'ವಿನಯ್ ಕುಲಕರ್ಣಿ ಬದಲು ವಿಜಯ ಕುಲಕರ್ಣಿ ಸ್ಪರ್ಧಿಸಿ ಗೆದ್ದು ತೋರಿಸಲಿ'
ಧಾರವಾಡ, ಡಿಸೆಂಬರ್ 26 : ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಅವರು ಪೊಲೀಸ್ ಇಲಾಖೆಯನ್ನು ದುರಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ದೇಶಪೂರ್ವಕವಾಗಿಯೇ ಸಚಿವರ ಸಹೋದರ ವಿಜಯ ಕುಲಕರ್ಣಿ ಅವರು ನನ್ನ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಸಿವಿಲ್ ವಾರೆಂಟ್ ಪ್ರಕಾರ ಮಲ್ಲಮ್ಮ ಗೌಡರ ಅವರನ್ನು ಮೊದಲು ಬಂಧಿಸಬೇಕಿತ್ತು. ಆದರೆ, ಅವರು ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುತ್ತಿದ್ದಾರೆ ಎಂದರು.

ಇಂಥ ಕುತಂತ್ರ ರಾಜಕಾರಣ ಮಾಡುವುದನ್ನು ಕಾಂಗ್ರೆಸ್ ಮೊದಲು ಬಿಡಬೇಕು ಎಂದರು. ವಿಜಯ ಕುಲಕರ್ಣಿಗೆ ತಾಕತ್ತಿದ್ದರೆ ನಮ್ಮ ವಿರುದ್ಧ ಚುನಾವಣೆಗೆ ಸ್ಪರ್ಧಿಸಲಿ. ಸಚಿವ ವಿನಯ ಅವರು ಈಗಾಗಲೇ ಹೆಸರು ಗಳಿಸಿದ್ದಾರೆ. ತಮ್ಮ ಸಹೋದರ ವಿಜಯ ಅವರಿಗೆ ತಮ್ಮ ಕ್ಷೇತ್ರವನ್ನು ಬಿಟ್ಟು ವಿನಯ್ ಅವರು ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡಿ ತೋರಿಸಲಿ ಎಂದರು.
ಧಾರವಾಡ 71 ಕ್ಷೇತ್ರದಿಂದ ವಿಜಯ ಕುಲಕರ್ಣಿ ಸ್ಪರ್ಧೆ ಮಾಡಿ ನೋಡಲಿ ಎಂದು ಅವರು ಸವಾಲು ಹಾಕಿದರು. ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ಸಚಿವ ವಿನಯ್ ಅವರ ಸಹೋದರ ವಿಜಯ ಕುಲಕರ್ಣಿ ಅವರ ಕೈವಾಡ ಇದೆ ಎಂದು ತವನಪ್ಪ ಅಷ್ಟಗಿ ಅವರು ಆರೋಪ ಮಾಡಿದ್ದಾರೆ ಎಂದು ವಿಜಯ ಕುಲಕರ್ಣಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ತವನಪ್ಪ ಅವರು ವಿಚಾರಣೆಗೆ ಹಾಜರಾಗದೇ ಇದ್ದಕ್ಕೆ ಬೆಂಗಳೂರು ಪೊಲೀಸರು ತವನಪ್ಪ ಅವರನ್ನು ಬಂಧಿಸಿ ಕರೆದೊಯ್ದಿದ್ದರು. ತವನಪ್ಪ ಅವರಿಗೆ ಈ ಪ್ರಕರಣ ಸಂಬಂಧ ಮೊನ್ನೆಯಷ್ಟೇ ಜಾಮೀನು ದೊರೆತಿದೆ. ಬಿಜೆಪಿ ಮುಖಂಡ ಈರೇಶ ಅಂಚಟಗೇರಿ ಸುದ್ದಿಗೋಷ್ಠಿಯಲ್ಲಿದ್ದರು.












Click it and Unblock the Notifications