ಸಂಚಾರಿ ನಿಯಮ ಉಲ್ಲಂಘನೆ: ಧಾರವಾಡದಲ್ಲಿ ಬರೋಬ್ಬರಿ 4ಕೋಟಿ ರೂ. ದಂಡ ಸಂಗ್ರಹ
ಧಾರವಾಡ, ಜುಲೈ 20: ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ವ್ಯಾಪ್ತಿಯ 4 ಸಂಚಾರ ಠಾಣೆ ಹಾಗೂ ಜಿಲ್ಲೆಯ ಗ್ರಾಮೀಣ 9 ಠಾಣೆಗಳ ವ್ಯಾಪ್ತಿಯಲ್ಲಿ 2023ರ ಜನವರಿಯಿಂದ ಜೂನ್ ಅಂತ್ಯದವರೆಗೆ ಭಾರತೀಯ ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿರುವ ಕುರಿತು ಒಟ್ಟು 82,910 ಪ್ರಕರಣಗಳು ದಾಖಲಾಗಿದ್ದು, ವಾಹನ ಸವಾರರು ಒಟ್ಟು 4,02,94,725 ರೂಪಾಯಿ ದಂಡ ಪಾವತಿಸಿದ್ದಾರೆ.
ಧಾರವಾಡ ಸಂಚಾರ ಠಾಣೆ, ಉತ್ತರ, ದಕ್ಷಿಣ ಮತ್ತು ಪೂರ್ವ ಸಂಚಾರ ಠಾಣೆಗಳಲ್ಲಿ 2023ರಲ್ಲಿ ಒಟ್ಟು 81,762 ಪ್ರಕರಣ, 3,58,71,025 ರೂ. ದಂಡ. ಕೋರ್ಟ್ ಮೂಲಕ ಕಟ್ಟಿದ ದಂಡ 37,48,100 ರೂಪಾಯಿ. ಅದೇ ರೀತಿ ಧಾರವಾಡ ಜಿಲ್ಲೆ ಗ್ರಾಮೀಣ ವಿಭಾಗದ ಅಣ್ಣಿಗೇರಿ, ಅಳ್ನಾವರ, ಧಾರವಾಡ ಗ್ರಾಮೀಣ, ಗರಗ, ಗುಡಗೇರಿ, ಹುಬ್ಬಳ್ಳಿ ಗ್ರಾಮೀಣ, ಕಲಘಟಗಿ, ಕುಂದಗೋಳ ಹಾಗೂ ನವಲಗುಂದ ಪೊಲೀಸ್ ಠಾಣೆಗಳಲ್ಲಿ 1,148 ಪ್ರಕರಣ ದಾಖಲಾಗಿದ್ದು, 6,75,600 ರೂ. ದಂಡ ವಸೂಲಾಗಿದೆ.

ಕಳೆದ ವರ್ಷ 8.39 ಕೋ.ರೂ. ದಂಡ
ಕಳೆದ ವರ್ಷ 2022ರ ಜನವರಿಯಿಂದ ಡಿಸೆಂಬರ್ವರೆಗೆ ಹು-ಧಾ ಕಮಿಷನರೇಟ್ ಮತ್ತು ಜಿಲ್ಲೆಯ ಗ್ರಾಮೀಣ ವಿಭಾಗದ ಪೊಲೀಸ್ ಠಾಣೆಗಳಲ್ಲಿ 1,52,593 ಪ್ರಕರಣ ದಾಖಲಾಗಿದ್ದು, 8,39,77,800 ರೂಪಾಯಿ ದಂಡ ಪಾವತಿಯಾಗಿತ್ತು.
ಅದೇ ರೀತಿ 2023ರ ಜನವರಿಯಿಂದ ಜೂನ್ ಅಂತ್ಯದವರೆಗೆ ಹು-ಧಾ ಕಮಿಷನರೇಟ್ ವ್ಯಾಪ್ತಿ ಮತ್ತು ಧಾರವಾಡ ಜಿಲ್ಲೆ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ 190 ಮಾರಣಾಂತಿಕ ಅಪಘಾತ ಪ್ರಕರಣ ದಾಖಲಾಗಿದ್ದು, ಒಟ್ಟು 207 ಜನರು ಸಾವಿಗೀಡಾಗಿದ್ದಾರೆ. ಮಾರಣಾಂ ತಿಕವಲ್ಲದ 358 ಅಪಘಾತ ಪ್ರಕರಣ ದಾಖಲಾಗಿದ್ದು, 670 ಮಂದಿ ಗಾಯಗೊಂಡಿದ್ದಾರೆ.
ಕಳೆದ ವರ್ಷ 363 ಜನ ಸಾವು
2022ರ ಜನವರಿಂದ ಡಿಸೆಂಬರ್ವರೆಗೆ ಹು-ಧಾ ಕಮಿಷನರೇಟ್ ಮತ್ತು ಜಿಲ್ಲೆಯ ವಿವಿಧ ಗ್ರಾಮೀಣ ಠಾಣೆಗಳಲ್ಲಿ ಮಾರಣಾಂತಿಕ ಒಟ್ಟು 305 ಪ್ರಕರಣ ದಾಖಲಾಗಿದ್ದು, 363 ಜನ ಮೃತಪಟ್ಟಿದ್ದಾರೆ. ಇನ್ನು ಮಾರಣಾಂತಿಕವಲ್ಲದ ಒಟ್ಟು 686 ಪ್ರಕರಣ ದಾಖಲಾಗಿದ್ದು, 1160 ಜನರು ಗಾಯಗೊಂಡಿದ್ದಾರೆ.
