ಅಶೋಕ ರಸ್ತೆಯಲ್ಲಿ ಅಂಡರ್ ಪಾಸ್ ನಿರ್ಮಾಣ: ಈಡೇರಿದ ದಾವಣಗೆರೆ ಜನರ ಬಹುದಶಕಗಳ ಬೇಡಿಕೆ
ದಾವಣಗೆರೆ, ಆಗಸ್ಟ್ 29: ನಗರದ ಜನರ ಬಹುದಿನದ ಬೇಡಿಕೆಯಾದ ಅಶೋಕ ರಸ್ತೆಯಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಈಡೇರುತ್ತಿದೆ. ಕೆಳಸೇತುವೆ ಕಾಮಗಾರಿಯನ್ನು ಸುಮಾರು ರೈಲು ಸಂಚಾರ ಸ್ಥಗಿತಗೊಳಿಸಿ ಭಾನುವಾರದಿಂದ ಆರಂಭಿಸಿರುವ ಕಾಮಗಾರಿ ಇಂದೂ ಮುಂದುವರಿದಿದೆ. ಮೊದಲೇ ತಯಾರಿಸಿ ಇಡಲಾಗಿದ್ದಂಥ ಸಿಮೆಂಟ್ ಬಾಕ್ಸ್ ಗಳನ್ನು ಅಳವಡಿಸುವ ಕಾರ್ಯ ಈಗಾಗಲೇ ಮುಗಿದಿದೆ.
ಅಶೋಕ ರಸ್ತೆಯು ನಿತ್ಯವೂ ಜನಸಂದಣಿಯಿಂದ ಕೂಡಿರುತ್ತದೆ. ವಾಹನ ಸವಾರರು, ಪಾದಚಾರಿಗಳು, ಕಾರುಗಳ ಓಡಾಟಕ್ಕೆ ತುಂಬಾ ತೊಂದರೆಯಾಗಿತ್ತು. ರೈಲು ಆಗಮಿಸುವ ವೇಳೆ ಅಶೋಕ ರಸ್ತೆಯ ರೈಲ್ವೆ ಗೇಟ್ ಬಂದ್ ಮಾಡುತ್ತಿದ್ದ ಕಾರಣ ಟ್ರಾಫಿಕ್ ಜಾಮ್ ಉಂಟಾಗುತಿತ್ತು. ಇದರಿಂದ ಜನರು ಅನುಭವಿಸುತ್ತಿದ್ದ ಕಷ್ಟ ಅಷ್ಟಿಷ್ಟಲ್ಲ. ದಾವಣಗೆರೆ ಮತ್ತು ಹಳೇ ದಾವಣಗೆರೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾದ ಈ ರಸ್ತೆಯಲ್ಲಿ ದೊಡ್ಡ ದೊಡ್ಡದಾದ ಜೆಸಿಬಿಗಳನ್ನು ಇಲ್ಲಿಗೆ ಕರೆಯಿಸಿ ಕಾಮಗಾರಿ ನಡೆಸಲಾಗುತ್ತಿದೆ.
ಬೆಂಗಳೂರು ಮೈಸೂರು ಹೆದ್ದಾರಿ ಮಳೆ: ಸುಗಮ ಸಂಚಾರಕ್ಕೆ ಪೊಲೀಸರ ಸಾಥ್
ರೈಲ್ವೆ ಹಳಿಯ ಅಡಿಯಲ್ಲಿ ಸಿಮೆಂಟ್ ಬಾಕ್ಸ್ ಅಳವಡಿಕೆ ಕಾರ್ಯ ಒಂದೇ ದಿನದಲ್ಲಿ ಪೂರ್ಣಗೊಳಿಸಲಾಗಿದೆ. ಇಂದು ಎಂದಿನಂತೆ ರೈಲುಗಳು ಸಂಚರಿಸಿದವು. ರಸ್ತೆ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಆಗಲು ಇನ್ನು ಒಂದೂವರೆ ತಿಂಗಳು ಬೇಕಾಗುತ್ತದೆ ಎಂದು ರೈಲ್ವೆ ಇಲಾಖೆಯ ಮುಖ್ಯ ಎಂಜಿನಿಯರ್ ಮಂಜುನಾಥ್ ತಿಳಿಸಿದ್ದಾರೆ.
ಕೆಲವು ರೈಲುಗಳ ಸಂಚಾರಕ್ಕೆ ಅವಕಾಶ
ಇನ್ನು ಕೆಳಸೇತುವೆಯಲ್ಲಿ ದೊಡ್ಡದೊಡ್ಡದಾದ ಜೆಸಿಬಿ ಮೂಲಕ ಕೆಲಸ ಆರಂಭಿಸಿದ್ದರಿಂದ ಇದನ್ನು ನೋಡಲು ಜನರು ಸಹ ತಾ ಮುಂದು ನಾ ಮುಂದು ಅಂತಾ ಮುಗಿಬಿದ್ದ ಘಟನೆಯೂ ನಡೆಯಿತು. ರೈಲ್ವೆ ಪೊಲೀಸರು ಜನರನ್ನು ಚದುರಿಸಲು ಹರಸಾಹಸಪಟ್ಟರು. ಇನ್ನು ಕೆಲವರು ಸೆಲ್ಫಿ, ಫೋಟೋ, ವಿಡಿಯೋ ಮಾಡಿಕೊಳ್ಳುತ್ತಿದ್ದದ್ದು ಕಂಡುಬಂದಿತು.
