ಲಂಚ ಪಡೆಯುವಾಗ ಬಲೆಗೆ ಬಿದ್ದ ಗ್ರಾಮ ಲೆಕ್ಕಿಗ, ಕಂದಾಯ ನಿರೀಕ್ಷಕ
ಚನ್ನಗಿರಿ, ಜನವರಿ 9: ಲಂಚಕ್ಕಾಗಿ ಒತ್ತಾಯಿಸಿದ ಗ್ರಾಮಲೆಕ್ಕಿಗ ಹಾಗೂ ಕಂದಾಯ ನಿರೀಕ್ಷಕ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ. ಚನ್ನಗಿರಿ ತಾಲೂಕಿನ ಉಪನಾಯಕನಹಳ್ಳಿ ಗ್ರಾಮದ ನಿವಾಸಿಯೊಬ್ಬರು ಜಮೀನಿನ ಕೆಲಸಕ್ಕೆ ಸಂಬಂಧಪಟ್ಟಂತೆ ಅರ್ಜಿಯೊಂದನ್ನು ಹಾಕಿದ್ದರು. ಅದಕ್ಕಾಗಿ ಹೋಗಿ ಕಚೇರಿಯಲ್ಲಿ ಭೇಟಿ ಸಹ ಮಾಡಿದ್ದರು.
ಆ ವೇಳೆ ಎಸಿಗೆ ಕಡತವನ್ನು ಮಂಡಿಸಲು ಹಣ ನೀಡಬೇಕಾಗುತ್ತದೆ ಎಂದು ಗ್ರಾಮ ಲೆಕ್ಕಿಗ ನವೀನ್ ಹಾಗೂ ಕಂದಾಯ ನಿರೀಕ್ಷಕ ದಿನೇಶಬಾಬು ಕೇಳಿದ್ದರು. ಮತ್ತು ಜಮೀನಿನ ಕೆಲಸ ಮಾಡಿಕೊಡಲು ಹದಿನೈದು ಸಾವಿರ ರುಪಾಯಿ ನೀಡಬೇಕಾಗುತ್ತದೆ ಎಂದು ಲಂಚಕ್ಕಾಗಿ ಒತ್ತಾಯ ಮಾಡಿದ್ದರು. ಈ ಬಗ್ಗೆ ಅರ್ಜಿದಾರರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದರು.[ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಭೂಸ್ವಾಧೀನಾಧಿಕಾರಿ ಎಸಿಬಿ ಬಲೆಗೆ]
ಆ ದೂರಿನ ಅನ್ವಯ ಜನವರಿ 9ರಂದು ಲಂಚ ನೀಡುವುದಾಗಿ ಹೇಳಿದ್ದ ದೂರುದಾರರು, ಅದನ್ನು ಪಡೆಯುವ ವೇಳೆ ಗ್ರಾಮ ಲೆಕ್ಕಿಗ ನವೀನ್ ಹಾಗೂ ಕಂದಾಯ ನಿರೀಕ್ಷಕ ದಿನೇಶ್ ಬಾಬು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇವರಿಬ್ಬರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.