ನನ್ನ ಮೇಲಿನ ಆರೋಪಗಳೆಲ್ಲವೂ ಸುಳ್ಳು : ವಿನಯ್ ಕುಲಕರ್ಣಿ ಸ್ಪಷ್ಟನೆ
ಧಾರವಾಡ, ನವಂಬರ್ 26: ಯೋಗೀಶ್ ಗೌಡ ಅವರ ಕೊಲೆ ಪ್ರಕರಣದಲ್ಲಿ ಸಾಕ್ಷಿ ನಾಶದ ಆರೋಪ ಹೊತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ.
ವಿನಯ್ ಕುಲಕರ್ಣಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ: ಶೆಟ್ಟರ್
ಧಾರವಾಡದಲ್ಲಿ ಶನಿವಾರ ಮಾಧ್ಯಮಗೋಷ್ಡಿ ನಡೆಸಿ ಮಾತನಾಡಿದ ಅವರು, ಎರಡು ದಿನಗಳಿಂದ ಮಾಧ್ಯಮದಲ್ಲಿ ಆಡಿಯೋ ಬಂದಿದೆ. ಕೆಲ ಮಾಧ್ಯಮದಲ್ಲಿ ನಾನು ಬೈದಿರುವ ಬೈಗುಳ ಮಾತ್ರ ತೋರಿಸಿದ್ದಾರೆ . ಆದರೆ ಅದರ ಹಿಂದಿನ ಸತ್ಯವೇ ಬೇರೆ ಎಂದಿದ್ದಾರೆ.
"ವಕೀಲ ಆನಂದ ಈ ಮೊದಲು ನನ್ನ ಜೊತೆಯಲ್ಲಿ ಇದ್ದವನು. ನಾನು ಚುನಾವಣೆಯಲ್ಲಿ ಸೋತ ನಂತರ ನನ್ನ ಬಿಟ್ಟು ಹೋಗಿದ್ದಾರೆ," ಎಂದು ವಿವರಣೆ ನೀಡಿದ್ದಾರೆ.
ಮಾಧ್ಯಮದಲ್ಲಿ ಪ್ರಸಾರವಾಗಿರುವ ಆಡಿಯೋ ಕ್ಲಿಪ್ ಸಂಪೂರ್ಣ ಇಲ್ಲ. ಆದರೆ ಅವರ ಜತೆ ಮಾತನಾಡಿದ ಪೂರ್ಣ ಕ್ಲಿಪ್ಪಿಂಗ್ ನನ್ನ ಬಳಿ ಇದೆ. ನಾನು ಯೋಗೀಶ್ ಗೌಡ ಕೊಲೆ ಪ್ರಕರಣದ ಪತ್ರದ ಬಗ್ಗೆ ಮಾತನಾಡಿಲ್ಲ. ನಾನು ನನಗೆ ಬಂದಿರುವ ಅಶ್ಲೀಲ ಪತ್ರದ ಬಗ್ಗೆ ಮಾತನಾಡಿದ್ದೇನೆ ಎಂದರು.
ಇದರ ಹಿಂದೆ ದೊಡ್ಡ ಶಕ್ತಿಗಳ ಕೈವಾಡ ಇದೆ . ಇಲ್ಲಿ ಎಲ್ಲರೂ ಬೇರೆಯವರ ಕೈಗೊಂಬೆಯ ರೀತಿಯಲ್ಲಿ ಆಟ ಆಡುತ್ತಿದ್ದಾರೆ ಎಂದು ಕುಲಕರ್ಣಿ ಆರೋಪಿಸಿದರು.
ನನಗೆ ಕಳೆದ ಕೆಲ ದಿನಗಳಿಂದ ಅಶ್ಲೀಲ ಪತ್ರ ಬರುತ್ತಿವೆ. ನನಗೆ ಪತ್ರ ಬರುವ ವಿಚಾರ ಎಲ್ಲರಿಗೂ ಗೊತ್ತಿದೆ. ನಾನು ಅಂದು ಇದೇ ವಿಷಯವಾಗಿ ಮಾತನಾಡಿದ್ದು . ಆದರೆ ಈ ಆಡಿಯೋ ಕ್ಲಿಪ್ ಬಳಸಿ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ತಳುಕು ಹಾಕಿದ್ದಾರೆ. ಈ ರೀತಿ ನನ್ನ ಮೇಲೆ ಪತ್ರ ಬರೆಸುತ್ತಿರುವವರು ಅಮೃತ ದೇಸಾಯಿ. ಅಮೃತ ದೇಸಾಯಿ ಕೂಡಾ ಒಳ್ಳೆ ಕುಟುಂಬದವರು. ಆದರೆ ಅವರ ಹಿಂದೆ ಒಳ್ಳೆ ಜನ ಇಲ್ಲ. ಬಸವರಾಜ್ ಕೊರವರನಂಥವರು ಅಮೃತ ಹಿಂದೆ ಇದ್ದಾರೆ ಎಂದಿದ್ದಾರೆ
ಎಲ್ಲ ಜಾತಿಯವರು ನಮ್ಮ ಮನೆಗೆ ಬರ್ತಾರೆ. 18 ವರ್ಷದವನಿದ್ದಾಗಲೇ ನಾನು ರಾಜಕೀಯದಲ್ಲಿದ್ದೇನೆ. ಆದರೆ ಇದುವರೆಗೂ ನಾನು ನನ್ನ ಪತ್ನಿ ಹೆಸರಿನಲ್ಲಿ ಯಾವುದೇ ಆಸ್ತಿ ಮಾಡಿಲ್ಲ. ಯಾರ ಬಳಿಯಾದರೂ ದಾಳಕೆ ಇದ್ದರೆ ತಂದು ತೋರಿಸಲಿ ಎಂದು ಸವಾಲು ಹಾಕಿದರು.
ನಾನು ವಿನಂತಿ ಮಾಡಿ ಹೇಳುತ್ತೇನೆ. ಇದೊಂದು ಪ್ಲಾನ್. ನನ್ನ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದೇನೆ. ಇದರಿಂದ ನನ್ನ ಬೆಳವಣಿಗೆ ಕಂಡು ಪ್ರಹ್ಲಾದ ಜೋಶಿಯವರು ಬಹಳ ಹತಾಷರಾಗಿ ಮಾತನಾಡುತ್ತಾ ಇದ್ದಾರೆ. ಅವರು ಮಹದಾಯಿ ಬಗ್ಗೆ ಮಾತನಾಡುತ್ತಿಲ್ಲ. ಅವರು ಮನಸ್ಸು ಮಾಡಿದರೆ ಒಂದು ವಾರದಲ್ಲಿ ಮಹದಾಯಿ ಸಮಸ್ಯೆ ಇತ್ಯರ್ಥವಾಗುತ್ತದೆ. ಆದರೆ ಅದನ್ನು ಬಿಟ್ಟು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.