ಧಾರವಾಡ ಸಾಹಿತ್ಯ ಸಮ್ಮೇಳನ, ಮುಖ್ಯ ವೇದಿಕೆ ನಿರ್ಮಾಣ ಪೂರ್ಣ
ಧಾರವಾಡ, ಜನವರಿ 01 : 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಜನವರಿ 4 ರಿಂದ ಮೂರು ದಿನಗಳ ಕಾಲ ಧಾರವಾಡದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ವೇದಿಕೆ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಪ್ರಸಾದ ಅಬ್ಬಯ್ಯ ಅವರು ಮುಖ್ಯ ವೇದಿಕೆ, ಮಾಧ್ಯಮ ಕೇಂದ್ರ, ಭೋಜನಾಂಗಣ, ಪುಸ್ತಕ ಮಳಿಗೆಗಳ ನಿರ್ಮಾಣ ಕಾರ್ಯವನ್ನು ಪರಿಶೀಲಿಸಿದರು. 300×600 ಅಡಿಯ ಮುಖ್ಯ ವೇದಿಕೆಯನ್ನು 50 ಸಾವಿರ ಜನರಿಗೆ ಆಸನ ವ್ಯವಸ್ಥೆಯೊಂದಿಗೆ ನಿರ್ಮಿಸಲಾಗುತ್ತಿದೆ.

ಕಲಾವಿದರಾದ ಬಿ.ಮಾರುತಿ, ಪ್ರತಾಪ ಬಹುರೂಪಿ ಹಾಗೂ ತಂಡದವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕಿತ್ತೂರ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ ಗೋಪುರ, ಹಂಪಿಯ ಶಿಲ್ಪಕಲಾಕೃತಿಗಳ ಪ್ರತಿಬಿಂಬಗಳನ್ನು ಒಳಗೊಂಡ ವೇದಿಕೆಯ ಸಭಾಮಂಟಪ ನಿರ್ಮಾಣವಾಗುತ್ತಿದೆ.

ಕೃಷಿ ವಿಶ್ವವಿದ್ಯಾಲಯ ಫುಟ್ಬಾಲ್ ಮೈದಾನದ ಪೆವಿಲಿಯನ್ ಕಟ್ಟಡದಲ್ಲಿ ಮಾಧ್ಯಮಕೇಂದ್ರ ನಿರ್ಮಿಸಲಾಗುತ್ತಿದೆ. 500 ಪುಸ್ತಕ ಮಳಿಗೆಗಳು, 250 ವಾಣಿಜ್ಯ ಮಳಿಗೆಗಳು, ನೋಂದಣಿಗಾಗಿ 75 ಮಳಿಗೆಗಳು ತಲೆ ಎತ್ತಿವೆ.
ಸಾರಿಗೆ ವ್ಯವಸ್ಥೆ : ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಗಣ್ಯರಿಗೆ ಅತಿಥಿಗಳಿಗೆ ಹಾಗೂ ನೋಂದಾಯಿತ ಸದಸ್ಯರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿವಿಧ ಜಿಲ್ಲೆಗಳಿಂದ 618 ಅತಿಥಿ ಗಣ್ಯರು, 992 ವಿಶೇಷ ಆಹ್ವಾನಿತರು, 338 ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಒಟ್ಟು 17365 ಜನರು ಆಗಮಿಸಲಿದ್ದಾರೆ.
ಧಾರವಾಡದ 35 ಹೊಟೇಲ್ ಹಾಗೂ ಹುಬ್ಬಳ್ಳಿಯ 45 ಹೊಟೇಲ್ ಸೇರಿದಂತೆ ಒಟ್ಟು 80 ಹೊಟೇಲ್ ಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿರುವ 87 ಹಾಸ್ಟೆಲ್, 35 ಕಲ್ಯಾಣ ಮಂಟಪ, ಧಾರವಾಡದ 18 ಶಾಲೆಗಳು ಹಾಗೂ 14 ಪೇಯಿಂಗ್ ಗೆಸ್ಟ್ ಹೌಸ್ ಗಳಲ್ಲಿಯೂ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications