ದಾವಣಗೆರೆ; ಮುಷ್ಕರ, ರಸ್ತೆಗಿಳಿದಿದ್ದು 6 ಸರ್ಕಾರಿ ಬಸ್ ಮಾತ್ರ!
ದಾವಣಗೆರೆ, ಡಿಸೆಂಬರ್ 14: ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಸಾರಿಗೆ ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದೆ. ದಾವಣಗೆರೆಯಲ್ಲಿ ಮುಷ್ಕರದ ನಡುವೆಯೇ ಪೊಲೀಸ್ ಭದ್ರತೆಯಲ್ಲಿ ಬಸ್ ಸಂಚಾರ ಆರಂಭಿಸಿವೆ.
Recommended Video
ಸರ್ಕಾರದ ಜೊತೆ ಮುಷ್ಕರ ನಿರತ ನೌಕರರು ಭಾನುವಾರ ರಾತ್ರಿ ಸಭೆ ನಡೆಸಿದ್ದರು. ಆದ್ದರಿಂದ, ಬಸ್ ಸಂಚಾರ ಸೋಮವಾರ ಆರಂಭವಾಗಬಹುದು ಎಂಬ ನಿರೀಕ್ಷೆಯಲ್ಲಿ ಜನರು ನಿಲ್ದಾಣಕ್ಕೆ ಬಂದಿದ್ದರು, ಬಸ್ ಸಂಚಾರವಿಲ್ಲದೇ ಪರದಾಡಿದರು.
ಸೋಮವಾರ ಮುಷ್ಕರ ಕೊನೆಗೊಳ್ಳಲಿದ್ದು ಬಸ್ ಸಂಚಾರ ಆರಂಭವಾಗಲಿದೆ ಎಂಬ ಸುದ್ದಿಗಳನ್ನು ನೋಡಿ ಬಂದಿದ್ದ ಜನರು, ಅಧಿಕಾರಿಗಳ ಬಳಿ ಬಸ್ ಸಂಚಾರ ಯಾವಾಗ ಆರಂಭ? ಎಂದು ವಿಚಾರಿಸುತ್ತಿದ್ದ ದೃಶ್ಯ ದಾವಣಗೆರೆ ಬಸ್ ನಿಲ್ದಾಣದಲ್ಲಿ ಕಂಡು ಬಂತು.
ನೌಕರರ ಮುಷ್ಕರದ ನಡುವೆಯೇ ನಾಲ್ಕು ಸಾರಿಗೆ ನಿಗಮಗಳಲ್ಲಿ ಕೆಲವು ಬಸ್ಗಳು ಸೋಮವಾರ ರಸ್ತೆಗೆ ಇಳಿದಿವೆ. ಸಂಚಾರ ಆರಂಭಿಸಿದ ಬಸ್ಗಳಿಗೆ ಪೊಲೀಸರು ಭದ್ರತೆ ನೀಡಿದ್ದಾರೆ. ಮುಷ್ಕರ ಕೈ ಬಿಡುವಂತೆ ಸರ್ಕಾರ ನೌಕರರಿಗೆ ಮನವಿ ಮಾಡುತ್ತಲೇ ಇದೆ.

6 ಬಸ್ಗಳ ಸಂಚಾರ
"ಸೋಮವಾರ ಬೆಳಗ್ಗೆಯಿಂದ ರಾಣೇಬೆನ್ನೂರಿಗೆ 2, ಹರಿಹರಕ್ಕೆ 2 ಮತ್ತು ಚಿತ್ರದುರ್ಗಕ್ಕೆ 2 ಸೇರಿ ಒಟ್ಟು 6 ಬಸ್ಗಳನ್ನು ಪೊಲೀಸ್ ಭದ್ರತೆಯೊಂದಿಗೆ ಕಳುಹಿಸಿಕೊಡಲಾಗಿದೆ" ಎಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್ ತಿಳಿಸಿದ್ದಾರೆ.

14 ಸಿಬ್ಬಂದಿಗಳು ಸೇವೆಗೆ
ದಾವಣಗೆರೆ 2 ಘಟಕ ಮತ್ತು ಹರಿಹರ ಘಟಕ ಸೇರಿ ದಾವಣಗೆರೆ ಕೆಎಸ್ಆರ್ಟಿಸಿ ವಿಭಾಗದಲ್ಲಿ 1,132 ಜನ ಚಾಲಕರು ಮತ್ತು ನಿರ್ವಾಕರಿದ್ದಾರೆ. ಸೋಮವಾರ ಮಧ್ಯಾಹ್ನ 12 ಗಂಟೆ ತನಕ ಇವರಲ್ಲಿ 14 ಜನ ಸಿಬ್ಬಂದಿಗಳು ಮಾತ್ರ ಸೇವೆಗೆ ಹಾಜರಾಗಿದ್ದಾರೆ.

2 ಗಂಟೆ ಕಾದ ಪ್ರಯಾಣಿಕ
ಹೊಸಪೇಟೆಗೆ ತೆರಳಲು ದಾವಣಗೆರೆ ಬಸ್ ನಿಲ್ದಾಣಕ್ಕೆ ಕೆಟಿಜೆ ನಗರದ ನಿವಾಸಿ ವೀರೇಶ್ ಆಗಮಿಸಿದ್ದರು. "ಮಾಧ್ಯಮಗಳಲ್ಲಿ ಬರುತ್ತಿದ್ದ ಸುದ್ದಿಯನ್ನು ಗಮನಿಸಿ ಬಸ್ ಸಂಚಾರ ಆರಂಭವಾಗಿರಬಹುದು ಎಂದು ತಿಳಿದು ಬಂದೆ. ಇನ್ನೂ ಬಸ್ ಸಂಚಾರ ಆರಂಭವಾಗಿಲ್ಲ. ಆದರೆ, ಅಧಿಕಾರಿಗಳು ಈಗ ಬರುತ್ತೆ, ಆಗ ಬರುತ್ತೆ ಎಂದು ಹೇಳುತ್ತಿದ್ದಾರೆ. ಎರಡು ಗಂಟೆಯಿಂದ ಕಾಯುತ್ತಿರುವೆ" ಎಂದರು.

ಪ್ರಯಾಣದರ ಹೆಚ್ಚಳ
ನೌಕರರ ಪ್ರತಿಭಟನೆಯಿಂದಾಗಿ ಸರ್ಕಾರಿ ಬಸ್ಗಳ ಸಂಚಾರ ಸ್ಥಗಿತವಾಗಿದೆ. ಖಾಸಗಿ ಬಸ್ಗಳು ಸಂಚಾರ ನಡೆಸುತ್ತಿವೆ. ಆದರೆ, ದುಪ್ಪಟ್ಟು ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸೋಮವಾರ ಮಧ್ಯಾಹ್ನ ಸಾರಿಗೆ ಸಂಸ್ಥೆಗಳ ನೌಕರರ ಮುಷ್ಕರ ಅಂತ್ಯಗೊಂಡಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಘೋಷಣೆ ಮಾಡಿದ್ದಾರೆ.












Click it and Unblock the Notifications