ಡ್ರಂಕ್ ಆ್ಯಂಡ್ ಡ್ರೈವ್-ಸಿಗ್ನಲ್ ಜಂಪ್
ಪ್ರಸಕ್ತ ವರ್ಷ ಮತ್ತು ಕಳೆದ ವರ್ಷ ಅತಿ ಹೆಚ್ಚು ದಂಡ ಪಾವತಿಸಿದವರಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದವರು, ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಓಡಿಸಿದವರು ಮತ್ತು ಸಿಗ್ನಲ್ ಜಂಪ್ ಮಾಡಿದವರೇ ಹೆಚ್ಚಿಗೆ ಇದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಇತ್ತೀಚಿನ ದಿನಗಳಲ್ಲಿ ಕಾಲೇಜ್ ವಿದ್ಯಾರ್ಥಿಗಳು ಮತ್ತು ಕೆಲ ಪುಂಡರು ನಗರದ ಹೊರವಲಯ ಗಬ್ಬೂರು ಬೈಪಾಸ್, ಮಂಟೂರು ರಸ್ತೆಯ ರಿಂಗ್ ರೋಡ್ನಲ್ಲಿ ವ್ಹೀಲಿಂಗ್ ಮಾಡುತ್ತಿದ್ದಾರೆ. ಇದರಿಂದ ಎದುರು ಬರುವ ಪಾದಚಾರಿಗಳು ಮತ್ತು ವಾಹನ ಸವಾರರು ಅಪಘಾತಕ್ಕೆ ಈಡಾಗುತ್ತಿದ್ದಾರೆ. ಇಂಥವರನ್ನು ಕೂಡ ಹಿಡಿದು ದಂಡ ಹಾಕಿ, ಬುದ್ಧಿ ಹೇಳಿ ಕಳುಹಿಸಲಾಗುತ್ತಿದೆ. ಇತ್ತೀಚೆಗೆ ವ್ಹೀಲಿಂಗ್ ಮಾಡುವವರನ್ನು ತಡೆಯಲು ಹೋದ ಪೊಲೀಸ್ ವಾಹನಕ್ಕೇ ಬೈಕ್ ಸವಾರರು ಡಿಕ್ಕಿ ಹೊಡೆದರು. ಬಳಿಕ ತಪ್ಪಾಗಿದೆ ಕ್ಷಮಿಸಿ ಎಂದು ಪೊಲೀಸರ ಬಳಿ ಗೋಗರೆದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿ
ವಾಹನ ಅಪಘಾತ ತಡೆಯಲು ಹುಬ್ಬಳ್ಳಿ-ಧಾರವಾಡದಲ್ಲಿ ಅಲ್ಲಲ್ಲಿ ರಸ್ತೆ ದುರಸ್ತಿ ಅಥವಾ ಹೊಸ ರಸ್ತೆ ನಿರ್ಮಾಣದ ಬಳಿಕ ಆಯಾ ರಸ್ತೆಗಳನ್ನು ಸಂಬಂಧಿಸಿದವರು (ಫಿನಿಶಿಂಗ್) ಕೆಲಸ ಪೂರ್ಣಗೊಳಿಸಬೇಕು. ಅರೆಬರೆ ಕೆಲಸ ಮಾಡುವುದರಿಂದ ವಾಹನ ಸವಾರರು ಬಿದ್ದು ಆಸ್ಪತ್ರೆಗೆ ಸೇರುವಂತಾಗಿದೆ. ಇದರತ್ತ ಕೂಡ ಸಂಬಂಧಪಟ್ಟವರು ಗಮನ ಹರಿಸಬೇಕು ಎಂಬುದು ಪೊಲೀಸರ ಮನವಿ.
ಸಂಚಾರ ನಿಯಮ ಪಾಲಿಸುವ ಕುರಿತು ಪೊಲೀಸ್ ಇಲಾಖೆಯಿಂದ ಆಗಾಗ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಜತೆಗೆ 18 ವರ್ಷ ತುಂಬಿರದ ಕಾಲೇಜ್ ವಿದ್ಯಾರ್ಥಿಗಳು ಬೈಕ್ ಓಡಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಇದಕ್ಕೆ ಕಡಿವಾಣ ಹಾಕುಲು ಆಯಾ ಕಾಲೇಜು ಮುಖ್ಯಸ್ಥರು ಮುಂದಾಗಬೇಕು. ವಾಹನ ಚಾಲನಾ ಪರವಾನಗಿ ಇಲ್ಲದೆ ವಾಹನ ಓಡಿಸುವುದು ತಪ್ಪು ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕು. ಜತೆಗೆ ಪಾಲಕರು ಕೂಡ ಅಪ್ರಾಪ್ತ ಮಕ್ಕಳಿಗೆ ದ್ವಿಚಕ್ರ ವಾಹನಗಳನ್ನು ಕೊಡಬಾರದು
ಎಂದು ಹುಬ್ಬಳ್ಳಿ ಧಾರವಾಡ ಪೊಲೀಸರೇಟ್ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಡಾ. ಗೋಪಾಲ ಬ್ಯಾಕೋಡ ಸಲಹೆ ನೀಡಿದ್ದಾರೆ.












Click it and Unblock the Notifications