾತಾವರಣ ನಿರ್ಮಾಣ
* ಎಲ್ಲಾ 82 ವಾರ್ಡ್ಗಳಲ್ಲಿ ಉದ್ಯಾನವನ ನಿರ್ಮಾಣ, ಮಕ್ಕಳಿಗಾಗಿ ಆಟದ ಮೈದಾನ, ವಾರದ ಸಂತೆಗೆ ವ್ಯವಸ್ಥೆ, ಪರಿಸರ ಸ್ನೇಹಿ ಇ-ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ
* ಜನ ನಿಬಿಡ ಪ್ರದೇಶಗಳ ಸಹಿತ ಎಲ್ಲಾ ಮಾರುಕಟ್ಟೆಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ

ಸುಗಮ ಪ್ರಯಾಣಕ್ಕಾಗಿ ಸಂಕಲ್ಪ
* ರೈಲು ನಿಲ್ದಾಣದಿಂದ ಹೊಸೂರು ರಸ್ತೆ ಹಾಗೂ ಗೋಕುಲ ರಸ್ತೆಯ ಪ್ರಾರಂಭದ ತನಕ ರೂ. 450 ಕೋಟಿ ವೆಚ್ಚದಲ್ಲಿ ಫ್ಲೈ ಓವರ್ ನಿರ್ಮಾಣ ಪೂರ್ಣಗೊಳಿಸುವುದು.
* ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯನ್ನು 6 ಪಥದ ರಸ್ತೆಯಾಗಿ ಮೇಲ್ದರ್ಜೆಗೇರಿಸುವುದು.
* ಹೊರ ವರ್ತುಲ ರಸ್ತೆಯ ಕಾಮಗಾರಿಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿ ವಾಹನ ಸಂಚಾರವನ್ನು ಸುಗುಮಗೊಳಿಸುವುದು.
* ಅವಳಿ ನಗರದಲ್ಲಿ ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಯೋಜನೆ.
* ಸ್ಮಾರ್ಟ್ ಸಿಟಿ ಯೋಜನೆಯನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರುವುದು.
* ಹುಬ್ಬಳ್ಳಿಯ ಜನತಾ ಬಜಾರ್, ಮಹಾತ್ಮಾ ಗಾಂಧಿ ಮಾರುಕಟ್ಟೆ, ಹಳೇ -ಹುಬ್ಬಳ್ಳಿ ಮಾರುಕಟ್ಟೆ ಹಾಗೂ ಧಾರವಾಡ ಸೂಪರ್ ಮಾರುಕಟ್ಟೆ ನವೀಕೃತ ಕಟ್ಟಡ ನಿರ್ಮಾಣ ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವುದು.

ಜನಸ್ನೇಹಿ ಮಹಾನಗರ ಪಾಲಿಕೆ ಮಾಡಲು ಕ್ರಮ
* ಜನ ಸ್ನೇಹಿ ಮಹಾನಗರ ಪಾಲಿಕೆಗಾಗಿ ಇ-ಆಡಳಿತ ಜಾರಿಗೆ ಕ್ರಮ. ಜನರ ಕುಂದು ಕೊರತೆ, ಕರಪಾವತಿ, ಕಟ್ಟಡ ಅನುಮೋದನೆ ಮುಂತಾದ ವ್ಯವಹಾರಗಳಿಗಾಗಿ ಅಪ್ಲಿಕೇಶನ್ ರಚನೆ.
* ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಅಡುಗೆ ಅನಿಲ ಪೂರೈಕೆಗೆ ಪೈಪ್ ಲೈನ್ ಅಳವಡಿಸುವ ಕಾರ್ಯವನ್ನು ಮುಂದುವರೆಸಿ ಎಲ್ಲಾ ಮನೆಗಳಿಗೆ ತಲುಪಿಸುವುದು.
* ಪಾಲಿಕೆ ಆಸ್ಪತ್ರೆಗಳನ್ನು ಅಭಿವೃದ್ಧಿ ಮಾಡುವುದು ಹಾಗೂ ಆಮ್ಲಜನಕ ಘಟಕಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವುದು.
* ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಸುವ್ಯವಸ್ಥಿತವಾಗಿರುವ ಕ್ರೀಡಾ ಸಮುಚ್ಛಯ ನಿರ್ಮಾಣ ಕಾರ್ಯ ಪೂರ್ಣಗೊಳಿಸುವುದು.
* ಹುಬ್ಬಳ್ಳಿ ಮತ್ತು ಧಾರವಾಡ ನಗರದಲ್ಲಿ ಅಂತರಾಷ್ಟ್ರೀಯ ಮಟ್ಟದ ಈಜುಕೊಳಗಳ ನಿರ್ಮಾಣ












Click it and Unblock the Notifications