ಫಲವನಹಳ್ಳಿಯಲ್ಲಿ ಚಿರತೆ ದಾಳಿಯಿಂದ ಮಹಿಳೆ ಸಾವು, ಚಿರತೆ ಸೆರೆಗೆ "ಆಪರೇಷನ್ ಡಾಗ್''
ದಾವಣಗೆರೆ, ಆಗಸ್ಟ್, 25: ಹೊನ್ನಾಳಿ, ನ್ಯಾಮತಿ ತಾಲೂಕಿನಲ್ಲಿ ಮತ್ತೆ ಚಿರತೆ ಕಾಟ ಶುರುವಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಚಿರತೆಗಳ ದಾಳಿಗೆ ಜನರು ಬೇಸತ್ತು ಹೋಗಿದ್ದರು. ಆಗ ಬೋನು ಹಾಕುವ ಮೂಲಕ ಚಿರತೆಗಳನ್ನು ಹಿಡಿಯಲಾಗಿತ್ತು. ಆದರೆ ಇದೀಗ ಮತ್ತೆ ಚಿರತೆಗಳು ಗ್ರಾಮಗಳಿಗೆ ನುಗ್ಗುತ್ತಿದ್ದು, ಜನರಲ್ಲಿ ಮತ್ತಷ್ಟು ಭೀತಿ ಸೃಷ್ಟಿಸಿವೆ. ನ್ಯಾಮತಿ ತಾಲೂಕಿನ ಫಲವನಹಳ್ಳಿಯಲ್ಲಿ ಚಿರತೆ ದಾಳಿಯಿಂದ ಮಹಿಳೆ ಸಾವನ್ನಪ್ಪಿದ್ದರು. ಬಳಿಕ ಚಿರತೆ ಸೆರೆಗೆ "ಆಪರೇಷನ್ ಡಾಗ್'' ಕಾರ್ಯಾಚರಣೆ ನಡೆಸಲಾಗಿತ್ತು.
ಚಿರತೆ ಹಿಡಿಯಲು ಅರಣ್ಯ ಇಲಾಖೆ ಬೋನ್ ಅಳವಡಿಕೆ ಮಾಡಿದೆ. ಬೋನ್ನಲ್ಲಿ ಶ್ವಾನವಿಟ್ಟು ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಯೋಜನೆ ರೂಪಿಸಿದ್ದಾರೆ. 4 ತಂಡ ರಚಿಸಿರುವ ಅರಣ್ಯ ಇಲಾಖೆ ಕಾರ್ಯಾಚರಣೆ ಶುರು ಮಾಡಿದೆ.
ಬೇಬಿ ಬೆಟ್ಟದ ಶ್ರೀ ರಾಮಯೋಗೀಶ್ವರ ಮಠದ ಆವರಣದಲ್ಲಿ ಚಿರತೆ ಪ್ರತ್ಯಕ್ಷ
ನ್ಯಾಮತಿ ಫಲವನಹಳ್ಳಿ ಗ್ರಾಮ ಸೇರಿ ಸುತ್ತಮುತ್ತಲಿನ ಗ್ರಾಮದ ಜನರಿಗೆ ಜಮೀನುಗಳಿಗೆ ಹೋಗದಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಪಂಚಾಯತ್ ಸಿಬ್ಬಂದಿ ಮೂಲಕ ಜನರಿಗೆ ಮಾಹಿತಿ ನೀಡಲಾಗುತ್ತಿದೆ. ಚಿರತೆಗಳು ಹೆಚ್ಚಾಗಿದ್ದು, ಸೆರೆ ಹಿಡಿಯುವವರೆಗೆ ಯಾರೂ ಒಬ್ಬಂಟಿಯಾಗಿ ಹೊರಗಡೆ ಹೋಗಬೇಡಿ ಎಂದು ಮಾಹಿತಿ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜನರಿಗ ಹೊರಗೆ ಓಡಾದಂತೆ ಪಂಚಾಯತ್ ಮೂಲಕ ಪ್ರಕಟಣೆಯನ್ನು ಹೊರಡಿಸಲಾಗಿದೆ.
ಚಿರತೆ ಸೆರೆಗೆ ಅರಣ್ಯ ಇಲಾಖೆ ಸಜ್ಜು
ಇನ್ನು ಚಿರತೆಯು ಮಹಿಳೆಯನ್ನು ಹೊತ್ತೊಯ್ದ ಫಲವನಹಳ್ಳಿ ಗ್ರಾಮದ ಜಮೀನಿನ ಸುತ್ತಮುತ್ತಲಿನ 5 ಕಡೆಗಳಲ್ಲಿ ಬೋನ್ ಅಳವಡಿಕೆ ಮಾಡಲಾಗಿದೆ. 10 ಕಡೆ ಸಿಸಿ ಕ್ಯಾಮೆರಾ ಅಳವಡಿಸಿ ಚಿರತೆ ಚಲನವಲನಗಳ ಮೇಲೆ ಕಣ್ಗಾವಲು ಇಡಲಾಗಿದೆ. ಎರಡು ವರ್ಷದಿಂದ ಚಿರತೆ ದಾಳಿ ಬಗ್ಗೆ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಆದರೂ ಯಾವುದೇ ಪ್ರಯೋಜನ ಆಗಿಲಿಲ್ಲ ಎಂದು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಕಿಡಿಕಾರಿದರು. ಮಹಿಳೆಯನ್ನು ಕೊಂದು ಹಾಕಿದ ಬಳಿಕ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆಯು ಈಗ ಆಪರೇಷನ್ ಶುರು ಮಾಡಿದೆ.