ಇಂದು ಮಳೆ ಬಾರದ ಕಾರಣ ಬೆಳ್ಳಂಬೆಳಿಗ್ಗೆಯಿಂದಲೇ ಕೆಲಸ ವೇಗವಾಗಿ ಸಾಗಿತ್ತು. ಹಳಿಯ ಭಾಗ ಹೊರತುಪಡಿಸಿ ಉಳಿದ ಕೆಲಸಗಳನ್ನೂ ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ. ಈಗಾಗಲೇ ಒಂದು ಭಾಗದಲ್ಲಿ ಸಿಮೆಂಟ್ ಬಾಕ್ಸ್ ಗಳನ್ನು ಅಳವಡಿಸಿ ಕೆಲವು ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಗೇಜ್ ಲೆವಲ್ ಸರಿಪಡಿಸಿದ ಬಳಿಕ ಬೆಳಗಾವಿ - ಮೈಸೂರು ಎಕ್ಸ್ಪ್ರೆಸ್ ಮೊದಲು ಸಂಚರಿಸಿತು.
100 ಕ್ಕೂ ಹೆಚ್ಚು ಜನರಿಂದ ಕೆಲಸ
ಆಂಧ್ರಪ್ರದೇಶದಿಂದ 700 ಕೆ ಜಿ ತೂಕದ ಕ್ರೇನ್, 250 ಕೆಜಿ ತೂಕದ ಕ್ರೇನ್ ಅನ್ನು ತರಿಸಿಕೊಳ್ಳಲಾಗಿದೆ. ನಾಲ್ಕು ಹಿಟಾಚಿ, ಆರು ಟಿಪ್ಪರ್ ಬಳಕೆ ಮಾಡಿ ಕೆಲಸ ನಡೆಯುತ್ತಿದೆ. ಕೆಳ ಸೇತುವೆ ನಿರ್ಮಾಣ ಕೆಲಸದಲ್ಲಿ ಸುಮಾರು 100 ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ಇನ್ನು ಅಧಿಕಾರಿಗಳ ದಂಡೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮೈಸೂರು ವಿಭಾಗದ ಹಿರಿಯ ಅಧಿಕಾರಿ ರೋಹನ್ ಗೊಂಗ್ರೆ, ಹುಬ್ಬಳ್ಳಿ ವಿಭಾಗದ ಟ್ರ್ಯಾಕ್ ಮಿಷನ್ ಮುಖ್ಯ ಅಭಿಯಂತರ ಮುರುಳಿ ಕೃಷ್ಣ, ಇಒ ಬೋಷನ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಹೇಗೆ ನಡೆಯುತ್ತಿದೆ ಎಂಬ ಕುರಿತು ಮಾಹಿತಿ ಪಡೆದರು.
ಕೆಳಸೇತುವೆ ನಿರ್ಮಾಣಕ್ಕೆ 35 ಕೋಟಿ
ಅಶೋಕ ಚಿತ್ರಮಂದಿರದ ಬಳಿ ಅರ್ಧಗಂಟೆಗೊಮ್ಮೆ ರೈಲುಗಳು ಬರುತ್ತಿದ್ದ ಕಾರಣ ಗೇಟ್ ಹಾಕಲಾಗುತಿತ್ತು. ವಾಹನ ಸಂದಣಿ ಜಾಸ್ತಿಯಿದ್ದ ಕಾರಣ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ನಿತ್ಯವೂ ಪರದಾಡುತ್ತಿದ್ದರು. ಜನರಿಗೆ ತುಂಬಾನೇ ಸಮಸ್ಯೆಯಾಗಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳಲು ಕೆಳಸೇತುವೆ ನಿರ್ಮಾಣಕ್ಕೆ 35 ಕೋಟಿ ರೂಪಾಯಿ ಅನುದಾನವನ್ನು ಬಜೆಟ್ನಲ್ಲಿ ಘೋಷಿಸಲಾಗಿತ್ತು.
ತಪ್ಪಿದ ಟ್ರಾಫಿಕ್ ಕಿರಿಕಿರಿ
ಸಂಸದ ಜಿ. ಎಂ. ಸಿದ್ದೇಶ್ವರ್ ಅವರು ಈ ಸಮಸ್ಯೆ ಪರಿಹರಿಸುವ ಭರವಸೆ ನೀಡುತ್ತಲೇ ಬಂದಿದ್ದರು. ಆದ ಕಾರಣ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು, ಜಮೀನುಗಳ ಮಾಲೀಕರ ಜೊತೆ ಸಭೆ ನಡೆಸಿದ್ದರೂ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಸುರೇಶ್ ಅಂಗಡಿ ಅವರು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾಗಿದ್ದಾಗ ಸ್ಥಳಕ್ಕೆ ಬಂದು ವೀಕ್ಷಿಸಿದ್ದರು. ಒಟ್ಟಾರೆ ಈಗ ಅಂಡರ್ ಪಾಸ್ ನಿರ್ಮಾಣ ಒಂದು ಹಂತಕ್ಕೆ ಬಂದಿದ್ದು ಜನರಲ್ಲಿ ಸ್ವಲ್ಪ ನೆಮ್ಮದಿ ತಂದಿದೆ.