Dharwad: ಬೀಕರ ಅಪಘಾತದಲ್ಲಿ ತಾಯಿ-ಮಕ್ಕಳು ಸೇರಿ ಮೂವರ ಸಾವು: ಓಣಿಯಲ್ಲಿ ಸ್ಮಶಾನ ಮೌನ
ಧಾರವಾಡ, ಫೆಬ್ರವರಿ 23: ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಮದುವೆಗಂದು ತೆರಳುತ್ತಿದ್ದ ತಾಯಿ ಮತ್ತವರ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮದುವೆ ಮನೆ ತೆರಳಬೇಕಾದವರು ವಿಧಿಯಾಟದಿಂದ ಮಸಣ ಸೇರಿದ ಘಟನೆ ಗುರುವಾರ ನಡೆದಿದೆ. ಮೃತರನ್ನು ಧಾರವಾಡದ ಮೂಲದವರು ಎಂದು ಗುರುತಿಸಲಾಗಿದೆ.
ಧಾರವಾಡ ಜಿಲ್ಲೆಯತಡಕೋಡ (ಲಂಗೋಟಿ) ಓಣಿಯಲ್ಲಿ ಗುರುವಾರ ಸೂತಕ ವಾತಾವರಣ ನಿರ್ಮಾಣವಾಗಿತ್ತು. ಈ ಭೀಕರ ಅಪಘಾತದಲ್ಲಿ ಶಬಾನಾ (38) ಮಕ್ಕಳಾದ ಸಾನಿಯಾ (18), ಉಮ್ರಾ (16) ಮೃತಪಟ್ಟವರು ದುರ್ದೈವಿಗಳು.

ಅಂಜುಮನ್ ಇಸ್ಲಾಂ ಸಂಸ್ಥೆಯ ಪಿಯುಸಿ ವಿಭಾಗದಲ್ಲಿ ಸಾನಿಯಾ, ಎಸ್ಎಸ್ಎಲ್ಸಿಯಲ್ಲಿ ಉಮ್ರಾ ಓದುತ್ತಿದ್ದಾರೆ. ಶಬಾನಾಳ ಪತಿಯಾದ ಮಹಮ್ಮದ ಅಸ್ಲಂನ ಚಿಕ್ಕಮ್ಮಳ ಮಗಳ ಮದುವೆಗೆ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಇದರಲ್ಲಿ ತಾಯಿ-ಮಕ್ಕಳು ಪ್ರಾಣ ಬಿಟ್ಟಿದ್ದಾರೆ. ಶಬಾನಾಗೆ ಇನ್ನೂ ಇಬ್ಬರು ಮಕ್ಕಳಿದ್ದಾರೆ.
ಗಂಡು ಮಕ್ಕಳಿದ್ದು, ಅವರಿಬ್ಬರೂ ಈ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮಹಮ್ಮದ್ ಅಸ್ಲಾಂ ಲಂಗೋಟಿ ಹಾಗೂ ವಾಸೀಮ್ ಲಂಗೋಟಿ ಅಣ್ಣ-ತಮ್ಮಂದಿರಾಗಿದ್ದು, ಇಬ್ಬರೂ ಲಾರಿ ಚಾಲಕರು. ಹೀಗಾಗಿ ಕೆಲಸವಿದ್ದ ಕಾರಣ ಚಿಕ್ಕಮ್ಮಳ ಮಗಳ ಮದುವೆಗೆ ಹೋಗಲು ಆಗಿರಲಿಲ್ಲ. ಈ ಕಾರಣದಿಂದ ಇಬ್ಬರು ತಮ್ಮ ಪತ್ನಿ-ಮಕ್ಕಳನ್ನು ಮದುವೆಯಲ್ಲಿ ಪಾಲ್ಗೊಳ್ಳಲು ಕಿತ್ತೂರಿಗೆ ಕಳುಹಿಸಿ ಕೊಟ್ಟಿದ್ದರು.
ಇಡೀ ಓಣಿಯಲ್ಲಿ ಸ್ಮಶಾನ ಮೌನ
ಕಿತ್ತೂರಿನಲ್ಲಿ ಬುಧವಾರ ಮದುವೆ ಮುಗಿಸಿ ಬಂದಿದ್ದ ಕುಟುಂಬಗಳು, ಮತ್ತೆ ಗುರುವಾರ ಬೆಳಗ್ಗೆ ನಿಗದಿಯಾಗಿದ್ದ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ್ದರು.
ಇದಲ್ಲದೇ ವಾಸೀಮ್ನ ಪತ್ನಿ ಸೋಫಿಯಾ ಹಾಗೂ ಇಬ್ಬರು ಮಕ್ಕಳಿಗೂ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗ್ಗೆಯಷ್ಟೇ ಆರಕ್ಷತೆಗೆಂದು ಹೋಗಿದ್ದವರ ಸಾವಿನ ಸುದ್ದಿ ಆಘಾತದಂತೆ ತಲುಪಿಸಿದ್ದು, ಇಡೀ ತಡಕೋಡ ಓಣಿಯಲ್ಲಿ ಸ್ಮಶಾನ ಮೌನವೇ ಆವರಿಸುವಂತೆ ಮಾಡಿದೆ.
ಎಲ್ಲರೂ ತಾಯಿ-ಮಕ್ಕಳ ಸಾವಿನ ಸುದ್ದಿಗೆ ಎಲ್ಲರೂ ಮರುಗಿದ್ದು ಕಂಡು ಬಂದರೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.ತಡರಾತ್ರಿವರೆಗೂ ಮೃತರ ಪಾರ್ಥಿವ ಶರೀರಗಳು ತಲುಪಲಿದ್ದು, ಇನ್ನು ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಅಪಘಾತದ ಪ್ರಕರಣ ಸ್ಥಳೀಯರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.












Click it and Unblock the Notifications