ಚಿರತೆ, ಹುಲಿ, ಆನೆ ದಾಳಿ; ಹೆಚ್ಚಾಗುತ್ತಿದೆ ಮಾನವ, ಪ್ರಾಣಿ ಸಂಘರ್ಷ
ಚಿರತೆ ಸೆರೆಗೆ ಗ್ರಾಮಸ್ಥರಿಂದ ಮನವಿ
ಜನರು ಮಾತನ್ನು ಆಲಿಸದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಹಿಳೆಯನ್ನು ಚಿರತೆ ಹೊತ್ತೊಯ್ದಿದ್ದು ವದಂತಿ ಎಂದು ಮೊದಲಿಗೆ ಸುಮ್ಮನಾಗಿದ್ದರು. ಮಹಿಳೆ ಚಿರತೆ ದಾಳಿಗೆ ಒಳಗಾಗಲು ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಮೊದಲೇ ಚಿರತೆಯನ್ನು ಸೆರೆ ಹಿಡಿದಿದ್ದರೆ ಮಹಿಳೆಯ ಜೀವವಾದರೂ ಉಳಿಯುತಿತ್ತು ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು.
ಚಿರತೆ ಸೆರೆಗೆ ಎಂ.ಪಿ.ರೇಣುಕಾಚಾರ್ಯ ಸೂಚನೆ
ಕಳೆದ ಮಂಗಳವಾರ ಕಮಲಾ ಬಾಯಿ ಎನ್ನುವ ಮಹಿಳೆ ಜಮೀನಿನ ಮೆಕ್ಕೆಜೋಳ ಬೆಳೆಯಲ್ಲಿ ಕಳೆ ತೆಗೆಯಲು ಹೋಗಿದ್ದರು. ನ್ಯಾಮತಿ ತಾಲೂಕಿನ ಫಲವನಹಳ್ಳಿ ಗ್ರಾಮದಲ್ಲಿ ಇದ್ದಕ್ಕಿದ್ದಂತೆ ದಾಳಿ ಮಾಡಿದ ಚಿರತೆಯು ಮಹಿಳೆಯನ್ನು ಕೊಂದು ಹಾಕಿತ್ತು. ದಾಳಿ ನಡೆಸಿ ಮಹಿಳೆಯನ್ನು 100 ಮೀಟರ್ ಹೊತ್ತೊಯ್ದು ಜೀವ ತೆಗೆದು ಹೋಗಿತ್ತು. ನಂತರ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅರಣ್ಯ ಇಲಾಖೆಯವರಿಗೆ ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಸೂಚನೆ ನೀಡಿದ್ದರು.
ಅರಣ್ಯ ಇಲಾಖೆ ಘೋಷಿಸಿದ ಪರಿಹಾರ ಎಷ್ಟು?
ಕಮಲಾಬಾಯಿ ಕುಟುಂಬದವರಿಗೆ ಅರಣ್ಯ ಇಲಾಖೆಯ ವತಿಯಿಂದ 7.50 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. ತಿಂಗಳಿಗೆ 2,500 ರೂಪಾಯಿಯಂತೆ 5 ಲಕ್ಷ ಹಣ ನೀಡಲು ಅರಣ್ಯ ಇಲಾಖೆ ನಿರ್ಧರಿಸಿದೆ. ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದು ಬಳ್ಳಾರಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಹೀರಾಲಾಲ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ. ಎರಡು ತಂಡ ಬೋನ್ಗಳ ಮೇಲೆ ನಿಗಾ ಇಡುತ್ತದೆ. ಇನ್ನು ನಾಲ್ಕೈದು ಬೋನ್ಗಳನ್ನು ತರಿಸಲಾಗುತ್ತದೆ. ಪ್ರತಿ ಕಿಲೋ ಮೀಟರ್ಗೆ ಒಂದು ಬೋನ್ ಅನ್ನು ಇಡಲಾಗುವುದು. ಚಿರತೆ ಜಾಡು ಪತ್ತೆ ಹಚ್ಚಿ ಆದಷ್ಟು ಬೇಗ ಸೆರೆ ಹಿಡಿಯುತ್ತೇವೆ. ರೈತರು, ಜನರಿಗೆ ಕಾಡಿಗೆ ಹೋಗಬಾರದು ಎಂಬ ಸೂಚನೆ ನೀಡಲಾಗಿದೆ. ಹೆಜ್ಜೆ ಗುರುತು ಪತ್ತೆ ಹಚ್ಚುವ "ಫುಡ್ ಕೂಂಬಿಂಗ್'' ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.